Friday, April 17, 2009

ಓಡಿ ಹೋದವನ ಒಂದು ಪತ್ರ.....



ನೀವು ಈ ಪತ್ರ ಓದುತ್ತಿರುವ ಹೊತ್ತಿಗೆ ನಾನು ಎಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಈ ಪತ್ರ ಬರೆಯುವ ಅಗತ್ಯತೆ ಇರಲಿಲ್ಲ. ನನ್ನ ಮನದಲ್ಲಿ ಇದ್ದುದನ್ನು ಬಾಯಿಮಾತಲ್ಲಿ ಹೇಳಲಾಗದೆ ಅಕ್ಷರಗಳ ಸಹಾಯ ಪಡೆಯುತ್ತಿದ್ದೇನೆ. ನಾನು ಹೀಗೆ ಓಡಿಹೊಗುತ್ತಿರಲು ಈಗ ಜಿನುಗುತ್ತಿರುವ ಮಳೆಯೂ ಕಾರಣವಾಗಿರಬಹುದು. ಈ ಮಳೆಯೇ ಹೀಗೆ, ಎಲೆಯ ಮೇಲಿನ ಧೂಳನ್ನೆಲ್ಲ ತೊಳೆದಂತೆ ನೆನಪಿನ ಗಂಟನ್ನು ಸಡಲಿಸುತ್ತದೆ... ಇದೊಂದು ನೆಪವಷ್ಟೇ.





ಓಡಿ ಹೋಗುತ್ತಿರಲು ಕಾರಣ ಒಂದು ಬೇಕಲ್ಲವೇ... ಹೆದರಬೇಡಿ, ವೈರಾಗ್ಯ ಅಂತೂ ಬಂದಿಲ್ಲ. ಹ್ಞಾ! ತಾತ್ಕಾಲಿಕ ವೈರಾಗ್ಯ ಇದ್ದರೂ ಇರಬಹುದು. ಬೇಸತ್ತಿದ್ದೇನೆ ಈ ಜೀವನದಿಂದ. ಅದೇ ಅರ್ಥೈಸಿಕೊಳ್ಳಲು ಆಗದ ಜನರು, ಒಗ್ಗದ ಅವರ ತೋರಿಕೆಯ ಮಾತುಗಳು. ಇಲ್ಲಿ ನಂಬಿಕೆ, ಪ್ರೀತಿ, ಗೆಳೆತನ, ಆತ್ಮೀಯತೆ ಎಲ್ಲ ತೋರಿಕೆಗೆ ಮಾತ್ರ. ಬಹುಶ ಒತ್ತಡ ಹಾಗು ಪರಿಸ್ಥಿತಿಗಳು ಜನರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರಬಹುದು. ಹಾಗೆ ಆಗಿದ್ದೇ ಆದರೆ ನಾವು ಮಾನವರು ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ?? ನನಗೇ ಯೋಗ್ಯತೆ ಇಲ್ಲದೆ ಇರಬಹುದು ಈ ಸಮಾಜದಲ್ಲಿ ಜೀವಿಸಲು.. ನಾನು ಕಲ್ಪಿಸಿಕೊಂಡಿರುವ ಜೀವನದ ಅರ್ಥವೇ ತಪ್ಪಿದ್ದರೂ ಇರಬಹುದು. ನನಗೇ ಏಕಾಂತದ ಅಗತ್ಯವಿದೆ ಎನ್ನಿಸತೊಡಗಿದೆ. ಇದು ಇಡಿ ಜೀವನಕ್ಕೂ ಅನ್ವಯಿಸುವುದಿಲ್ಲ, ಕೇವಲ ದಿನಗಳ ಮಟ್ಟಿಗೆ. ನನ್ನನ್ನು ನಾನು ಅರಿಯಲು ಅಥವಾ ಈ ಜಗತ್ತಿಗೆ ತಕ್ಕಂತೆ ಬದಲಿಸಿಕೊಳ್ಳುವವರೆಗೆ ನಾನು ಒಂಟಿಯಾಗಿರಬೇಕಿದೆ.





ಕಣ್ಣು ಮುಚ್ಚಿಕೊಂಡು ಕರ್ಣಾಟಕದ ಭೂಪಟದ ಮೇಲೆ ಬೆರಳು ಆಡಿಸುತ್ತಿರುವೆ, ಯಾವ ಜಾಗದಲ್ಲಿ ಬೆರಳು ನಿಲ್ಲುತ್ತದೆಯೋ ಅಲ್ಲಿಗೆ ನನ್ನ ಪಯಣ. ನನಗೇ ಆ ಊರು ಸುಂದರವಾಗಿರಬೇಕೆಂದು ಏನು ಇಲ್ಲ, ಇಲ್ಲಿಂದ ಮುಕ್ತಿ ಬೇಕಾಗಿದೆ ಅಷ್ಟೇ. ಭಯ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಿಂತಿರುಗುವೆ. ನನ್ನದೇ ಆದ ಮನಸ್ಸೊಂದಿದೆ, ಅದಕ್ಕೆ ಆದ ಅಗತ್ಯತೆಗಳಿವೆ. ನಿಮ್ಮೆಲ್ಲರ ಮಾತನ್ನೂ ಕೇಳಿದಂತೆ ನನ್ನ ಮನಸ್ಸಿನ ಮಾತನ್ನೂ ಕೇಳಬೇಕಿದೆ. ಬಿಟ್ಟು ಹೋದ ನಿರೀಕ್ಷೆಗಳಿಗೆ ನಾನೇ ಜವಾಬ್ದಾರ ಎಂಬ ಅರಿವು ನನಗಿದೆ.





ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು
ತುಂಬು ಹೊಳೆಯಂತೆ ಗಂಭೀರವಾಗಿ ಹರಿಯುತ್ತಲೇ ಇದೆ
ಒಳಗೆ ಎಂದೂ ಮುಗಿಯದ ಹಾಡು
ಜಿ.ಎಸ್. ಶಿವರುದ್ರಪ್ಪ

ಇತಿ,
ನಿಮ್ಮ ಪ್ರೀತಿಯ.....