Monday, September 7, 2009

ವಿದಾಯ... ಹಾಗೆ ಸಣ್ಣದೊಂದು ನೋವು

"ಶರಶ್ಚಂದ್ರ ಕಲ್ಮನೆ ಬ್ಲಾಗ್ ಬರೆಯುವುದನ್ನು ನಿಲ್ಲಿಸಿದ್ದಾನೆ" ಈ ವಿಷಯ ತಿಳಿದರೆ ಏನನ್ನಿಸುತ್ತದೆ ನಿಮಗೆ ? ತೀರ ಹತ್ತಿರದ ಗೆಳೆಯರು ಕರೆ ಮಾಡುತ್ತಾರೆ .. "ಯಾಕ್ರೀ ಶರತ್ ಏನಾಯ್ತು, ಯಾಕೆ ಬರೆಯೋದು ನಿಲ್ಲಿಸಿದ್ದು " ಎಂದು. ಆಗಾಗ ಸಮಯ ಸಿಕ್ಕಾಗ ಬ್ಲಾಗ್ ಓದುವವರು "ಏನೋ ಸಮಸ್ಯೆ ಇರಬೇಕು, ಚಿತ್ರ ಚನ್ನಾಗಿ ಬಿಡಿಸುತ್ತಿದ್ದ, ಬರಹ ಪರವಾಗಿರಲಿಲ್ಲ" ಎಂದುಕೊಂಡಾರು. ಇನ್ನು ಕೆಲವರು "ಗೊತ್ತಿತ್ತು ಇವನ ಹಣೆ ಬರಹ ಇಷ್ಟೇ ಎಂದು.. ಇವನ ಬ್ಲಾಗ್ ಕಡೆ ಕಣ್ಣು ಹಾಯಿಸುವ ಕಷ್ಟ ತಪ್ಪಿತು" ಎಂದರೂ ಎನ್ನಬಹುದು..

ಹೌದು, ಇವೆಲ್ಲದಕ್ಕೂ ಸಿದ್ದನಾಗಿದ್ದೇನೆ... ನನ್ನ ಬ್ಲಾಗ್ ಅನಿರ್ದಿಷ್ಟ ಕಾಲದವರೆಗೆ ನಿರ್ಜೀವಗೊಳ್ಳಲಿದೆ. ಕಾರಣ ಹೇಳಿಕೊಳ್ಳುವಂತದ್ದು ಏನಿಲ್ಲ. ನನ್ನ ಬರವಣಿಗೆಗಳು ನನಗೇ ಸಂತೋಷ ನೀಡುತ್ತಿಲ್ಲ. ಇದು ಪ್ರಥಮ ಕಾರಣ. ಎರಡನೆಯ ಕಾರಣವೆಂದರೆ ನನಗೆ ಈಗೀಗ ಬರೆಯುವುದಕ್ಕಿಂತ ಓದುವುದೇ ಜಾಸ್ತಿ ಸಂತಸ ನೀಡುತ್ತಿದೆ. ಮನೆಯಲ್ಲಿ ಪುಸ್ತಕಗಳ ಹೊರೆಯೇ ಬಿದ್ದಿದೆ. ಓದಬೇಕು ಎಂಬ ಹಂಬಲ ಹಠಕ್ಕೆ ಬಿದ್ದಿದೆ. ಬ್ಲಾಗ್ ಬರೆಯುವುದನ್ನು ಬಿಟ್ಟೆನೆಂದರೆ ಓದುವುದನ್ನು ಬಿಡುವೆನೆಂದಲ್ಲ..... ನಿಮ್ಮೆಲ್ಲರ ಬರಹಗಳನ್ನು ಓದಿ ಆನಂದಿಸುವೆ.

ಒಂದು ವರ್ಷದಲ್ಲಿ ಬರೆದದ್ದು ಕೇವಲ ೨೮ ಬರಹಗಳು, ಅವುಗಳಲ್ಲಿ ಹಲವು ಚಿತ್ರಗಳು. ನಾನು ಎಣಿಸಿದ್ದಕ್ಕಿಂತ ಜಾಸ್ತಿಯೇ. ಬರೆಯಲೇ ಬೇಕೆಂಬ ಒತ್ತಡದಿಂದ ಎಂದೂ ಬರೆಯಲಿಲ್ಲ. ಬರೆದದ್ದನ್ನು ಎಲ್ಲರೂ ಓದಿ ಕಾಮೆಂಟ್ ಬರೆಯಬೇಕೆಂದು ನಿರೀಕ್ಷಿಸಿಯೂ ಇರಲಿಲ್ಲ. ನನ್ನ ಖುಷಿಗೆ ಬರೆದೆ.. ನೀವೆಲ್ಲ ಓದಿದಿರಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದಿರಿ. ನನ್ನ ಖುಷಿಯ ಭಾಗವಾದಿರಿ. ಅಷ್ಟು ಸಂತಸ ಸಾಕೆನಗೆ.

ಇಷ್ಟ ಪಟ್ಟು ಬರೆಯಲು ಪ್ರಾರಂಭಿಸಿದ ಎರಡು ಬರಹಗಳು ಕೊನೆಗಾನದೆ ಹಾಗೆ ನಿಂತಿವೆ. ತಾಳ್ಮೆಯನ್ನು ಮೈ ಮೇಲೆ ಎಳೆದುಕೊಂಡು ರಚಿಸಲು ಕುಳಿತ ಚಿತ್ರವೊಂದು ಕಪ್ಪು ಗೆರೆಗಳ ಮಧ್ಯೆ ಹಾಗೆ ಧ್ಯಾನಸ್ಥವಾಗಿದೆ. ಎಂದಾದರೂ ಇವೆಲ್ಲ ತಮ್ಮ ಕೊನೆಯ ತೀರವನ್ನು ಸೇರಿದರೆ, ನನಗೆ ಸಂತೃಪ್ತಿ ಕೊಟ್ಟರೆ ಮತ್ತೆ ಬ್ಲಾಗಿಗೆ ಜೀವ ಬಂದರೂ ಬರಬಹುದು. ಬ್ಲಾಗನ್ನು ಡಿಲೀಟ್ ಮಾಡುವುದಿಲ್ಲ. ಬರಹವನ್ನು ನಿಲ್ಲಿಸುವುದು ನನ್ನ ಉದ್ದೇಶವೂ ಅಲ್ಲ, ಅದು ನನ್ನಿಂದ ಸಾಧ್ಯವೂ ಇಲ್ಲ. ಈ ಯೋಜನೆ ನೆನ್ನೆ ಮೊನ್ನೆಯದಲ್ಲ. ಹಲವು ತಿಂಗಳುಗಳ ಮೊದಲೇ ಮೊಳಕೆಯೊಡೆದು ಮರವಾಗಿ ಬೆಳದದ್ದು.

ನಾನು ಬರೆಯಲು ಪ್ರಾರಂಭಿಸಿದಾಗಿನಿಂದ ನನ್ನನ್ನು ತಿದ್ದಿ-ತೀಡಿ, ನನ್ನ ಬರಹವನ್ನು ಓದಿ ಸಂತೋಷಪಟ್ಟು, ಚಿತ್ರಗಳಿಗೆ ಹೃದಯದಲ್ಲಿ ಜಾಗ ಒದಗಿಸಿ, ಕೇವಲ ಸಹಬ್ಲಾಗಿಗರಾಗಿ ಉಳಿಯದೆ ನನ್ನನ್ನು ಸ್ನೇಹದ ತೆಕ್ಕೆಯ ಒಳಗೆಳೆದುಕೊಂಡ ಸ್ನೇಹಿತರಿಗೆ ಹಾಗು ಬ್ಲಾಗ್ ಕಡೆ ಕಣ್ಣು ಹಾಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಮತ್ತೆ ಸಿಗುವೆ...


ಶರಶ್ಚಂದ್ರ ಕಲ್ಮನೆ