Friday, January 29, 2010

ಬರೆಯಬೇಕಿದೆ... ಇಂದಾದರೂ

ಕುಳಿತುಕೊಳ್ಳುವೆ ಏನಾದರೂ ಬರೆಯಲೇಬೇಕೆಂದು
ಪದಗಳು ಅಡಗಿ ಕುಳಿತಿವೆ ಬೆಚ್ಚಗೆ ಪೆನ್ನಿನ ಶಾಯಿಯಲ್ಲಿ
ನನ್ನ ಕವನದಲ್ಲಿನ ದಾರುಣ ಸಾವು ಅವುಗಳಿಗೆ ಬೇಕಿಲ್ಲ
ಒರಗಿದ ಬೆನ್ನಿನ ಭಾರ ತಾಳಲಾರದೆ ಕಿರಗುಟ್ಟುತ್ತಿದೆ ಗೋಡೆಯೂ...

ನಿರ್ವಿಕಾರವಾಗಿ ತನ್ನ ತೆಕ್ಕೆಯಲ್ಲಿ ಭುವಿಯನ್ನು ಸೆಳೆದುಕೊಂಡ ಕತ್ತಲು
ಚಂದಿರನೂ ಕಿಟಕಿಯ ದಾಟಿ ಒಳ ಬರಲು ಹೆದರಿಹನು,
ತಾನೆಲ್ಲಿ ಕವನಕ್ಕೆ ಸ್ಪೂರ್ಥಿಯಾಗುವೆನೋ ಎಂದು ಅವನಿಗೆ
ಬಾಗಿಲ ಸಂದಿಯ ನೆರಳುಗಳು ನನ್ನ ನೋಡಿ ಗಹಗಹಿಸಿವೆ

ಕುಡಿದ ಕಾಫಿಯೂ ಕಂಡಿದೆ ಹೊಟ್ಟೆಯ ತಳವ
ಗಡಿಯಾರದ ಮುಳ್ಳುಗಳು ಮೆಲ್ಲನೆ ನುಣಿಚಿಕೊಳ್ಳುತ್ತಿವೆ
ತಲೆಕೊಡವಿ ಏಳುವೇನು, ಕಚ್ಚುವೆನು ಪೆನ್ನಿನ ತುದಿಯ
ಬೆಳಗೂ ಮೈಮುರಿದು ಆಕಳಿಸತೊಡಗಿದೆ

ನಾನು ಬರೆಯಲಿಲ್ಲ..... ಇಂದೂ
ಗಾಳಿಗೆ ಪಟಪಟಗುಟ್ಟುತ್ತಿರುವ ಹಾಳೆಗಳು ಖಾಲಿ ಖಾಲಿ...

Monday, January 25, 2010

ವರ್ಷದ ಮೊದಲ ಚಿತ್ರ


ಇದು ಈ ವರ್ಷ ಬಿಡಿಸಿದ ಮೊದಲ ಚಿತ್ರ... ಇತ್ತೀಚಿಗೆ ಚಿತ್ರ ಬಿಡಿಸುವ ಆ ಹಲವು ಘಂಟೆಗಳ ಸಮಯವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ.. ಚಿತ್ರ ಕೊನೆಯಲ್ಲಿ ಚಂದವಾಗಿ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕವಿಲ್ಲ. ಬರೋಬ್ಬರಿ ಮೂರು ದಿನ ಕುಳಿತುಕೊಂಡು ಬಿಡಿಸಿದ ಚಿತ್ರವಿದು (೩ ಘಂಟೆ x ೩ ದಿನ). ಇಷ್ಟೊಂದು ತಾಳ್ಮೆಯಿಂದ ಚಿತ್ರ ಬಿದಿಸುತ್ತಿರುವುದು ಇದೆ ಮೊದಲು. ನೀವು ಚಿತ್ರವನ್ನು ನೋಡಿ ಹೇಳಿ ಹೇಗಿದೆಯೆಂದು. ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

Tuesday, January 19, 2010

ಕತ್ತಲು - ನನಗೆ

ನಿಂತಿದ್ದೇನೆ ಗುಮ್ಮನ ಹಾಗೆ ಆವರಿಸಿಕೊಂಡ ಕತ್ತಲ ಮುಂದೆ
ಕತ್ತಲು, ಮಾತಿಲ್ಲದೆ ಮುಗಿದ ಪ್ರೀತಿಯ ನೆನಪಿನ ಹಾಗೆ
ಕಪ್ಪು ಕೋಣೆಯೊಂದರ ಬೀಗ ಕಳೆದುಕೊಂಡ ಬಾಗಿಲ ಹಾಗೆ

ಕತ್ತಲು ಆವರಿಸುತ್ತದೆ ಬೆಳಕಿನ ಮರಣದ ಮರುಘಳಿಗೆಯೇ
ಕತ್ತಲು, ಬಚ್ಚಿಟ್ಟ ನೋವಿಗೆ ಕಣ್ಣೀರು ಒತ್ತರಿಸಿ ಬರುವ ಹಾಗೆ
ಸಂಜೆ ಸೂರ್ಯನನ್ನೇ ನುಂಗುವ ಉನ್ಮತ್ತ ಕಡಲ ಹಾಗೆ

ಬೆಳಕಿನಷ್ಟೇ ಮುಖ್ಯವೆನಿಸುತ್ತದೆ ಈ ಕರಿಕತ್ತಲು
ಸೋತಿಹೆನು ಇಂದು ಈ ಭಯದ ಬಣ್ಣಕ್ಕೆ
ಬೆಳಕು ಬೇಕಿಲ್ಲ ಎನಗೆ
ಕತ್ತಲೇ ತೋರುತಿರುವಾಗ ಹಾದಿಯನು ನನ್ನ ಅಂತರಂಗದೆಡೆಗೆ

Sunday, January 10, 2010

ಒಂದು ಹಿಡಿ ವಿರಹ....

ನನ್ನ ಕಂಗಳ ಕೊಳದಿ ಬಂಧಿ ನೀನು
ಹೊರಹೋಗ ಬಯಸಿದರೆ ಚುಚ್ಚಿಬಿಡು ಈ ಕಂಗಳ
ಕಣ್ಣೀರಿನೊಂದಿಗೆ ದಯಪಾಲಿಸುವೆ ಮುಕ್ತಿಯನು....


ಈ ಕನಸಿನ ಗೋಪುರ ಒಂದುದಿನ ಬೀಳುವುದು
ಎಂದು ಗೊತ್ತಿದ್ದೂ ಕಟ್ಟಿದ್ದು ನನ್ನದೇ ತಪ್ಪು
ನಿನ್ನ ಕನಸಿನ ಚಿತ್ತಾರದ ಬಣ್ಣಗಳಲ್ಲೇ ಲೀನವಾಗಿದ್ದೆ
ಹೃದಯವೇ ಆಳುತ್ತಿತ್ತು; ಬುದ್ದಿಗೆ ಒಂದಿನಿತೂ ಅವಕಾಶವೀಯದೆ


ನಿನ್ನ ನೆನಪಲ್ಲಿ ಬಂದ
ನನ್ನ ನಿಟ್ಟುಸಿರ ತೇವಕ್ಕೆ
ಕಿಟಕಿಯ ಗಾಜೆಲ್ಲ ಮಂಜಾಗಿ...
ಹೊರಗಿನ ವಿಶ್ವವೇ ಅಗೋಚರವಾಗಿ...


ಮೋಡಗಳ ಮಧ್ಯದಿಂದ ತೂರಿಬರುವ
ಸಂಜೆಗೆಂಪಿನ ಸೂರ್ಯನ ಕಿರಣಗಳು ನೀನು....
ಆ ಕಿರಣಗಳ ಪ್ರಖರತೆಗೆ ಕರಗುವ
ಮಂಜಿನ ಬಿಂದುವಾಗಿ ನಾನು...



ನಿನ್ನೆಗಳ ಬಗ್ಗೆ ಏಕೆ ಬೇಸರ
ನಾಳೆಗಳ ಬಗ್ಗೆ ಏಕೆ ಕಾತರ
ಇಂದು ಎಂಬ ಇಂದನ್ನು ಬಾಳು ಹರುಷದಿಂದ
ನಡಿ ಮುಂದಕೆ ಎಂದೂ ಬತ್ತದ ಹುರುಪಿನಿಂದ.


ನಿನ್ನೆ ನೀನು ಕಿವಿಯಲ್ಲಿ ಹೇಳಿದ ಗುಟ್ಟು ...
ನಿನ್ನ ಬಿಸಿಯುಸಿರ ಬೆಚ್ಚನೆಯ ಭಾವ...
ನನ್ನ ಅಂಗಿಗಂಟಿದ ನಿನ್ನ ಕೂದಲಿನ ಕಂಪು..
ನನ್ನ ಎದೆಯಲ್ಲೇ ಉಳಿದ ಒಂದು ಹಿಡಿ ನೆನಪು...
ನಾನು, ನಕ್ಷತ್ರ, ಹಾಗು ಅಗಾಧ ಆಗಸಗಳಷ್ಟೇ ಇಂದು...

Monday, September 7, 2009

ವಿದಾಯ... ಹಾಗೆ ಸಣ್ಣದೊಂದು ನೋವು

"ಶರಶ್ಚಂದ್ರ ಕಲ್ಮನೆ ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದಾನೆ" ಈ ವಿಷಯ ತಿಳಿದರೆ ಏನನ್ನಿಸುತ್ತದೆ ನಿಮಗೆ ? ತೀರ ಹತ್ತಿರದ ಗೆಳೆಯರು ಕರೆ ಮಾಡುತ್ತಾರೆ .. "ಯಾಕ್ರೀ ಶರತ್ ಏನಾಯ್ತು, ಯಾಕೆ ಬರೆಯೋದು ನಿಲ್ಲಿಸಿದ್ದು " ಎಂದು. ಆಗಾಗ ಸಮಯ ಸಿಕ್ಕಾಗ ಬ್ಲಾಗ್ ಓದುವವರು "ಏನೋ ಸಮಸ್ಯೆ ಇರಬೇಕು, ಚಿತ್ರ ಚನ್ನಾಗಿ ಬಿಡಿಸುತ್ತಿದ್ದ, ಬರಹ ಪರವಾಗಿರಲಿಲ್ಲ" ಎಂದುಕೊಂಡಾರು. ಇನ್ನು ಕೆಲವರು "ಗೊತ್ತಿತ್ತು ಇವನ ಹಣೆ ಬರಹ ಇಷ್ಟೇ ಎಂದು.. ಇವನ ಬ್ಲಾಗ್ ಕಡೆ ಕಣ್ಣು ಹಾಯಿಸುವ ಕಷ್ಟ ತಪ್ಪಿತು" ಎಂದರೂ ಎನ್ನಬಹುದು..

ಹೌದು, ಇವೆಲ್ಲದಕ್ಕೂ ಸಿದ್ದನಾಗಿದ್ದೇನೆ... ನನ್ನ ಬ್ಲಾಗ್ ಅನಿರ್ದಿಷ್ಟ ಕಾಲದವರೆಗೆ ನಿರ್ಜೀವಗೊಳ್ಳಲಿದೆ. ಕಾರಣ ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಬರವಣಿಗೆಗಳು ನನಗೇ ಸಂತೋಷ ನೀಡುತ್ತಿಲ್ಲ. ಇದು ಪ್ರಥಮ ಕಾರಣ. ಎರಡನೆಯ ಕಾರಣವೆಂದರೆ ನನಗೆ ಈಗೀಗ ಬರೆಯುವುದಕ್ಕಿಂತ ಓದುವುದೇ ಜಾಸ್ತಿ ಸಂತಸ ನೀಡುತ್ತಿದೆ. ಮನೆಯಲ್ಲಿ ಪುಸ್ತಕಗಳ ಹೊರೆಯೇ ಬಿದ್ದಿದೆ. ಓದಬೇಕು ಎಂಬ ಹಂಬಲ ಹಠಕ್ಕೆ ಬಿದ್ದಿದೆ. ಬ್ಲಾಗ್ ಬರೆಯುವುದನ್ನು ಬಿಟ್ಟೆನೆಂದರೆ ಓದುವುದನ್ನು ಬಿಡುವೆನೆಂದಲ್ಲ..... ನಿಮ್ಮೆಲ್ಲರ ಬರಹಗಳನ್ನು ಓದಿ ಆನಂದಿಸುವೆ.

ಒಂದು ವರ್ಷದಲ್ಲಿ ಬರೆದದ್ದು ಕೇವಲ ೨೮ ಬರಹಗಳು, ಅವುಗಳಲ್ಲಿ ಹಲವು ಚಿತ್ರಗಳು. ನಾನು ಎಣಿಸಿದ್ದಕ್ಕಿಂತ ಜಾಸ್ತಿಯೇ. ಬರೆಯಲೇ ಬೇಕೆಂಬ ಒತ್ತಡದಿಂದ ಎಂದೂ ಬರೆಯಲಿಲ್ಲ. ಬರೆದದ್ದನ್ನು ಎಲ್ಲರೂ ಓದಿ ಕಾಮೆಂಟ್ ಬರೆಯಬೇಕೆಂದು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ಖುಷಿಗೆ ಬರೆದೆ.. ನೀವೆಲ್ಲ ಓದಿದಿರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದಿರಿ. ನನ್ನ ಖುಷಿಯ ಭಾಗವಾದಿರಿ. ಅಷ್ಟು ಸಂತಸ ಸಾಕೆನಗೆ.

ಇಷ್ಟ ಪಟ್ಟು ಬರೆಯಲು ಪ್ರಾರಂಭಿಸಿದ ಎರಡು ಬರಹಗಳು ಕೊನೆಗಾನದೆ ಹಾಗೆ ನಿಂತಿವೆ. ತಾಳ್ಮೆಯನ್ನು ಮೈ ಮೇಲೆ ಎಳೆದುಕೊಂಡು ರಚಿಸಲು ಕುಳಿತ ಚಿತ್ರವೊಂದು ಕಪ್ಪು ಗೆರೆಗಳ ಮಧ್ಯೆ ಹಾಗೆ ಧ್ಯಾನಸ್ಥವಾಗಿದೆ. ಎಂದಾದರೂ ಇವೆಲ್ಲ ತಮ್ಮ ಕೊನೆಯ ತೀರವನ್ನು ಸೇರಿದರೆ, ನನಗೆ ಸಂತೃಪ್ತಿ ಕೊಟ್ಟರೆ ಮತ್ತೆ ಬ್ಲಾಗಿಗೆ ಜೀವ ಬಂದರೂ ಬರಬಹುದು. ಬ್ಲಾಗನ್ನು ಡಿಲೀಟ್ ಮಾಡುವುದಿಲ್ಲ. ಬರಹವನ್ನು ನಿಲ್ಲಿಸುವುದು ನನ್ನ ಉದ್ದೇಶವೂ ಅಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ. ಈ ಯೋಜನೆ ನೆನ್ನೆ ಮೊನ್ನೆಯದಲ್ಲ. ಹಲವು ತಿಂಗಳುಗಳ ಮೊದಲೇ ಮೊಳಕೆಯೊಡೆದು ಮರವಾಗಿ ಬೆಳದದ್ದು.

ನಾನು ಬರೆಯಲು ಪ್ರಾರಂಭಿಸಿದಾಗಿನಿಂದ ನನ್ನನ್ನು ತಿದ್ದಿ-ತೀಡಿ, ನನ್ನ ಬರಹವನ್ನು ಓದಿ ಸಂತೋಷಪಟ್ಟು, ಚಿತ್ರಗಳಿಗೆ ಹೃದಯದಲ್ಲಿ ಜಾಗ ಒದಗಿಸಿ, ಕೇವಲ ಸಹಬ್ಲಾಗಿಗರಾಗಿ ಉಳಿಯದೆ ನನ್ನನ್ನು ಸ್ನೇಹದ ತೆಕ್ಕೆಯ ಒಳಗೆಳೆದುಕೊಂಡ ಸ್ನೇಹಿತರಿಗೆ ಹಾಗು ಬ್ಲಾಗ್ ಕಡೆ ಕಣ್ಣು ಹಾಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಮತ್ತೆ ಸಿಗುವೆ...


ಶರಶ್ಚಂದ್ರ ಕಲ್ಮನೆ