Wednesday, November 12, 2008

ಮುಖಗಳು


ಕಾಡಿಸಿ ಕಾಡಿಸಿ ಕೊನೆಗೂ ನೆನಪಾಗದ ಅವಳ ಮುದ್ದು ಮೊಗ, ಸಂತೆಯಲ್ಲಿ ಬಿಕರಿಯಾಗದೆ ಉಳಿದ ತರಕಾರಿ ಮೂಟೆಗಳು ಮತ್ತು ಅವುಗಳೊಂದಿಗೆ ಚಿಂತೆಯ ಗೆರೆಗಳನ್ನು ಮುಖದ ಮೇಲೆ ಮೂಡಿಸಿಕೊಂಡಿರುವ ಅವುಗಳ ಯಜಮಾನ, ಪ್ರಪಂಚವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ತಾಯಿಯ ಸೊಂಟಕ್ಕೆ ಅಂಟಿಕೊಂಡಿರುವ ಭಿಕ್ಷುಕಿಯ ಮಗು, ಮನೆಯಲ್ಲಿ ಜಗಳ ಮಾಡಿಕೊಂಡು ಮಹಾನಗರಿಗೆ ಬಂದಿಳಿದ ಯುವಕನ ಆತಂಕದ ಕಣ್ಣುಗಳು, ಮಾಡದ ತಪ್ಪಿಗೆ ವಿಷ ತಿಂದು ಸತ್ತ ಆನೆಗಳ ಮಡಿಲಲ್ಲಿದ್ದ ಆ ಮರಿಯಾನೆಯ ಮುಗ್ಧ ನಯನಗಳು. ಇವೆಲ್ಲವೂ ಇತ್ತೀಚಿಗೆ ನನ್ನನ್ನು ಕಾಡುತ್ತಿರುವ ಮುಖಗಳು.

Wednesday, November 5, 2008

ಹುಣ್ಣಿಮೆ ರಾತ್ರಿ

ಕಣ್ಣು ಚಾಚಿದಷ್ಟಕ್ಕೂ ದೂರ ಕಾಣುವ ಕತ್ತಲು, ಕತ್ತಲ ಬೆನ್ನು ಹತ್ತಿರುವ ಮೌನ, ಚಂದಿರನ ಬೆಳಕಲ್ಲಿ ಅಸ್ಪಷ್ಟವಾಗಿ ಕಾಣುವ ಬೆಟ್ಟದ ಸಾಲುಗಳು. ತಲೆಯೆತ್ತಿ ಆಗಸದೆಡೆಗೆ ನೋಡಿದೆನು, ನನ್ನ ದುರಾದೃಷ್ಟವೋ ಏನೋ ಇಂದು ಅಷ್ಟೊಂದು ನಕ್ಷತ್ರಗಳಿಲ್ಲ. ಆದರೂ ವೇಗವಾಗಿ ಸಾಗುತ್ತಿದ್ದ ಮೋಡಗಳು, ಮೋಡ ತಿಳಿಯಾದಾಗ ಕಾಣುವ ಪ್ರಕಾಶಮಾನ ಶಶಿಯನ್ನು ಇನ್ನು ನಾಲ್ಕಾರು ದಿನ ಮರೆಯಲಾರೆ. ಗಡಗುಟ್ಟಿಸುವ ಚಳಿ, ಕೆಲವೊಮ್ಮೆ ಹಿತವೆನಿಸುವ ತಂಗಾಳಿ, ಬೊಗಸೆಯಲ್ಲಿ ತುಂಬಿಕೊಳ್ಳುವಷ್ಟು ಮೌನ, ಕೊನೆಯಿಲ್ಲದ ಬೆಟ್ಟದ ಸಾಲುಗಳು, ಗವ್ವೆನ್ನುವ ಕಾಡು ಇದೆಲ್ಲ ಅನುಭವಿಸಿ ಎಷ್ಟು ದಿನಗಳಾಯಿತು ? ಬೆಂಗಳೂರಲ್ಲಿ ಇದೆ ಸಮಯದಲ್ಲಿ ದೇಹಕ್ಕೇ ಕಿಚ್ಚು ಹಚ್ಚಿಸಿಕೊಂಡು ಕೆಲಸದಲ್ಲಿ ಮುಳುಗಿರುತ್ತಿದ್ದೆ. ನಾಲ್ಕು ದಿನಗಳಲ್ಲಿ ಈ ಊರನ್ನು ಬಿಟ್ಟು ಮತ್ತೆ ಅದೇ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾದ ಅನಿವಾರ್ಯತೆಯ ನೆನಪಾಗಿ ಬೇಸರಗೊಂದೆ. ಮೋಡಗಳ ಮಧ್ಯದಿಂದ ಇಣುಕುತ್ತಿದ್ದ ಚಂದ್ರನ ಕಂಡು ಕುವೆಂಪು ಅವರ ಕವಿತೆಯೊಂದು ನೆನಪಾಯಿತು. ಕವಿತೆಯ ಹೆಸರು "ಹುಣ್ಣಿಮೆಯ ರಾತ್ರಿ" ಎಂದು. ಹೈಸ್ಕೂಲ್ ನಲ್ಲಿ ಇದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದ್ದ ನೆನಪು.

ಓ ನೋಡದೋ ರಂಜಿಸುತಿದೆ
ರಜನಿಯ ಕೈದೀಪ
ನೀಲದಿಯಲಿ ತೆಲುತ್ತಿಹ
ಜ್ಯೋತಿಯ ಸ್ವರ್ದೀಪ

ತೆಳ್ಳು ತೆಳ್ಳನೆ ಬೆಳ್ಳು ಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೋನ್ನದಿ ಮಿಂದಂತಿದೆ
ಜೆನ್ಮಳೆಯನೆ ಸೂಸಿ!

ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ

ಬಾಂದಳದಿಂದ ಇಳಿಯುತ್ತಿದೆ
ಬೆಳದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ

ಅ: ಆಲಿಸು ! ಆಕಾಶದಿ
ತೇನೆಯ ಸುರವಾಣಿ;
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿ ಶ್ರೇಣಿ !

ಸೌಂದರ್ಯದ ಮಧುಪಾನದಿ
ವಿಶ್ವವೇ ಉನ್ಮತ್ತ !
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾದಿಸ್ಥ !

ಏ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆ ಇರುಳು
ತಿಂಗಳ ಬೆಳಕಿನ ಕಡಲಲಿ
ತೇಲಿದೆ ತಿರೆಯರಳು !

ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳ ಒಲಿದೊಪ್ಪಿರೆ
ದ್ವೈತವು ಬರಿ ಛಾಯೆ

ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ !

ಓ ರಾತ್ರಿಯೇ ಸಹ್ಯಾದ್ರಿಯೇ
ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರೆ ಸಾನಿಧ್ಯವೇ
ಪರಮಾತ್ಮನ ಶಾಂತಿ

- ಕುವೆಂಪು

Wednesday, October 29, 2008

ಹೀಗೇಕೆ ನಲ್ಲೆ?

ಮನ ಮುಗಿಲ ಮೇಲೆ

ಕಾರ್ಮೋಡಗಳ ಮಾಲೆ

ಮನ ಮುರಿಯುವ ವೇಳೆ

ಹೀಗೇಕೆ ನಲ್ಲೆ?

Sunday, October 5, 2008

ಇನ್ನೆರಡು ಚಿತ್ರಗಳು



ನನ್ನ ಹಳೆಯ ಪುಸ್ತಕಗಳಲ್ಲಿ ಇದ್ದ ಎರಡು ಚಿತ್ರಗಳನ್ನು ಪೋಸ್ಟ್ ಮಾಡುತ್ತ ಇದ್ದೇನೆ.

ಮೊದಲನೆಯದು ಇನ್ನು ಚನ್ನಾಗಿ ನೆನಪಿದೆ, ಕಾಲೇಜ್ ಪ್ರಾರಂಭವಾದ ಮೊದಲನೆ ದಿನ ಬಿಡಿಸಿದ್ದು. ಕಾಲೇಜ್ ಇಂದ ಬಂದು ಏನು ಕೆಲಸವಿಲ್ಲದೆ ಬಾಗಿಲ ಬಳಿ ದಿಟ್ಟಿಸುತ್ತಾ ಕುಳಿತಿದ್ದಾಗ ನನ್ನ ಶೂಗಳು ಕಂಡವು, ಅದನ್ನೇ ಪೇಪರ್ ಮೇಲೆ ಮೂಡಿಸಿದೆ.

ಎರಡನೆಯದನ್ನು ಯಾವಾಗ ಚಿತ್ರಿಸಿದ್ದು ಎಂದು ನೆನಪಿಲ್ಲ, ಆದರೆ ಆ ಮರದ ಹೂಜಿ ಇನ್ನು ನಮ್ಮ ಮನೆಯಲ್ಲಿ ಇದೆ.

ಇವೆರಡು ಚಿತ್ರಗಳನ್ನು ಯಾವುದೇ ಗುರಿ ಇಟ್ಟುಕೊಳ್ಳದೆ ಚಿತ್ರಿಸಿದ್ದು ಆದ್ದರಿಂದ finishing ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.

Tuesday, September 23, 2008

ಹೆಸರಿಲ್ಲದ ಒಂದು ಚಿತ್ರ


ಈ ಚಿತ್ರ ಬಿಡಿಸಿ ಬಹಳ ದಿನಗಳಾದರೂ ಪೋಸ್ಟ್ ಮಾಡಲು ಆಗಿರಲಿಲ್ಲ. ಕೆಲವೊಮ್ಮೆ ಸೋಮಾರಿತನ, ಕೆಲವೊಮ್ಮೆ 'ಮೂಡ್' ಇಲ್ಲದಿರುವುದು, ಕೆಲವೊಮ್ಮೆ ನಿಜವಾಗಲೂ ಸಮಯ ಸಿಗದಿರುವುದರ ನಡುವೆ ಚಿತ್ರ ಇನ್ನೇನು ಮೂಲೆ ಸೇರುವುದರಲ್ಲಿತ್ತು. ಇವತ್ತು ಅಂತು ಇಂತೂ ಟೈಮ್ ಸಿಕ್ಕಿ ಪೋಸ್ಟ್ ಮಾಡ್ತಾ ಇದ್ದೇನೆ :)