Wednesday, May 7, 2008

ಯಾರು ಹಿತವರು ನಿನಗೆ ಈ ಮೊವರೊಳಗೆ











ಮೇಲೆ ಎರಡು ಜಾಹೀರಾತುಗಳ ಚಿತ್ರಗಳಿವೆ. ಮೊನ್ನೆ (ಸೋಮವಾರ ೫, ೨೦೦೮) ಡೆಕ್ಕನ್ನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಕ್ರಮವಾಗಿ ೨ ಹಾಗು ೫ ನೇ ಪುಟದಲ್ಲಿ ಪ್ರಕಟವಾದ ಚುನಾವಣಾ ಪ್ರಚಾರದ ಜಾಹೀರಾತುಗಳು. ನಮ್ಮ ರಾಜಕೀಯ ಪಕ್ಷಗಳು ಎಷ್ಟು ಕೆಳಮಟ್ಟಕ್ಕೆ ಇಳಿದಿವೆ ಎಂಬುದನ್ನು ಸೂಚಿಸುತ್ತಿವೆ ಇವು.

ಕಾಂಗ್ರೆಸ್ ಪಕ್ಷದ ಜಾಹೀರಾತಿಗೆ ಮೊದಲು ಬರೋಣ. ಇಡೀ ಭಾರತ ದೇಶವೇ ತಲೆತಗ್ಗಿಸುವಂತ ಘಟನೆ ಕಂದಾಹಾರಿನ ಪ್ರಕರಣ. ಬಿಜೆಪಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂಬುದು ಕಾಂಗ್ರೆಸ್ಸಿಗರ ಆರೋಪ. ಹೌದು ಈ ಪ್ರಕರಣದಲ್ಲಿ ರಕ್ಷಣಾ ಲೋಪ ಇದ್ದದ್ದು ನಿಜ. ಆದರೆ ಒಂದು ದೇಶ ತಲೆತಗ್ಗಿಸುವಂತೆ ಮಾಡಿದ ವಿಷಯವನ್ನು ಜಾಹೀರಾತಿನಲ್ಲಿ ಹಾಕಿಕೊಳ್ಳುವ ತೆವಲು ಇವರಿಗೆ ಏನಿತ್ತೋ ಕಾಣೆ. ಇದನ್ನು ನೋಡಿದರೆ ಇವರಿಗೂ ಈ ದೇಶಕ್ಕೊ ಏನೂ ಸಂಭಂದವೇ ಇಲ್ಲ ಎಂದಾಯ್ತು. ದೇಶದ ಜನರು ನೆನಪಿಸಿಕೊಳ್ಳಬಾರದ ವಿಷಯವನ್ನು ಜಾಹೀರಾತಿಗೆ ಬಳಸಿಕೊಂಡ ಕಾಂಗ್ರೆಸಿನ ನೈತಿಕತೆಗೆ ಹಿಡಿದ ಕನ್ನಡಿ ಈ ಜಾಹೀರಾತು. ಒಂದೊಮ್ಮೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೆ ಪ್ರಯಾಣಿಕರು ಸತ್ತರೆ ಸಾಯಲಿ ಎಂದು ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸದೆ ಇರುತ್ತಿದ್ದರೆ? ತಪ್ಪು ಆಗಿದ್ದರ ಬಗ್ಗೆ ಇವರಿಗೆ ಯಾವ ಯೋಚನೆಯೂ ಇಲ್ಲ. ಬದಲಾಗಿ ಅದನ್ನು ತಮ್ಮ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ಕೀಳು ಯೋಚನೆ ಇವರದ್ದು.

ಅಕ್ಷಾಯ್ ಚಿನ್ ಹೆದ್ದಾರಿ ಪತ್ತೆಯಾದಾಗ ' ಹುಲ್ಲುಕಡ್ಡಿಯು ಬೆಳೆಯದ ಜಾಗವದು ' ಎಂದಿದ್ದ ನೆಹರೂ ತಮ್ಮ ಮೊರ್ಖತನದಿಂದ ಇಡೀ ದೇಶದ ಮರ್ಯಾದೆಯನ್ನು ಹರಾಜು ಹಾಕಿದ್ದರು. 'ಭಾರತ-ಚೀನಾ ಭಾಯಿ ಭಾಯಿ' ಎಂದು ಜಪಿಸುತ್ತಾ ೧೯೬೨ರಲ್ಲಿ ದೇಶವನ್ನು ಚೀನಾದ ಪಾದಕ್ಕೆ ಬಿಟ್ಟುಕೊಟ್ಟ ನೆಹರೂ ಕಾಂಗ್ರೆಸ್ಸಿಗರೆ ಅಲ್ಲವೆ? ತನ್ನ ಮಗಳು ಇಂದಿರಾ ಗಾಂಧಿಯನ್ನು ಗದ್ದುಗೆಗೆ ಏರಿಸಲೋಸ್ಕರ ಶಾಸ್ತ್ರಿಯವರನ್ನು ಕಾಡಿದ ನೆಹರೂಗೆ ಎಷ್ಟು ನೈತಿಕತೆ ಇತ್ತು ? ಹೀಗೆ ಬರೆಯುತ್ತ ಹೋದರೆ ಪುಟಗಳಷ್ಟು ಬರೆಯಬಹುದು. ಇನ್ನೊಬ್ಬರ ಬಗ್ಗೆ ಬೆರಳು ತೋರುವ ಮೊದಲು ತಮ್ಮ ಕಚ್ಚೆ ಗಟ್ಟಿ ಇದೆಯೆ ಎಂದು ನೋಡಿಕೊಳ್ಳುವುದು ಒಳಿತು. ಹಣದುಬ್ಬರವನ್ನು ಕಟ್ಟಿಹಾಕಲು ಹೆಣಗುತ್ತಿರುವ ಇವರಿಗೆ ಇನ್ನೊಬ್ಬರ ಐಬು ಹುಡುಕೋ ಚಪಲ.

ನಾನು ಬಲಪಂಥೀಯನೂ ಅಲ್ಲ, ಕಾಂಗ್ರೆಸ್ ವಿರೋಧಿಯೂ ಅಲ್ಲ. ಆದರೆ ಈ ಜಾಹೀರಾತುಗಳನ್ನು ನೋಡಿ ಇವರ ಮಟ್ಟ ಇಷ್ಟು ಇಳಿದುಹೋಗಿದೆಯಲ್ಲ ಎಂದೆನಿಸಿತು. ಚುನಾವಣೆಯಲ್ಲಿ ಜನರನ್ನು ಆಕರ್ಷಿಸಲೇ ಬೇಕಂದರೆ ತಮ್ಮ ಸಾಧನೆಗಳನ್ನ ತೋರಿಕೊಳ್ಳಲಿ, ಮಾಡಿದ ಅಭಿವೃದ್ಧಿಗಳನ್ನು ಬಣ್ಣಿಸಿಕೊಳ್ಳಲಿ. ಅದನ್ನು ಬಿಟ್ಟು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಅಷ್ಟಕ್ಕೂ ಇವರಿಗೆ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಸಾಧನೆ ಮಾಡಿದ್ದರೆ ತಾನೆ?

ಇನ್ನು ಬಿಜೆಪಿಯ ಜಾಹೀರಾತು. ಯಾವುದೊ ಬಡ್ಡಿದರದ ಬಗ್ಗೆ ಇವರ ಚೌಕಾಸಿ. ಇವರ ಜಾಹೀರಾತು ನೋಡಿದರೆ ಎಲ್ಲರೂ ಜೀವನ ನಡೆಸಲು ಸಾಲವನ್ನೆ ನಂಬಿಕೊಂಡಿದ್ದಾರೆನೋ ಎಂಬ ಅನುಮಾನ ಮೊಡುತ್ತದೆ. ಕಾಂಗ್ರೆಸ್ ಪಕ್ಷ ಬ್ರಷ್ಟಗೊಳ್ಳಲು ೫೦ ವರ್ಷ ಬೇಕಾದರೆ ಇವರಿಗೆ ೫ ವರ್ಷಗಳು ಸಾಕಾದವು. ಹಗರಣಗಳ ಪಟ್ಟಿ ಮಾಡಲು ಹೋದರೆ ಕೊನೆ ಮೊದಲೆನ್ನುವುದೇ ಇರುವುದಿಲ್ಲ. ಮತೀಯತೆಯ ಮೇಲೆ ಪಾಕಿಸ್ತಾನದ ಜನನಕ್ಕೆ ಕಾರಣನಾದ ಜಿನ್ನಾನನ್ನು ' ಸೆಕ್ಯೂಲರ್ ' ಎಂದು ಕರೆದ ಅಡ್ವಾಣಿ ಬಿಜೆಪಿಯವರೆ ಅಲ್ಲವೆ? ಅಧಿಕಾರಕ್ಕೊಸ್ಕರ ಪಕ್ಷದ ಧ್ಯೇಯ, ಸಿದ್ಧಾಂತಗಳನ್ನೇ ಬಲಿಕೊಟ್ಟ ಇವರೆಷ್ಟು ಸಂಭಾವಿತರು ?

ಇನ್ನು ಜೆಡಿಎಸ್ ಬಗ್ಗೆ ಮಾತಾಡುವುದಕ್ಕಿಂತ ಮಾತನಾಡದಿದ್ದರೇನೆ ಒಳಿತು. ೨೦ ತಿಂಗಳ ಅಧಿಕಾರ ಅನುಭವಿಸಿ ನಂತರ ಕೈ ಎತ್ತಿ , ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲವೆಂದು ಸಾಬೀತುಪಡಿಸಿದೆ ಈ ಪಕ್ಷ. ಮಂಗಣ್ಣನಂತೆ ಆ ಪಕ್ಷ ಆದಕೂಡಲೆ ಈ ಪಕ್ಷ, ಇದಾದ ಕೂಡಲೆ ಇನ್ನೊಂದು ಎಂದು ಮೈತ್ರಿಗೋಸ್ಕರ ಹಾರುವ ಕೆಟ್ಟ ಹವ್ಯಾಸ ಇವರಿಗೆ. ಒಟ್ಟಿನಲ್ಲಿ ಸದಾಕಾಲ ಅಧಿಕಾರದ ಚುಕ್ಕಾಣಿ ಇವರ ಕೈಯ್ಯಲ್ಲಿದ್ದರೆ ಇವರಿಗೆ ಸಮಾಧಾನ. ಮೊದಮೊದಲು ಭರವಸೆ ಮೊಡಿಸಿದ್ದ ಕುಮಾರಣ್ಣ ಕೊನೆಗೆ ಹತ್ತರೊಟ್ಟಿಗೆ ಹನ್ನೊಂದಾದರು.

ದಿನ ಬೆಳಗಾದರೆ ಪತ್ರಿಕೆ, ಟಿವಿ, ರೇಡಿಯೊಗಳಲ್ಲಿ ಮತ ಚಲಾವಣೆ ನಿಮ್ಮ ಹಕ್ಕು ಎಂದು ಕೂಗಿಕೂಗಿ ಹೇಳುತ್ತಾರೆ. ಪುಢಾರಿಗಳಿಂದ ಮೊದಲ್ಗೊಂಡು ಸಿನೆಮಾ ನಟರವರೆಗೆ ಎಲ್ಲರೂ ಹೇಳುವವರೆ, ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆಯೆಂದು. ಇರುವ ಎಲ್ಲರೂ ಫಟಿಂಗರಾದರೆ ಯಾರನ್ನು ಚುನಾಯಿಸುವುದು? ಯಾರು ಹಿತವರು ಈ ಮೊವರೊಳಗೆ ? ಹಸ್ತವೊ, ಕಮಲವೊ, ಹೊರೆ ಹೊತ್ತ ಮಹಿಳೆಯೊ ? (ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ನನ್ನ ಅನುಮಾನ).

(ಕೃಪೆ: ಪ್ರತಾಪ್ ಸಿಂಹರ ಬೆತ್ತಲೆ ಜಗತ್ತು)

No comments: