Monday, February 15, 2010

ಸಾಲುಗಳು... ಸುಮ್ಮನೆ...

ಬಸ್ ನಿಲ್ದಾಣದ ಕೆಂಪು ಧೂಳನ್ನು ಮೆತ್ತಿಕೊಂಡ ಲಂಟಾನ ಪೊದೆಗಳಂತೆ ಮೌನ ಹಾಗು ತಾಳ್ಮೆಯ ಪ್ರತೀಕಗಳಾಗಿ ಕಾಯುತಿಹರು ತಮ್ಮ ತಮ್ಮ ನಿಶ್ಚಿತವಲ್ಲದ ಬಸ್ಸುಗಳಿಗೆ ಪ್ರಯಾಣಿಕರಿಲ್ಲಿ...

ಶನಿವಾರದ ಮಾರ್ನಿಂಗ್ ಕ್ಲಾಸಿಗೆ ಲಘುಬಗೆಯಲ್ಲಿ ಹೆಜ್ಜೆ ಹಾಕುತಿರುವ ಎರಡು ಜಡೆಯ ಪುಟ್ಟ ಹುಡುಗಿಯರ ಮೇಲೆ ಕೊಂಚ ಕೊಂಚವಾಗಿ ಉದಯಿಸುತಿಹನು ರವಿಯು...

ಬೆಳಗಿನ ಜಾವದವರೆಗೂ ಓದಿದ ಪಾಠಗಳೆಲ್ಲ ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟ ಕಂಗಳ ಮಂಪರಿನಲ್ಲಿ ಕಳೆದು ಹೋಗುತ್ತಿರಲು...

ಒಂದು ಸಾಮಾನ್ಯ ಮಳೆಗಾಲದ ದಿನದಂದು ಪುಟ್ಟನೋಬ್ಬನ ಕೈ ಇಂದ ಜಾರಿದ ಕಾಗದದ ದೋಣಿಯೊಂದು ಚರಂಡಿಯ ನೀರಿನ ವೇಗದೊಂದಿಗೆ ಹೋರಾಡುತ್ತಾ ತನ್ನ ತೀರವನ್ನು ಸೇರುವ ತವಕದಲ್ಲಿ....

ಅತ್ತ ಗಣಹೋಮ ಭರ್ಜರಿಯಾಗಿ ಸಾಗುತ್ತಿದೆ, ಇತ್ತ ಹಸಿದ ಹೊಟ್ಟೆಯ ಮಕ್ಕಳ ಕಣ್ಣುಗಳಲ್ಲಿ ಅಗ್ನಿಯ ಮಡಿಲು ಸೇರುತ್ತಿರುವ ಮೋದಕಗಳ ಲೆಕ್ಕ ಏರುತ್ತಿದೆ.

ಮನೆಯೊಂದು ಸಂತಸದಲಿ ಮುಳುಗಿರಲು, ಮನೆಯ ಮಗಳು ಇನ್ನು ಮೂರು ದಿನಗಳಲ್ಲಿ ತಾನು ಓಡಿಹೋಗುವ ಹುಡುಗನ ಕುರಿತು ಯೋಚಿಸುತಿಹಳು. ವಿಷಯವನ್ನು ಬಲ್ಲ ಅವಳ ಪುಟ್ಟ ತಮ್ಮ ಕುಟುಂಬದ ಈ ನಗುವಿನಲ್ಲಿ ಸಿಗದ ಯಾವ ಸುಖವನ್ನು ಅಕ್ಕ ಅರಸುತಿರಬಹುದು ಎಂದು ನಿಟ್ಟುಸಿರ ಬಿಟ್ಟಿಹನು...

ಯಾವುದೋ ದೂರು ಹೇಳುವ ಸಲುವಾಗಿ ಕಾಲ್ ಸೆಂಟರ್ಗೆ ಫೋನಾಯಿಸಿದಾಗ, ಆ ಕಡೆಯಿಂದ ಬಂದ ಧ್ವನಿಯ ಇಂಪಿಗೆ ಸೋತು ಹೇಳಬೇಕಿದ್ದ ದೂರನ್ನೇ ಮರೆತ ಆ ಕ್ಷಣ...

ಕಣ್ಣಂಚಿನ ಆ ಕಪ್ಪು ಕಾಡಿಗೆ ನಿನ್ನ ಕಣ್ಣಿಗಷ್ಟೇ ಅಂದವೇ ? ಗೊತ್ತಿಲ್ಲ ನನಗೆ, ಬೇರೆ ಕಣ್ಣುಗಳನ್ನು ನೋಡುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ. .

13 comments:

Anonymous said...

ಸಕ್ಕತ್ ರೀ ಶರತ್,

ಗಣಹೋಮದ್ದು, ಕಾಲ್ ಸೆಂಟರ್ ದು ಎಲ್ಲದಕ್ಕೂ ಕಲಶದಂತೆ ಕಾಡಿಗೆ ದ್ದು.

ಎಕ್ಸಲೆಂಟ್!

Ittigecement said...

ಮಸ್ತ್ ಇವೆ ಪ್ರತಿ ಸಾಲುಗಳು..

ನೋಡುವ..
ಅನುಭವಿಸುವ
ಕಣ್ಣುಗಳಿದ್ದಾಗ..
ಪ್ರತಿ ಸಾಲುಗಳೂ... ಮುತ್ತಿನ ಸರದಂತೆ...!!

ಅಭಿನಂದನೆಗಳು.. ಶರತ್..!

Ranjita said...

ಚನ್ನಾಗಿದೆ ಸಾಲುಗಳು :)

ಸುಮ said...

ಒಳ್ಳೆಯ ಸಾಲುಗಳು ಶರತ್ , ಗಣಹೋಮ.....ಸಾಲು ತುಂಬ ಅರ್ಥಪೂರ್ಣವಾಗಿದೆ.

ತೇಜಸ್ವಿನಿ ಹೆಗಡೆ said...

ಎಲ್ಲಾ ಸಾಲುಗಳೂ ಮನಸೊಳಗೆ ಹೊಕ್ಕು ಭಾವನೆಗಳನ್ನು ತಟ್ಟುವಂತಿವೆ. ತುಂಬಾ ಚೆನ್ನಾಗಿವೆ.

ಅದರಲ್ಲೂ-

"ಅತ್ತ ಗಣಹೋಮ ಭರ್ಜರಿಯಾಗಿ ಸಾಗುತ್ತಿದೆ, ಇತ್ತ ಹಸಿದ ಹೊಟ್ಟೆಯ ಮಕ್ಕಳ ಕಣ್ಣುಗಳಲ್ಲಿ ಅಗ್ನಿಯ ಮಡಿಲು ಸೇರುತ್ತಿರುವ ಮೋದಕಗಳ ಲೆಕ್ಕ ಏರುತ್ತಿದೆ." - Excellent!

ಸಾಗರಿ.. said...

ಹಾಯ್,
ಸೂಕ್ಷ್ಮವಾದ ನಿತ್ಯ ಜೀವನದ ಕೆಲವು ಎಳೆಗಳನ್ನು ಒಂದೇ ಸಾಲಲ್ಲಿ ಬಿಡಿಸಿಟ್ಟಿದ್ದೀರಿ. ಖುಷಿ ಕೊಟ್ಟಿತು.

ಸಾಗರಿಯಿಂದ.

ಸಾಗರಿ.. said...

ಹಾಯ್,
ಸೂಕ್ಷ್ಮವಾದ ನಿತ್ಯ ಜೀವನದ ಕೆಲವು ಎಳೆಗಳನ್ನು ಒಂದೇ ಸಾಲಲ್ಲಿ ಬಿಡಿಸಿಟ್ಟಿದ್ದೀರಿ. ಖುಷಿ ಕೊಟ್ಟಿತು.

ಸಾಗರಿಯಿಂದ.

Anonymous said...

"ಮನೆಯೊಂದು ಸಂತಸದಲಿ ಮುಳುಗಿರಲು, ಮನೆಯ ಮಗಳು ಇನ್ನು ಮೂರು ದಿನಗಳಲ್ಲಿ ತಾನು ಓಡಿಹೋಗುವ ಹುಡುಗನ ಕುರಿತು ಯೋಚಿಸುತಿಹಳು. ವಿಷಯವನ್ನು ಬಲ್ಲ ಅವಳ ಪುಟ್ಟ ತಮ್ಮ ಕುಟುಂಬದ ಈ ನಗುವಿನಲ್ಲಿ ಸಿಗದ ಯಾವ ಸುಖವನ್ನು ಅಕ್ಕ ಅರಸುತಿರಬಹುದು ಎಂದು ನಿಟ್ಟುಸಿರ ಬಿಟ್ಟಿಹನು..."
ಏನು ಸಾಲುಗಳು ಶರತ್, ಜೀವನಾನುಭವವನ್ನು ಎಳೆ ಎಳೆಯಾಗಿ ಬಿಡಿಸಿಟ್ಟೀದ್ದೀರಾ..ಓದಿದ್ರೆ ನಿಮಗೆ ಬಹಳ ವಯಸ್ಸಾಗಿರಬೇಕು ಅನ್ನಿಸುತ್ತೆ!!

good work.. keep it alive!!

Subrahmanya said...

ನಿಮ್ಮ ಬರವಣಿಗೆಯ ಶೈಲಿಯೇ ವಿಭಿನ್ನವಾಗಿದೆ. ತುಂಬಾ ಇಷ್ಟವಾಯ್ತು. ವಾಸ್ತವವನ್ನು ಹೇಳುವ ರೀತಿ ಸೊಗಸಾಗಿದೆ. ಧನ್ಯವಾದ

ಜಿತ said...

ಮೌನಕ್ಕೆ ಸಾಹಿತ್ಯದ ಸಾಂಗತ್ಯ ನೀಡುವ ಕಲೆ ನಿಮಗೆ ಕರಗತವಾಗಿದೆ. ನಿಮ್ಮ ಕಲ್ಪನೆಗಳು ಕೂಡ ಅಮೋಘ. ಸಾಹಿತ್ಯದ ತುಡಿತ ಹಾಗೂ ದುಡಿತ ಕೊನೇವರೆಗು ಸಾಗಲಿ.....

ಮನಸಿನಮನೆಯವನು said...

'ಶರಶ್ಚಂದ್ರ ಕಲ್ಮನೆ ' ಅವ್ರೆ..,

ಕೊನೆ ಸಾಲು ಮಸ್ತ್ !


Blog is Updated: http:/manasinamane.blogspot.com

Rajesh Manjunath - ರಾಜೇಶ್ ಮಂಜುನಾಥ್ said...

ವಾರೆ ವ್ಹಾ!!! ಕಲಾವಿದರ ಕುಂಚಕ್ಕಿಂತ ಲೇಖನಿ ಇನ್ನೂ ಸೊಗಸಾಗಿ ನರ್ತಿಸಿದೆ ಇಲ್ಲಿ. ಶರತ್ ಸಾಲುಗಳು ಇಷ್ಟವಾಯಿತು.

ಮನಮುಕ್ತಾ said...

ವಾಸ್ತವಿಕತೆಯನ್ನು ಬಾವನೆಯಲ್ಲಿ ಮುಳುಗಿಸಿ ಬ೦ದಿವೆ ಸು೦ದರವಾದ ಸಾಲುಗಳು..
ತು೦ಬಾ ಚೆನ್ನಾಗಿದೆ.