Friday, August 24, 2012

ನಾನು ಮತ್ತು ಚಿತ್ರಕಲೆ - ೨

ಸ್ವಾತಂತ್ರ ದಿನಾಚರಣೆಗೆಂದು ನಮ್ಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಇಟ್ಟಿದ್ದರು.  ನಾನೂ ಸೇರಿದ್ದೆ.  ಒಂದು ಮೊಟ್ಟೆಯ ಚಿತ್ರ ಬಿಡಿಸಿ ಆ ಮೊಟ್ಟೆಗೆ ಬ್ರಿಟಿಷ್ ಭಾವುಟವನ್ನು ಬಿಡಿಸಿ ಅದನ್ನು ಸೀಳಿಕೊಂಡು ಹೊರಬರುತ್ತಿರುವ ಭಾರತದ ಭಾವುಟವನ್ನು ಹಿಡಿದ ಕೈಯ್ಯೊಂದನ್ನು ಬಿಡಿಸಿದ್ದೆ.  ತುಂಬಾ ಕ್ಯಾಶುವಲ್ ಆಗಿ ಬಿಡಿಸಿದ್ದ ಚಿತ್ರವಾಗಿತ್ತು ಅದು.  ನನ್ನ ಸಹಪಾಟಿಯೊಬ್ಬ ಗಾಂಧೀಜಿಯ ಚಿತ್ರವನ್ನು ತುಂಬಾ ಅಂದವಾಗಿ ಬಿಡಿಸಿದ್ದ.  ಅವನ ಚಿತ್ರ ನೋಡಿ, ಅವನಿಗೆ ಮೊದಲ ಬಹುಮಾನ ಖಂಡಿತ ಎಂದು ನಾನಂದುಕೊಂಡಿದ್ದೆ.  ಆದರೆ ಆಶ್ಚರ್ಯವೆಂಬಂತೆ ನನ್ನ ಚಿತ್ರಕ್ಕೆ ಮೊದಲ ಬಹುಮಾನ ಬಂದಿತ್ತು.  ಬಹುಮಾನ ಅವನಿಗೆ ಸಿಗದೇ ಇದ್ದುದಕ್ಕೆ ನನಗೆ ಬೇಸರವಾಗಿತ್ತು.  ಇದಾದ ನಂತರ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದು ಜಿಲ್ಲಾ ಮಟ್ಟ ತಲುಪಿದೆ.  ಜಿಲ್ಲಾಮಟ್ಟದ ಸ್ಪರ್ಧೆಗಾಗಿ ನಮ್ಮ ಮೆಚ್ಚಿನ ಭಟ್ ಮಾಸ್ಟರ್ ನಮ್ಮನ್ನು ಮಡಿಕೇರಿಗೆ ಕರೆದುಕೊಂಡು ಹೋದರು.  ನಾನು ಚಿತ್ರಕಲೆಯಲ್ಲೂ, ಇನ್ನೊಬ್ಬ ಚರ್ಚಾ ಸ್ಪರ್ಧೆಯಲ್ಲೂ ಭಾಗವಹಿಸುವವರಿದ್ದೆವು.  ಅಲ್ಲಿ ಹೋದ ಮೇಲೆ ಚಿತ್ರಕಲಾ ಸ್ಪರ್ಧೆ ಮಧ್ಯಾಹ್ನ ಎಂದು ತಿಳಿಯಿತು.  ಬೆಳಿಗ್ಗೆ ಇದ್ದ ಚರ್ಚಾ ಸ್ಪರ್ಧೆಯನ್ನು ನೋಡುತ್ತಾ ಕುಳಿತೆ.  ಅದರ ನಂತರ ಊಟಕ್ಕೆಂದು ಒಂದು ಮೆಸ್ಸ್ ಗೆ ಕರೆದುಕೊಂಡು ಹೋಗಿ ಗಡದ್ದಾಗಿ ಊಟ ಹಾಕಿಸಿದರು ನಮ್ಮ ಸರ್.  ಹೊಟ್ಟೆ ತುಂಬಾ ಉಂಡಿದ್ದಕ್ಕೋ ಅಥವಾ ಬಿರು ಬಿಸಿಲಲ್ಲಿ ಸುತ್ತಿದ್ದಕ್ಕೋ ನನಗೆ ಮಧ್ಯಾಹ್ನ ಚಿತ್ರ ಬಿಡಿಸುವ ಮೂಡೇ ಹೋಗಿ ಎಲ್ಲಾದರೂ ಮಲಗಿಬಿಡೋಣ ಅನ್ನಿಸತೊಡಗಿತ್ತು.  ಆದರೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೂಕಡಿಸುತ್ತಲೇ ಏನೇನೋ ಬಿಡಿಸಿ ಎಲ್ಲೆಲ್ಲೋ ಬಣ್ಣ ತುಂಬಿ ಚಿತ್ರವನ್ನು ಬಣ್ಣದ ಗೊಬ್ಬರ ಗುಂಡಿ ಮಾಡಿ ಸೋತು ಮೂತಿ ಕೆಳಗೆ ಮಾಡಿಕೊಂಡು ವಾಪಾಸಾಗಿದ್ದೆ.  ಮಾವನಿಗೆ ಸಂಜೆ ಪೇಟೆಯಲ್ಲಿ ಸಿಕ್ಕ ಭಟ್ ಮಾಸ್ಟರ್ "ಯಾಕೋ ಶರತ್ ಇವತ್ತು ಚಿತ್ರವನ್ನು ಮನಸ್ಸು ಕೊಟ್ಟು ಬಿಡಿಸಲೇ ಇಲ್ಲ" ಎಂದು ಹೇಳಿದ್ದರಂತೆ.  ಇದಾದ ನಂತರ ಯಾವುದೇ ಸ್ಪರ್ಧೆಗಳಲ್ಲಿ ನಾನು ಭಾಗವಹಿಸಲೇ ಇಲ್ಲ.  

ಹೈಸ್ಕೂಲು ಮುಗಿಸಿ ಕಾಲೇಜ್ ಮೆಟ್ಟಿಲು ಹತ್ತಿದ ಮೇಲೆ ಪೇಂಟಿಂಗ್ ಮಾಡುವುದನ್ನೇ ನಿಲ್ಲಿಸಿಬಿಟ್ಟೆ.  ಬರೀ ಸ್ಕೆಚಿಂಗ್ ನಲ್ಲಿ ತೊಡಗಿದೆ.  ಪೇಂಟಿಂಗ್ ಬಿಡಲು ಸ್ಪಷ್ಟವಾದ ಕಾರಣ ಏನು ಇರಲಿಲ್ಲ.  ಬಹುಶ ಇನ್ನಷ್ಟು ಸೋಮಾರಿಯಾಗತೊಡಗಿದ್ದೆ ನಾನು.  ಪೇಂಟಿಂಗ್ ಗೆ ಹೋಲಿಸಿದರೆ ಸ್ಕೆಚಿಂಗ್ ಸುಲುಭ.  ಬಣ್ಣಗಳ ಆಯ್ಕೆ, ಬಿಡಿಸಿದ ಚಿತ್ರ ಒಣಗುವವರೆಗೆ ಕಾಯುವ ತಾಪತ್ರಯ ಸ್ಕೆಚಿಂಗ್ನಲ್ಲಿ ಇಲ್ಲ.  ಜಲವರ್ಣದಲ್ಲಿ ಟೈಮಿಂಗ್ ಸ್ವಲ್ಪ ಹೆಚ್ಚು ಕಡಿಮೆಯಾದರೂ ಚಿತ್ರವನ್ನು ಮುದ್ದೆ ಕಟ್ಟಿ ಎಸೆದು ಮತ್ತೆ ಹೊಸತಾಗಿ ಶುರು ಮಾಡಬೇಕು.  ಆದರೆ ಸ್ಕೆಚಿಂಗ್ ನಲ್ಲಿ ತಪ್ಪಾದರೆ ಅಳಿಸಿ ಮತ್ತೆ ಸರಿಪಡಿಸಬಹುದು.

ಕಾಲೇಜಿನ ನೋಟ್ ಪುಸ್ತಕಗಳಲ್ಲಿ ಮತ್ತೆ ಚಿತ್ರಗಳು ಮೂಡಿದವು.  ಆದರೆ ಈ ಬಾರಿ ಹಿಂದಿನ ಪುಟಗಳ ಜೊತೆ ಮುಂದಿನ ಪುಟಗಳಲ್ಲಿಯೂ ಚಿತ್ರಗಳು ಮೂಡಿದವು.  ಈ ಮಧ್ಯೆ ಗೆಳೆಯನೊಬ್ಬನಿಂದ ಕ್ಯಾಲಿಗ್ರಫಿ ಕಲಿತು ಸುಮಾರಷ್ಟು ದಿನ ಅದರಲ್ಲೇ ಮುಳುಗಿದ್ದೆ.  ನನ್ನ ಹ್ಯಾಂಡ್ ರೈಟಿಂಗ್ ಅಂದವಾಗಿದ್ದರಿಂದ ಗೆಳೆಯರು- ಸಹಪಾಟಿಗಳು ನನ್ನ ನೋಟ್ಸ್ ಗಳನ್ನು ನಕಲು ಮಾಡಲು ಎರವಲು ಪಡೆಯುತ್ತಿದ್ದರು.  ಹೀಗಾಗಿ ಸಣ್ಣ ಮಟ್ಟದಲ್ಲಿ ನನಗೂ ಫ್ಯಾನ್ ಗಳು ಇದ್ದರು.  ನನ್ನ ಓದು ಎಂದಿನಂತೆ ಸಾಗಿತ್ತು.  ಆರಕ್ಕೇರದೆ ಮೂರಕ್ಕೆ ಇಳಿಯದಂತೆ.  ನಮಗೆ ಕೆಮಿಷ್ಟ್ರಿ ಮಾಡುತ್ತಿದ್ದ ನಂಜುಂಡಪ್ಪ ಸರ್ " ಲೇ ಎದುರಿಗೆ ನಿಂತ್ರೆ ಐದು ನಿಮಿಷದಲ್ಲಿ ನಂದೇ ಚಿತ್ರ ತಪ್ಪಿಲ್ಲದಂತೆ ಬಿಡಿಸುತ್ತೀಯ, ಇಕ್ವೇಶನ್ ಬ್ಯಾಲೆನ್ಸ್ ಮಾಡು ಅಂದ್ರೆ ತಪ್ಪು ಮಾಡ್ತೀಯ" ಎಂದು ಪ್ರೀತಿಯಿಂದ ಗದರುತ್ತಿದ್ದರು ಆಗಾಗ.  ಬಯಾಲಜಿ ನೋಟ್ ಪುಸ್ತಕದ ಮೊದಲ ಪುಟದಲ್ಲಿ ಬರೆದ ಚಾರ್ಲ್ಸ್ ಡಾರ್ವಿನ್ನನ ಚಿತ್ರ ಬಹಳ ಖ್ಯಾತಿ ಗಳಿಸಿತ್ತು.  ನಮಗೆ ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ ಜಯಶ್ರೀ ಮೇಡಂ ಸ್ಟಾಫ್ ರೂಮಿಗೆ ಕರೆದು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. 

ನಿಮ್ಮ ಪ್ರತಿಭೆ ನಿಮ್ಮನ್ನು ಸಂಕಷ್ಟಕ್ಕೆ ತಳ್ಳಬಹುದು.  ಕ್ಲಾಸಿನಲ್ಲಿ ಸುಮಾರು ಜನರ ಬಯಾಲಜಿ ಲ್ಯಾಬ್ ರೆಕಾರ್ಡ್ ನಲ್ಲಿನ ಚಿತ್ರಗಳು ನಾನು ಬಿಡಿಸಿದ್ದೆ ಆಗಿದ್ದವು.  ನನ್ನ ಸಂಕೋಚ ಸ್ವಭಾವ ಹಾಗು ಅಂದದ ಗೆಳತಿಯರು ಕೇಳಿದಾಗ ಆಗಲ್ಲ ಎನ್ನಲಾರದ ವಯಸ್ಸು ನನ್ನ ಪೆನ್ಸಿಲ್ಲುಗಳು, ರಬ್ಬರುಗಳು, ಹಾಗು ಸಮಯವನ್ನು ಖಾಲಿ ಮಾಡಿದವು.  ತಮಾಷೆಯೆಂದರೆ, ಹೀಗೆ ನನ್ನಿಂದ ಚಿತ್ರ ಬಿಡಿಸಿಕೊಂಡ ಒಬ್ಬ ಗೆಳತಿಯೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ.

(ಮುಂದುವರೆಯುವುದು...) 

5 comments:

Unknown said...

I dont remember asking you to write anything in my book. But I used to enjoy your sketches and jokes.I dont know how but I always felt that you inspired me into art. Good childhood days :-)

sunaath said...

ವಾಹ್! College Hero!

ದಿವ್ಯಾ ಮಲ್ಯ ಕಾಮತ್ said...

Waw.. very nice to read series and good to know things!! :-)

ದಿವ್ಯಾ ಮಲ್ಯ ಕಾಮತ್ said...

Waw.. very nice to read series and good to know things.. :-)

VENU VINOD said...

ಬಾಲ್ಯದ ನೆನಪುಗಳು ಖುಷಿಕೊಟ್ಟವು, ನಮ್ಮ ಹವ್ಯಾಸಗಳನ್ನು ಉಳಿಸಿಕೊಂಡರೆ ನಮ್ಮ ಏಕತಾನತೆ ಕಳೆಯಲು ಒಳ್ಳೆಯದೇನೋ