Wednesday, December 28, 2011

ಮೈಹರ್ ಮೇಲ್ - ೨

ಇಂದು ನಿಮಗೆ ಮೈಹರ್ ನ ಬಸ್ ನಿಲ್ದಾಣದ ಕಥೆ ಹೇಳುತ್ತೇನೆ. ನಮ್ಮ ರೂಮಿನಿಂದ ಸ್ವಲ್ಪ ದೂರದಲ್ಲಿಯೆ ಮೈಹರ್ ಬಸ್ ನಿಲ್ದಾಣವಿದೆ. ಮೈಹರ್ ನ ಬಸ್ ನಿಲ್ದಾಣವೆಂಬುದು ಬಸ್ ನಿಲ್ದಾಣವೂ ಹೌದು ಹಾಗು ಸಾರ್ವಜನಿಕ ಬಾರ್ ಕೂಡ ಹೌದು. ಈ ಊರು ಶಾರದಾದೇವಿ ಮಂದಿರದಿಂದ ಪ್ರಸಿದ್ಧವಾಗಿರುವ ಕಾರಣ ಇಲ್ಲಿ ಬಾರುಗಳು ಹಾಗು ಮಾಂಸಹಾರಿ ಹೋಟೆಲುಗಳು ಬೆರಳೆಣಿಕೆಯಷ್ಟಿವೆ. ಈ ಕಾರಣದಿಂದ ಮದಿರಾಪ್ರಿಯರು ಎಣ್ಣೆ, ಗ್ಲಾಸು, ಮತ್ತು ಕುರುಕಲು ತಿಂಡಿಗಳ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ರಾತ್ರಿಯಾಗುತ್ತಿದ್ದಂತೆ ಇಲ್ಲಿ ಜನರು ಗುಂಪು ಸೇರುತ್ತಾರೆ. ಊರಿನಿಂದ ಸ್ವಲ್ಪ ಹೊರಗೆ ಇರುವುದರಿಂದಲೋ ಏನೋ, ಇಲ್ಲಿ ಯಾರೂ ಹೇಳುವವರು-ಕೇಳುವವರು ಇಲ್ಲ. ಈಗ ೧೫ ದಿನಗಳಿಂದ ವಿಪರೀತ ಚಳಿ ಇರುವುದರಿಂದ ಬಸ್ ನಿಲ್ದಾಣ ಕೇವಲ ಬಸ್ ನಿಲ್ದಾಣವಾಗಿಯೇ ಇದೆ. ಮದ್ಯಪ್ರಿಯರೆಲ್ಲ ಮನೆಯಲ್ಲೇ ಉಳಿದು ಮದ್ಯ ಸವಿಯುವ ಅಥವಾ ತಾತ್ಕಾಲಿಕವಾಗಿ ಮದ್ಯಸೇವನೆ ತ್ಯಜಿಸುವ ನಿರ್ಧಾರ ಮಾಡಿದಂತಿದೆ.

ಇಲ್ಲಿ ಬಸ್ಸುಗಳ ಸಂಖ್ಯೆ ಕಡಿಮೆ. ಎಲ್ಲರೂ ಪ್ರಯಾಣಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ವಿಶೇಷವೆಂದರೆ, ಇದುವರೆಗೂ ನಾನು ಮಧ್ಯಪ್ರದೇಶ ಸಾರಿಗೆಯ ಒಂದು ಬಸ್ಸನ್ನೂ ನೋಡಿಲ್ಲ. ಎಲ್ಲ ಪ್ರೈವೇಟ್ ಬಸ್ಸುಗಳದೆ ದರ್ಬಾರು. ತಾಲೂಕು ಕೇಂದ್ರವಾಗಿ ಇಲ್ಲಿಗೆ ಒಂದೂ ರಾಜ್ಯ ಸಾರಿಗೆಯ ಬಸ್ಸು ಇರದೆ ಇರುವುದು ಆಶ್ಚರ್ಯವೇ ಸರಿ.

ಇನ್ನು ಮುಂಜಾನೆಯ ಸಮಯದಲ್ಲಿ ಬಸ್ ನಿಲ್ದಾಣ "ಸಾರ್ವಜನಿಕ ಬಿಸಿಲು ಕಾಯಿಸುವ ಜಾಗ" ಆಗಿ ಮಾರ್ಪಾಡುಗೊಳ್ಳುತ್ತದೆ. ತಮಾಷೆಯೆಂದರೆ ಅಕ್ಕ-ಪಕ್ಕದಲ್ಲಿರುವ ಮನೆಯ ಹೆಂಗಸು-ಮಕ್ಕಳಾದಿಯಾಗಿ ಎಲ್ಲರೂ ಬೆಳ್ಳಂಬೆಳಗ್ಗೆ ಕುರ್ಚಿಗಳನ್ನು ಹಾಕಿಕೊಂಡು ಬಿಸಿಲು ಕಾಯಿಸುತ್ತಾ-ಪಟ್ಟಾಂಗ ಹೊಡೆಯುತ್ತಾ ಕುಳಿತಿರುತ್ತಾರೆ. ಇವರೇನು ತಿಂಡಿ ತಿನ್ನುವುದಿಲ್ಲವೇ? ತಿನ್ನುವುದಾದರೆ ಯಾವಾಗ ತಯಾರು ಮಾಡುತ್ತಾರೆ? ಮಕ್ಕಳೆಲ್ಲ ಎಷ್ಟು ಹೊತ್ತಿಗೆ ಸ್ಕೂಲಿಗೆ ಹೋಗುತ್ತಾರೆ, ಗಂಡಸರು ತಮ್ಮ ಕೆಲಸಕ್ಕೆ ಎಷ್ಟೊತ್ತಿಗೆ ತೆರಳುತ್ತಾರೆ? ಇಂತ ಪ್ರಶ್ನೆಗಳೆಲ್ಲ ನನ್ನ ಮನದಲ್ಲಿ ಮೂಡಿ ತಲೆ ಕೆರೆದುಕೊಂಡಿದ್ದೇನೆ.

ಮೈಹರ್ ನಲ್ಲಿ ಈಗ ವಿಪರೀತ ಚಳಿ. ಬೆಳಿಗ್ಗೆಯಿಂದ ಸಂಜೆವರೆಗೆ ಉಷ್ಣಾಂಶ ೧೫ ಡಿಗ್ರೀ ಸೆಲ್ಷಿಯಸ್ ಇಂದ ೨೨ ಡಿಗ್ರಿಯವರೆಗೆ ಇರುತ್ತದೆ. ಸಂಜೆಯಾಯಿತೆಂದರೆ ಕೊರೆಯುವ ಚಳಿ ಶುರು. ರಾತ್ರಿಯ ಉಷ್ಣಾಂಶ ೬ಕ್ಕೆ ಇಳಿದಿದ್ದೂ ಇದೆ. ರಾತ್ರಿಯಲ್ಲಿ ತಣ್ಣೀರಿಗೆ ಕೈಹಾಕುವ ಹಾಗಿಲ್ಲ. ಅಪ್ಪಿತಪ್ಪಿ ತಣ್ಣೀರು ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತದೆ.

ನಾವು ಉಳಿದುಕೊಂಡಿರುವ ಲಾಡ್ಜಿನಲ್ಲಿ ಸ್ನಾನಕ್ಕೆ ಬೆಳಿಗ್ಗೆ ಬಿಸಿನೀರು ಬರುತ್ತದೆ. ಬರುತ್ತದೆ ಎಂದರೆ ನಲ್ಲಿಯಲ್ಲಿ ಬರುವುದಿಲ್ಲ, ರೂಂ ಬಾಯ್ ಬಕೆಟ್ನಲ್ಲಿ ತಂದುಕೊಡುತ್ತಾನೆ. ಈ ರೂಂ ಬಾಯ್ ಬೆಳಿಗ್ಗೆ ೫ ಗಂಟೆಗೆ ಬಿಸಿ ನೀರು ತಂದು ನಮಗೆಲ್ಲ ತೊಂದರೆ ಕೊಡಲು ಶುರು ಮಾಡಿದ್ದ. ಇವನು ಯಾವ ಪರಿಯಲ್ಲಿ ಬಾಗಿಲು ಬಡಿಯುತ್ತಾನೆಂದರೆ ನೀವು ಎಂತದೆ ನಿದ್ರೆಯಲ್ಲಿದ್ದರೂ ಹಾರಿ ಏಳಬೇಕು. ಜೊತೆಗೆ "ಭೈಯ್ಯಾ ಗರಂ ಪಾನಿ" ಎಂಬ ಅರ್ತನಾದದಂತಹ ಕೂಗು. ಇಂತ ಚಳಿಯಲ್ಲಿ ಬೆಚ್ಚಗೆ ಬೆಚ್ಚನೆಯ ಕನಸುಗಳನ್ನೂ ಕಾಣುತ್ತಾ ಮಲಗಿರುವ ಬ್ಯಾಚಲರ್ ಇಂಜನಿಯರ್ ಗಳಾದ ನಮಗೆ ಇದು ಬರಸಿಡಿಲಿನಂತೆ ಭಾಸವಾಗುತ್ತದೆ.

ಒಂದು ಬೆಳಿಗ್ಗೆ ಹೀಗೆ ಧಡ ಧಡ ಎಂದು ಬಾಗಿಲು ಬಡಿತದ ಶಬ್ದದಿಂದ ಎದ್ದ ನನ್ನ ಸಹೋದ್ಯೋಗಿ ಇದಕ್ಕೊಂದು ಪೂರ್ಣವಿರಾಮ ಹಾಕಲೆಬೇಕೆಂದು, ಬೆಳ್ಳಂಬೆಳಗ್ಗೆ ಕೋಪಗೊಳ್ಳುವುದು ಸರಿಯಲ್ಲವೆಂದು, ಬಂದ ಸಿಟ್ಟನ್ನು ಹತ್ತಿಕ್ಕುತ್ತಾ ಸಮಾಧಾನವಾಗಿ ಅವನಿಗೆ ಇಷ್ಟು ಬೇಗ ನೀರು ತರಬೇಡ ಎಂದೂ, ನಮಗೆ ೭ ಗಂಟೆಗೆ ನೀರು ಕೊಡಬೇಕೆಂದೂ ತನ್ನ ಹರುಕು-ಮುರುಕು ಹಿಂದಿಯಲ್ಲಿ ಸುಮಾರು ೫ ನಿಮಿಷಗಳ ತಿಳುವಳಿಕೆ ನೀಡಿದ. ೫ ನಿಮಿಷಗಳೂ ಹೇಳಿದ್ದನ್ನು ತನ್ಮಯನಾಗಿ ಕೇಳಿದ ರೂಂ ಬಾಯ್ ಕೊನೆಯಲ್ಲಿ ತನಗೇನು ಕೇಳಿಸಿಲ್ಲವೆಂದು ಸಂಜ್ಞೆಯ ಮೂಲಕ ಹೇಳಲು ನನ್ನ ಸಹೋದ್ಯೋಗಿ ಏನೂ ಮಾಡಲು ತಿಳಿಯದೆ "ಅಡಾ ಪಾವಿ, ಪೋಡ" (ಅಯ್ಯೋ ಪಾಪಿ, ಹೋಗೋ) ಎಂದು ತಮಿಳಿನಲ್ಲಿ ಕೂಗಿದ. ಇದನ್ನು ನೋಡುತ್ತಿದ್ದ ನನಗೆ ತಡೆಯಲಾರದಷ್ಟು ನಗು ಬಂದು ನಗತೊಡಗಿದೆ. ರೂಂ ಬಾಯ್ ಗೆ ನಾನೇಕೆ ನಗುತ್ತಿದ್ದೇನೆ ಎಂಬುದೇ ಯಕ್ಷ ಪ್ರಶ್ನೆಯಾಗಿ ನನ್ನನ್ನೇ ವಿಸ್ಮಯದಿಂದ ನೋಡತೊಡಗಿದ. ನಾನು ಸಾವರಿಸಿಕೊಂಡು ಅವನಿಗೆ ಮತ್ತೊಮ್ಮೆ ತಿಳಿಹೇಳಿದೆ. ನನ್ನ ಮಾತನ್ನು ಕೇಳಿದ ಬಳಿಕವೂ ಅವನು ನೀರಿನ ಬಕೇಟನ್ನು ಬಾತ್ ರೂಂ ಅಲ್ಲಿ ಇಡಲು ಒಳಗೆ ನುಗ್ಗಿದ. ಈಗ ನಗುವ ಸರದಿ ನನ್ನ ಸಹೋದ್ಯೋಗಿಯದಾಗಿತ್ತು. ಬೆಳಿಗ್ಗೆ ೫ ಗಂಟೆಗೆ ಇಂಥಹ ತಮಾಷೆಗಳನ್ನು ಅರಗಿಸಿಕೊಳ್ಳುವುದನ್ನು ನಾವು ಬೇರೆ ದಾರಿಯಿಲ್ಲದೆ ಕಲಿಯಲೇಬೇಕಾಯಿತು.

Friday, December 23, 2011

ಮೈಹರ್ ಮೇಲ್ - ೧

ಮೈಹರ್ ಮಧ್ಯ ಪ್ರದೇಶ ರಾಜ್ಯದ ಸತ್ನಾ (ಸತ್ನಾ ಬಿಟ್ನಾ ಯಾವನಿಗ್ ಗೊತ್ತು) ಜಿಲ್ಲೆಯಲ್ಲಿರುವ ಒಂದು ತಾಲೂಕು. ಹತ್ತಿರದಲ್ಲಿರುವ ಎರಡು ಸಿಮೆಂಟ್ ಪ್ಲಾಂಟ್ಗಳು ಹಾಗು ಇಲ್ಲಿಂದ ೨ ಕಿಲೋಮೀಟರ್ ದೂರದಲ್ಲಿರುವ ಶಾರದಾ ದೇವಿ ಮಂದಿರವನ್ನು ಬಿಟ್ಟರೆ ಇಲ್ಲಿ ಬೇರೇನೂ ವಿಶೇಷ ಇಲ್ಲ. ಊರು ಯಾವುದೇ ತಾಲೂಕು ಕೇಂದ್ರದಂತೆ ಚಿಕ್ಕದಾಗಿ ಇದೆ. ಎರಡು-ಮೂರು ರಸ್ತೆಗಳೇ ಈ ಊರಿನ ಜೀವಾಳ ಹಾಗು ಕೇಂದ್ರಬಿಂದು. ಎರಡು ಸಿಮೆಂಟ್ ತಯಾರಿಕ ಪ್ಲಾಂಟ್ ಗಳು ಇರದೇ ಹೋಗಿದ್ದಾರೆ ಈ ಊರನ್ನೂ ಕೇಳುವವರೇ ಇರುತ್ತಿರಲಿಲ್ಲವೇನೋ ? ಈ ಊರಿನಲ್ಲಿ ಒಂದು ಒಳ್ಳೆಯ ಹೋಟೆಲ್ ಇಲ್ಲ, ಥಿಯೇಟರ್ ಇಲ್ಲ (ಥಿಯೇಟರ್ಗಳು ಇವೆ, ಆದರೆ ಅಲ್ಲಿ ಕೇವಲ "ಎ" ಚಿತ್ರಗಳೇ ಓಡುವುದರಿಂದ ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ). ಇಂತಿಪ್ಪ ಊರಿನಲ್ಲಿ ನಾನು ಎರಡು ತಿಂಗಳುಗಳನ್ನು ಕಳೆದಿದ್ದೇನೆ, ಬದುಕುತ್ತಿದ್ದೇನೆ. ಇಂಥ ಊರಿನಲ್ಲಿನ ನಮ್ಮ ಬದುಕನ್ನು ಮೈಹರ್ ಮೇಲ್ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

ಮೈಹರ್ ಗೆ ಬಂದ ಹೊಸತರಲ್ಲಿ ನಾನು ಕಂಡುಕೊಂಡ ವಿಷಯವೆಂದರೆ ಇಲ್ಲಿನ ಮಹಾಜನತೆ ಬೆಳಗಿನ ತಿಂಡಿಗೆ ಸಮೋಸ ಹಾಗು ಜಿಲೇಬಿಯನ್ನು ತಿನ್ನುತ್ತಾರೆಂಬುದು. ಇದನ್ನು ಓದಿ ನೀವೆಷ್ಟು ಹೌಹಾರುತ್ತೀರೋ ಅಷ್ಟೇ ನಾನೂ ಹೌಹಾರಿದ್ದೆ. ಇಲ್ಲಿನ ನಾಗರೀಕರ ಗುಡಾಣ ಹೊಟ್ಟೆ ಸಮೋಸ "ಮೋಸ" ಮಾಡಿದ್ದನ್ನು ಧೃಡಪಡಿಸುತ್ತವೆ. ಇಲ್ಲಿನ ೯೦ ಪ್ರತಿಶತ ಜನರ ಹೊಟ್ಟೆ "ಸಮೋಸ-ಎಫೆಕ್ಟ್" ಗೆ ಒಳಗಾಗಿವೆ. ಪುಣ್ಯಕ್ಕೆ ನಮ್ಮ ಅಡಿಗೆಯವ ಇಂತಹ ಪ್ರಮಾದಕ್ಕೆ ಕೈಹಾಕದೆ ನಮಗೆ ನಿತ್ಯವೂ ಪರಾಥ (ನಮ್ಮಲ್ಲಿನ ಚಪಾತಿ) ತಿನ್ನಿಸಿ ಬದುಕಿಸುತ್ತಿದ್ದಾನೆ. ನೀವು ಬೆಳಿಗ್ಗೆ ೮ ಗಂಟೆ ಹೊತ್ತಿನಲ್ಲಿ ಪೇಟೆಯಲ್ಲಿ ಒಂದು ರೌಂಡ್ ಹಾಕಿ ಬಂದರೆ ನಿಮ್ಮ ಕಣ್ಣಿಗೆ ರಸ್ತೆಯಲ್ಲಿ ಸಮೋಸ ಮೆಲ್ಲುತ್ತಾ ನಿಂತಿರುವ ಮಹನೀಯರು ಕಾಣಸಿಗುತ್ತಾರೆ.

ಇಲ್ಲಿಗೆ ಬಂದ ಎರಡನೇ ದಿನದಲ್ಲೇ ನನ್ನನ್ನು ದಿಗಿಲುಗೊಳಿಸಿದ ಇನ್ನೊಂದು ವಿಷಯವೆಂದರೆ ಇಲ್ಲಿನ ಧೂಳು. ಇಡೀ ಊರಿಗೆ ಊರೇ ಧೂಳಿನಲ್ಲಿ ಮುಳುಗಿ ಹೋಗಿದೆ. ಒಂದು ಬಸ್ಸೋ ಲಾರಿಯೋ ಬರ್ರನೆ ನಿಮ್ಮನ್ನು ದಾಟಿ ಹೋಯಿತೆಂದರೆ, ಅಲ್ಲೊಂದು ಧೂಳಿನ ಲೋಕ ಸೃಷ್ಟಿಯಾಯಿತೆಂದೇ ಗ್ಯಾರಂಟೀ. ಒಂದೊಮ್ಮೆ ನೀವು ಮೂಗನ್ನು ಮುಚ್ಚಿಕೊಳ್ಳದೆ ಹೊದಿರೆಂದುಕೊಳ್ಳಿ, ಕ್ಷಣ ಮಾತ್ರದಲ್ಲಿ ನೀವು "ಭವಿಷ್ಯದ ಅಸ್ಥಮಾ ರೋಗಿ" ಪಟ್ಟಿಗೆ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಇಲ್ಲಿನ ಧೂಳನ್ನು ನೋಡಿ ಹೆದರಿ, ನನ್ನ ಯಾವುದೇ ಬಿಳಿಯ ವಸ್ತ್ರಗಳನ್ನು ಹೊರಗೆ ತೆಗೆಯಲೇ ಇಲ್ಲ.

ಇಂದಿಗೆ ಇಷ್ಟು ಸಾಕು, ನೀವು ಸುಧಾರಿಸಿಕೊಳ್ಳಿ. ಮುಂಬರುವ ದಿನಗಳಲ್ಲಿ ಇಲ್ಲಿನ ಇನ್ನಷ್ಟು ತಮಾಷೆಗಳನ್ನು ನಿಮಗೆ ತಿಳಿಸುತ್ತೇನೆ...

Monday, December 12, 2011

ಮಾತಿಲ್ಲದ ಮೌನ ನಿವೇದನೆ

ಬೆಳಿಗ್ಗೆ ಹಠಮಾಡಿ ಅಮ್ಮನ ಕೈಯಿಂದ ಪೆಟ್ಟು ತಿಂದು, ದಿನವಿಡೀ ರಂಪ ಮಾಡಿ, ಅಜ್ಜಿಯ ಕೈತುತ್ತು ತಿಂದು ಕಥೆ ಕೇಳಿ ಮಲಗಿದ ಮಗು ಈಗ ಕನಸಿನ ಲೋಕದತ್ತ ಕಳ್ಳ ಹೆಜ್ಜೆ ಇಡುತ್ತಿದೆ. ಆಫೀಸಿನಿಂದ ತಡವಾಗಿ ಮನೆಗೆ ಬಂದ ತಾಯಿಯು ಮುದುಡಿ ಕೈಗಳೆರಡನ್ನೂ ತೊಡೆಯ ಸಂಧಿಯಲ್ಲಿ ಅಡಗಿಸಿ ಮಲಗಿದ ಮುದ್ದು ಕಂದನ ಎದುರು ನಿಂತಿದ್ದಾಳೆ. ಬೆಳಿಗ್ಗೆ ತಾನು ಕೊಟ್ಟ ಪೆಟ್ಟು ಮಗುವಿನ ಮೈಯ್ಯಿಂದ ಮಾಯವಾಗಿದ್ದರೂ ತನ್ನ ಕೈಯ್ಯಲ್ಲಿ ಮಾಯದ ಕಲೆಯಾಗಿ ನಿಂತಿದ್ದನ್ನು ನಿಸ್ಸಹಾಯಕತೆಯಿಂದ ನೋಡಿಕೊಳ್ಳುತ್ತಿದ್ದಾಳೆ. ಬೆಳಿಗ್ಗೆ ಅಸಾಧ್ಯ ಪುಂಡನಂತೆ ಗೋಚರಿಸಿದ ಮಗು ಈಗ ಕಿನ್ನರ ಲೋಕದ ಮಾಯಾವಿಯಂತೆ ಕಾಣುತ್ತಿದೆ. ಪಶ್ಚಾತ್ತಾಪದ ಕಡಲಲ್ಲಿ ಮುಳುಗಿ ಏಳುತ್ತಿರುವ ಹೃದಯವನು ಸಾವರಿಸಿಕೊಳ್ಳಲು ಹೆಣಗುತಿಹಳು ತಾಯಿ. ಅಂದಿನ ಅಧ್ಯಾಯಕ್ಕೆ ತೆರೆ ಎಳೆದಂತೆ, ಆಟವನ್ನು ಮುಗಿಸಿದಂತೆ ಕಂದನು ನಿದ್ದೆಗಣ್ಣಲ್ಲೇ ನಸುನಗುತ್ತಿದೆ. ನಮ್ಮ ಅರಿವಿನ ವಲಯಕ್ಕೆ ನಿಲುಕದ ಶಬ್ದ ರೂಪಗಳನ್ನೂ ದಾಟಿದ ಆಚೆಯ ತೀರದಲ್ಲಿ ಕಂದನೀಗ ವಿಹರಿಸುತ್ತಿರಬಹುದೇ? ತನಗಿಷ್ಟವಾದ ಸಿಹಿ ತಿಂಡಿಗಳನ್ನು ಮೆಲ್ಲುತ್ತಾ, ತನ್ನ ಮುದ್ದಿನ ನಾಯಿ ಮರಿಯ ಮೇಲೆ ಉರುಳುತ್ತಾ, ಅಜ್ಜಿ ಹೇಳಿದ ಕಥೆಯಲ್ಲಿ ಬರುವ ಪಾತ್ರಗಳೊಂದಿಗೆ ಜಿಗಿಯುತ್ತಾ, ಚಿಟ್ಟೆಗಳ ಹಿಂದೆ ಓಡುತ್ತಾ, ತನ್ನ ಮುದ್ದಾದ ಭಾಷೆಯಲಿ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಿರಬಹುದೇ ತನ್ನ ಪುಟ್ಟ ಕಂದ ? ದುಃಖ್ಖದ ಶ್ರುತಿ ಹಿಡಿದ ತಾಯಿ ಮಗುವಿನ ಪಾದದ ಬಳಿ ಕ್ಷಮೆಯಾಚಿಸುವಂತೆ ಮಂಡಿಯೂರಿ ಕುಳಿತಿದ್ದಾಳೆ.

ಇದಾವುದನ್ನೂ ಅರಿಯದ ಕಂದನ ಮೊಗದಲ್ಲಿ ಇನ್ನೂ ನಸುನಗೆಯೊಂದು ಮಿನುಗುತ್ತಿದೆ. ತನ್ನ ನಿಲುಕಿಗೆ ಸಿಗದ ಕಂದನ ಆ ಲೋಕದಲಿ ತನಗೆ ಸ್ಥಾನವಿದೆಯೆ ಎಂದು ತಾಯಿ ಕಳವಳಗೊಳ್ಳುತ್ತಾಳೆ. ಕಂದನ ಮೇಲೆ ಕೈ ಮಾಡಿದ್ದಕ್ಕಾಗಿ ತನ್ನನ್ನೇ ತಾನು ಶಪಿಸಿಕೊಳ್ಳುತ್ತಾಳೆ. ಎಷ್ಟು ನಿಯಂತ್ರಿಸಿಕೊಂಡರೂ ಸಾಧ್ಯವಾಗದೆ ಕಣ್ಣು ತೇವಗೊಳ್ಳುತ್ತದೆ. ತನ್ನನ್ನು ಮನ್ನಿಸು ಎಂದು ಕಂದನಿಗೆ ಕ್ಷಮಾಪಣೆ ಕೇಳಿದಂತೆ ಮಗುವಿನ ಕೆನ್ನೆಗೊಂದು ಮುತ್ತು ನೀಡಿ ಪ್ರಾಯಶ್ಚಿತಕ್ಕೊಳಗಾಗುತ್ತಾಳೆ ತಾಯಿ...ಮಾತಿಲ್ಲದ ಮೌನ ನಿವೇದನೆಯೊಂದು ಕೊನೆಗೊಳ್ಳುತ್ತದೆ ತನ್ನಷ್ಟಕ್ಕೆ....


(ಮಗುವನ್ನು ಹೆತ್ತು ಬೆಳೆಸಿದ ಪ್ರತಿಯೊಂದು ತಂದೆ-ತಾಯಿಯರು ಅನುಭವಿಸುವ ನೋವು ಇದು. ತಮ್ಮ ಸಾಂಸಾರಿಕ ತಾಪತ್ರಯಗಳ ಮಧ್ಯದಲ್ಲಿ ಮಕ್ಕಳ ಮೇಲೆ ಗದರಿ, ಬಡಿದು, ದಿನದ ಕೊನೆಯ ಮೌನದಲಿ ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಏಳುತ್ತಾರೆ ತಂದೆ-ತಾಯಿಯರು. ಕೆಲಸ-ಕಾರ್ಯಗಳ ಒತ್ತಡದಲ್ಲಿ ತಮ್ಮ ಮಕ್ಕಳ ಮುದ್ದು ಮಂಗಾಟಗಳನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಲೂ ಸಮಯವಿಲ್ಲದಂತಾಗಿದ್ದಾರೆ ಇಂದಿನ ಪಾಲಕರು. ವ್ಯಾಲಿಡಿಟಿ ಮುಗಿದಂತೆ ಮತ್ತೆ ಜರುಗುವ ತಾಳ್ಮೆ ಕಳೆದುಕೊಳ್ಳುವಂತ ಪ್ರಸಂಗಗಳು, ಮತ್ತೆ ಅದನ್ನು ಹಿಂಬಾಲಿಸುವ ಪಶ್ಚಾತ್ತಾಪ, ಈ ಎರಡರಿಂದಲೂ ಮುಕ್ತಿಗೊಳ್ಳಲಿ ತಂದೆ-ತಾಯಿಯರು. ಮಗುವಿನ ತುಂಟಾಟಗಳನ್ನು ನೋಡಿ ಸಂತಸ ಪಡುವಷ್ಟು ಸಮಯ ಅವರಿಗೆ ದಕ್ಕಲಿ)

ಬರವಣಿಗೆಯ ಮೋಹಕ್ಕೆ ಮತ್ತೆ ಸಿಲುಕುವ ಮುನ್ನ...

ಯಾವುದೇ ಅವಸರವಿಲ್ಲದ ಒಂದು ಮಧ್ಯಾಹ್ನದಲಿ ಕಿಟಕಿಯ ಬಳಿ ಕುಳಿತು ಯೋಚಿಸುತ್ತಾ ಪೆನ್ನಿನ ತುದಿಯನ್ನು ಕಚ್ಚಿ ನೆನಪಿಗೆ ಬಂದ ಕವಿತೆಯೊಂದರ ಸಾಲನ್ನು ಬಿಳಿ ಹಾಳೆಯ ಮೇಲೆ ಮೆಚ್ಚಿನ ಪೆನ್ನಿನ ಶಾಯಿಯಲ್ಲಿ ಮೂಡಿಸಿ, ತನ್ನ ಭಾವಗಳು ಅಕ್ಷರಗಳಲ್ಲಿ ಆರುತ್ತಿರುವುದನ್ನು ಅಚ್ಚರಿಯಿಂದ ಗಮನಿಸುತ್ತಾ, ತನ್ನ ಮುಗ್ಧ ಮನಸ್ಸಿಗೆ ತಾನೇ ಸೋತು, ಪದಗಳು ಮನಸಿಗೆ ಬಾರದೆ ಸತಾಯಿಸಿರಲು ಆಕಳಿಸಿ ಎದುರಿನ ಮೇಜಿನ ಮೇಲೆಯೇ ಮಲಗಿ, ರವಿ ದಿನವನ್ನು ಬಿಟ್ಟು ಕೊಡುವ ಹೊತ್ತಿನಲ್ಲಿ ಎಚ್ಚರಗೊಂಡು ಮಲಗುವ ಮೊದಲು ತಾನೇ ಬರೆದಿಟ್ಟ ಸಾಲುಗಳನ್ನು ನೋಡಿ ನಗುವ ನಾನು... ಈ ಅಚ್ಚರಿಯ ಪ್ರಕ್ರಿಯೆಯ ಭಾಗವಾಗದೇ ಅದೆಷ್ಟು ತಿಂಗಳುಗಳು ಕಳೆದವು... ಆರ್ದ್ರಗೊಳ್ಳದೆ ಯುಗಗಳನ್ನು ಕಳೆದ ಮನಸ್ಸಿನಂತೆ...

(ಸರಿ ಸುಮಾರು ಹನ್ನೊಂದು ತಿಂಗಳುಗಳು ಆಯಿತು ನಾನು ಬರೆಯುವುದನ್ನು ನಿಲ್ಲಿಸಿ. ಕಾಲೇಜ್ ಜೀವನದಿಂದ ಪ್ರೊಫೆಶನಲ್ ಜೀವನಕ್ಕೆ ಬಿದ್ದೊಡನೆಯೇ ಗೊತ್ತಾಗಿದ್ದು ನಮ್ಮ ಹವ್ಯಾಸಗಳನ್ನು ಸಂಭಾಳಿಸಿಕೊಂಡು ಹೋಗುವ ಕಷ್ಟ. ಕಳೆದ ಒಂದು ವರ್ಷ ನನ್ನನ್ನೂ ನಾನು ಮರೆತು ಕೆಲಸ ಮಾಡಿದ್ದೆ. ಸ್ನೇಹಿತರು ಅಥವಾ ಕುಟುಂಬಕ್ಕೆ ಹೋಗಲಿ, ನನಗೇ ನಾನು ಸಮಯವನ್ನು ಇಟ್ಟುಕೊಳ್ಳಲು ಆಗಲಿಲ್ಲ. ಹೊಸ ಕೆಲಸ ಹಿಡಿದ ಮೇಲೆ ಸ್ವಲ್ಪ ಸಮಯ ಸಿಕ್ಕುತ್ತಿದೆ ಜೊತೆಗೆ ನನ್ನ ಹವ್ಯಾಸಗಳ ಕಡೆ ಗಮನ ಹರಿಸುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ಬ್ಲಾಗ್ ಲೋಕದಲ್ಲಿ ಏನೇನು ಆಗಿದೆ ಎಂದೂ ನನಗೆ ಗೊತ್ತಿಲ್ಲ. ಮತ್ತೆ ಬರೆಯುವ ಹುಮ್ಮಸ್ಸು ಮೂಡಿದೆ. ಬಿಟ್ಟು ಹೋದ ಊರಿಗೆ ಮತ್ತೆ ಹಿಂತಿರುಗಿದಂತೆ ಅನ್ನಿಸುತ್ತಿದೆ..)

Tuesday, January 25, 2011

ಫ್ರಾನ್ಸಿಸ್ ಹೀಲಿ - ಎನಿಥಿಂಗ್

ನನ್ನನ್ನು ಇತ್ತೀಚಿಗೆ ಅತ್ಯಂತವಾಗಿ ಕಾಡಿದ ಹಾಡು ಇದು... ಕೇಳಿ, ನಿಮಗೂ ಇಷ್ಟವಾಗಬಹುದು. ನನ್ನ ಮೆಚ್ಚಿನ ಬ್ಯಾಂಡ್ "ಟ್ರೇವಿಸ್" ನ ಲೀಡ್ ಸಿಂಗರ್ 'ಫ್ರಾನ್ಸಿಸ್ ಹೀಲಿ' ಯ ಸೋಲೋ ಅಲ್ಬಮ್ "ವ್ರೆಕಾರ್ಡರ್" ಆಲ್ಬಮ್ ನ ಹಾಡು ಇದು.


ವಯುಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ತಿಂಗಳುಗಳು ಬ್ಲಾಗಿನ ಕಡೆ ಗಮನ ಹರಿಸಲು ಆಗುವುದಿಲ್ಲ. ಅಲ್ಲಿಯವರೆಗೆ, ಎಲ್ಲರಿಗೂ ಒಂದು ಸಣ್ಣ ವಿದಾಯ :)

Thursday, January 6, 2011

ನರಸಿಂಹ ಪರ್ವತ ಚಾರಣ - ಭಾಗ ೩

ನನ್ನ ಕಾಲಿಗೆ ಮುತ್ತಿದ್ದ ಉಂಬಳಗಳನ್ನೂ ನೋಡಿ, ಪರ್ವತ ಏರುವ ಹೊತ್ತಿಗೆ ಯಾರಾದರು ನನಗೆ ಒಂದು ಬಾಟಲಿ ರಕ್ತ ನೀಡುವ ವ್ಯವಸ್ಥೆ ಇದ್ದಿದ್ದರೆ ಚನ್ನಾಗಿರುತ್ತಿತ್ತು ಎನ್ನುವ ಭಯ ಕಾಡತೊಡಗಿತ್ತು. ಆಗಾಗ ಕೃಷ್ಣಪ್ಪನಲ್ಲಿ ಇನ್ನೂ ಎಷ್ಟು ದೂರದಲ್ಲಿ ಬಯಲು ಪ್ರದೇಶ ಸಿಗಬಹುದು ಎಂದು ಕೇಳುತ್ತಾ ನಮ್ಮ ರಕ್ತದಾನದ ಮೊತ್ತ ಎಷ್ಟಾಗಬಹುದು ಎಂದು ಪ್ರತಿಯೊಬ್ಬರೂ ಗುಣಾಕಾರ-ಭಾಗಾಕಾರದಲ್ಲಿ ತೊಡಗಿದರು.

ಇಲ್ಲಿಯವರೆಗೆ ನನ್ನ ಕಯ್ಯಿಂದಲೇ ನನ್ನ ವಸ್ತ್ರಾಪಹರಣ ಮಾಡಿಸಿದ್ದ ಉಂಬಳಗಳ ಬಗ್ಗೆ ವಿಪರೀತ ಸಿಟ್ಟು ಬಂದಿತ್ತು. ಕಾಡಿನ ಮಧ್ಯೆ ನಿಂತು ಉಂಬಳಗಳನ್ನು ಬಿಡಿಸಿಕೊಳ್ಳುವ ಯೋಚನೆ ಕೈ ಬಿಟ್ಟು ಎಷ್ಟಾದರೂ ಹತ್ತಲಿ, ಬಯಲು ಪ್ರದೇಶ ಬಂದ ಮೇಲೆ ಅವುಗಳನ್ನು ವಿಚಾರಿಸಿಕೊಂಡರೆ ಆಯಿತು ಎಂದು ನಾನು ತೀರ್ಮಾನಿಸಿದೆ. ಕಾಡು ಈಗ ಇನ್ನಷ್ಟು ದಟ್ಟವಾಗಿತ್ತು. ಅಲ್ಲೆಲ್ಲೂ ದಾರಿ ಎಂಬುದೇ ಇರಲಿಲ್ಲ. ಕೃಷ್ಣಪ್ಪನೂ ದಿಕ್ಕಿನ ಅಂದಾಜು ಮಾಡಿ ದಾರಿ ಮಾಡಿಕೊಳ್ಳುತ್ತಿದ್ದ ಎಂದು ನನ್ನ ಭಾವನೆ; ಅಷ್ಟೊಂದು ದಟ್ಟವಾಗಿತ್ತು ಕಾಡು. ಕೃಷ್ಣಪ್ಪನಿಲ್ಲದೆ ಆ ಕಾಡು ಹೊಕ್ಕರೆ ಬಹುಶ ಅಲ್ಲಿಂದ ಮರಳುವುದನ್ನಾಗಲೀ, ಹೊರಬರುವುದನ್ನಾಗಲೀ ಮರೆತು "ಪ್ಯಾಟೆ ಮಂದಿ ಕಾಡೀಗ್ ಬಂದು ಅಲ್ಲೇ ಕಳೆದು ಹೋದ್ರು" ಅನ್ನೋ ಕಾರ್ಯಕ್ರಮನ ನಾವೇ ಮಾಡಿ ನಾವೇ ನೋಡಿಕೊಳ್ಳುವ ಸಾಧ್ಯತೆಗಳು ಜಾಸ್ತಿ ಇದ್ದವು. ಇವೆಲ್ಲದುರ ಮಧ್ಯೆ ನಮ್ಮ ಜಿತೇಂದ್ರ ಕೃಷ್ಣಪ್ಪನಿಗಿಂತಾ ಮುಂದೆ ಹೋಗಿ, ಹಾದಿ ತಪ್ಪಿ, ನಾವು ಮತ್ತೆ ಮತ್ತೆ ಅವನನ್ನು ಕೂಗಿ ಕರೆದು, ಅವನು ಮತ್ತೆ ನಮ್ಮೊಂದಿಗೆ ಸೇರಿಕೊಳ್ಳುವುದು ನಡೆಯುತ್ತಿತ್ತು. "ಹುರಳಿ ಇಡ್ಲಿ" ಅವನ ದೇಹಕ್ಕೆ ಒಗ್ಗಿದೆ ಅಂತ ನಾವೆಲ್ಲಾ ಒಮ್ಮತಕ್ಕೆ ಬಂದೆವು.


ಈಗ ದಟ್ಟ ಕಾಡಿನ ಜೊತೆಗೆ ನಾವು ಗುಡ್ಡವನ್ನು ಏರುತ್ತಿದ್ದರಿಂದ ಚಾರಣ ಬಹು ಕಷ್ಟ ಎನ್ನಿಸತೊಡಗಿತ್ತು. ಬರ್ಕಣ ಜಲಪಾತದ ಹತ್ತಿರ ತುಂಬಿಕೊಂಡಿದ್ದ ನೀರೆಲ್ಲಾ ನಿಧಾನವಾಗಿ ಖಾಲಿಯಾಗುತ್ತಿದ್ದದ್ದು ನಮ್ಮ ಗಮನಕ್ಕೆ ಬಾರದೆ ಹೋಯಿತು. ಆಗುಂಬೆಯ ಕಾಡಿನ ಕಾಳಿಂಗ ಸರ್ಪದ ಬಗ್ಗೆ ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ ಬಂದಿದ್ದ ಕಾರ್ಯಕ್ರಮದ ಬಗ್ಗೆ ಹಠಾತ್ತಾಗಿ ನೆನಪಾಗಿ ಒಮ್ಮೆ ಕಾಲು ಬುಡದಲ್ಲೆಲ್ಲ ನೋಡಿಕೊಂಡೆ. ಸ್ವಲ್ಪ ದೂರದವರೆಗೂ ನಾವು ಅದರ ಬಗ್ಗೆಯೇ ಮಾತನಾಡುತ್ತ ನಡೆದೆವು. ಅಕ್ಕ ಪಕ್ಕದ ಬಳ್ಳಿಗಳೆಲ್ಲ ಕಾಳಿಂಗ ಸರ್ಪಗಳಾಗೆ ಕಾಣತೊಡಗಿದವು.

ಮುಂದಿನ ಕೆಲವು ನಿಮಿಷಗಳಲ್ಲಿ ಯಾರೂ ಮಾತನಾಡದೆ ಸುಮ್ಮನೆ ನಡೆದರು. ಮೌನ ಮುರಿಯಲು ಪ್ರವೀಣ್ "ಅಲ್ರೋ ಆ ಅಜ್ಜಿ, ಮನೆಯಲ್ಲಿ ತನ್ನ ಜೊತೆಗೆ ತನ್ನ ತಾಯಿಯೂ ಇರುತ್ತಾರೆ, ಆದರೆ ಲೆಕ್ಕಕ್ಕೆ ತಾನೊಬ್ಬಳೆ ಎಂದರಲ್ಲ ಅದು ಯಾವ ಲೆಕ್ಕ ಎಂದು ಗೊತ್ತಾಗಲಿಲ್ಲ" ಎಂದ. ತಮ್ಮದೇ ಯೋಚನೆಗಳಲ್ಲಿ ಮುಳುಗಿದ್ದ ನಾವೆಲ್ಲರೂ ಅವನ ತರ್ಕ ಕೇಳಿ ಗೊಳ್ಳನೆ ನಕ್ಕೆವು. ವಿನಯ್ ಹಾಗು ಸಂತೋಷ್ ಮೆಣಸಿನ ಚಟ್ನಿಯ ಅಥೆಂಟಿಸಿಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಸಲಿಗೆ ಮೆಣಸಿನ ಚಟ್ನಿಗೆ ಮೆಣಸಿನಕಾಯಿ ಉಪಯೋಗಿಸಿಯೇ ಇರಲಿಲ್ಲ, ಮೆಣಸಿನ ಗಿಡದ ಎಲೆಗಳನ್ನೇ ರುಬ್ಬಿ ಚಟ್ನಿ ಮಾಡಲಾಗಿದೆ ಎನ್ನುವ ಸತ್ಯವನ್ನು ನಾವು ಮನಗಂಡೆವು. ಕಿಡಿ ತಾಕಿದ ಪಟಾಕಿ ಸರದಂತೆ ಎಲ್ಲರೂ ಮಾತನಾಡತೊಡಗಿದರು. ಹೀಗೆ ಎಷ್ಟು ದೂರ ನಡೆದೆವೋ ಏನೋ, ಕೊನೆಗೆ ೨.೧೫ ರ ಸುಮಾರಿಗೆ ಒಂದು ಹುಲ್ಲುಬಯಲ ಜಾಗ ತಲುಪಿದೆವು. ಇನ್ನು ಮುಂದೆ ಎಲ್ಲೂ ಕಾಡು ಸಿಗುವುದಿಲ್ಲ, ಬರಿ ಬೆಟ್ಟಗಳು ಎಂದು ಕೃಷ್ಣಪ್ಪನಿಂದ ಕನ್ಫರ್ಮ್ ಆದ ಮೇಲೆ ಕಾಲೇರಿ ಸುಖವಾಗಿ ರಕ್ತ ಹೀರುತ್ತಿದ್ದ ಉಂಬಳಗಳಿಗೆ ಮುಕ್ತಿ ಕಾಣಿಸೋಣ ಎಂದು ಕುಳಿತೆವು. ಬೆಳಗ್ಗಿನಿಂದ ಒಟ್ಟಿನಲ್ಲಿ ನನ್ನ ಕೌಂಟ್ ೧೬ಕ್ಕೆ ಏರಿತ್ತು.


ಕಾಲನ್ನು ಉಂಬಳ ಮುಕ್ತಗೊಳಿಸಿ ಸ್ವಲ್ಪ ವಿಶ್ರಮಿಸಿಕೊಂಡು ಹೊರೆಟಾಗಲೇ ನಮಗೆ ಅರಿವಾಗಿದ್ದು ನಮ್ಮಲ್ಲಿ ಅತ್ಯಲ್ಪ ನೀರು ಉಳಿದಿದೆಯೆಂದು. ಕೃಷ್ಣಪ್ಪನಲ್ಲಿ ಮುಂದೆ ಎಲ್ಲಿ ನೀರು ಸಿಗಬಹುದು ಎಂದು ಕೇಳಿದೆವು. ಇನ್ನು ಪರ್ವತದ ತುದಿಯಲ್ಲಿ ಅಲ್ಲದೆ ಬೇರೆಲ್ಲೂ ನೀರು ಸಿಗುವುದಿಲ್ಲ ಎಂದು ತಿಳಿದು ಎಲ್ಲರೂ ಬಿಳಿಚಿಕೊಳ್ಳತೊಡಗಿದರು. ಆಗಲೇ ನೆತ್ತಿ ಏರಿ ಕುಳಿತಿದ್ದ ಸೂರ್ಯ ನೀರಿಲ್ಲದ ನಮ್ಮನ್ನು ನೋಡಿ ಅಣಕಿಸಿದಂತೆ ಕಂಡಿತು.


ಕಾಡಿನಿಂದ ಹೊರಬಿದ್ದಿದ್ದ ನಮಗೆ ಇಲ್ಲಿನ ದೃಶ್ಯಗಳು ಚೇತೋಹಾರಿಯಾಗಿದ್ದವು. ಈಗ ಉಂಬಳಗಳ ಬಗ್ಗೆ ಭಯಪಡುವ ಅಗತ್ಯವೂ ಇರಲಿಲ್ಲ. ಮುಗಿಲನ್ನೆ ಬಗ್ಗಿಸುವ ತವಕದಲ್ಲಿದ್ದಂತೆ ಕಾಣುತ್ತಿದ್ದ ಎತ್ತರದ ಪರ್ವತ ಶ್ರೇಣಿಗಳು, ಕಂಡಷ್ಟು ದೂರಕ್ಕೂ ತುಂಬಿದ್ದ ಹಸಿರು, ನೀಲಾಗಸ, ತಣ್ಣನೆಯ ಗಾಳಿ ಎಲ್ಲವೂ ನಮ್ಮ ದಣಿವನ್ನು ಕ್ಷಣ ಮಾತ್ರದಲ್ಲಿ ಮರೆಯಾಗಿಸಿತ್ತು. ಇಷ್ಟು ಹೊತ್ತು ಸುಮ್ಮನಿದ್ದ ನಮ್ಮ ಕ್ಯಾಮೆರಾಗಳು ಕಾರ್ಯೋನ್ಮುಖವಾದವು.



ಹೀಗೆ ಮಾತಾಡುತ್ತ, ಫೋಟೋ ತೆಗೆಯುತ್ತಾ, ಒಂದೆರಡು ಗುಡ್ಡಗಳನ್ನು ಹಾಡು ಒಂದು ಎತ್ತರದ ಗುಡ್ಡದ ಬುಡಕ್ಕೆ ಬಂದೆವು. "ಈ ಗುಡ್ಡವನ್ನು ದಾಟಿದರೆ ಅದರ ಹಿಂದಿರುವುದೇ ನರಸಿಂಹ ಪರ್ವತ" ಎಂದು ಕೃಷ್ಣಪ್ಪ ಹೇಳಿದ. ನೀರಿಲ್ಲದೆ ನಾವೆಲ್ಲಾ ಬಸವಳಿದಿದ್ದೆವು. ಮತ್ತೊಮ್ಮೆ ಸ್ವಲ್ಪ ವಿಶ್ರಮಿಸಿಕೊಂಡು ಗುಡ್ಡವನ್ನು ಏರಲು ಶುರು ಮಾಡಿದೆವು. ಆದಷ್ಟು ಬೇಗ ತುದಿಯನ್ನು ತಲುಪುವ ಯೋಚನೆಯಲ್ಲಿದ್ದ ನನ್ನ ಎಣಿಕೆ ಸಂಪೂರ್ಣ ತಲೆಕೆಳಗಾಯಿತು. ಗುಡ್ಡದ ಇಳುಕಲು ಸುಮಾರು ೫೫ ರಿಂದ ೬೫ ಡಿಗ್ರಿ ಇತ್ತು. ಒಂದೊಂದು ಹೆಜ್ಜೆ ಇಡುವುದೂ ದುಸ್ತರವಾಗಿತ್ತು. ಬೆನ್ನಿಗೆ ಚೀಲದ ಭಾರ ಹಾಗು ೬೫ ಡಿಗ್ರಿಯಷ್ಟು ಇಳುಕಲಿದ್ದ ಗುಡ್ದದಿಂದಾಗಿ ಕಾಲುಗಳು ಥರಗುಟ್ಟಿದವು. ಕೇವಲ ಒಂದು ಸ್ಟ್ರೆಚ್ ಇದ್ದ ಗುಡ್ಡವನ್ನು ಏರಲು ನಾನು ಎರಡು ಬಾರಿ ಕೂತು ಸುಧಾರಿಸಿಕೊಳ್ಳಬೇಕಾಯಿತು. ಇದುವರೆಗೆ ಮಾಡಿದ ಪ್ರಯಾಣ ಒಂದು ಸವಾಲಾದರೆ, ಈ ಗುಡ್ಡವೇ ಇನ್ನೊಂದು ಸವಾಲು. ಉಸಿರು ಎಳೆದುಕೊಳ್ಳಲೂ ನಾವೆಲ್ಲಾ ಪರದಾಡಬೇಕಾಯಿತು. ಕೊನೆಗೂ ತುದಿ ತಲುಪಿ, ಒಂದು ಸಣ್ಣ ಕಾಡು ದಾಟಿ ನರಸಿಂಹ ಪರ್ವತದ ನೆತ್ತಿಯನ್ನು ತಲುಪಿಯೇ ಬಿಟ್ಟೆವು. ಸಮಯ ೪ ಗಂಟೆ ಆಗಿತ್ತು.



ಎಲ್ಲರೂ ನೀರು ಸಿಗುತ್ತದೆ ಎಂಬ ಖುಷಿಯಲ್ಲಿ ನೆತ್ತಿಗೆ ಓಡಿದರೆ ಅಲ್ಲಿದ್ದದ್ದು ಮಳೆಗಾಲದಲ್ಲಿ ನೀರು ನಿಂತ ಹೊಂಡವಾಗಿತ್ತು. ಆ ನೀರು ಯಾವುದೇ ರೀತಿಯಲ್ಲಿಯೂ ಕುಡಿಯಲು ಯೋಗ್ಯವಾಗಿರಲಿಲ್ಲ. ಕುಡಿಯಲು ಬಿಡಿ, ಮುಖ ತೊಳೆಯಲೂ ಅಯೋಗ್ಯವಾಗಿತ್ತು. ನಮ್ಮ ಆಸೆಯಲ್ಲ ಬತ್ತಿ ಹೋಯಿತು. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನೆ ಮಲಗಿದರು. ಬೇರೆ ಯಾರಾದರೂ ನೋಡಿದ್ದರೆ ಇದೊಂದು "ಸಾಮೂಹಿಕ ಶಾವಾಸನ" ಎಂದುಕೊಳ್ಳುತ್ತಿದರೋ ಏನೋ ಆ ರೀತಿಯಲ್ಲಿ ಎಲ್ಲರೂ ಬಿದ್ದುಕೊಂಡಿದ್ದೆವು. ಬೇರಾವುದೇ ದಾರಿ ಕಾಣದೆ ನಾವು ತಂದಿದ್ದ ರೊಟ್ಟಿ-ಚಪಾತಿ-ಚಟ್ನಿಗಳನ್ನು ತೆಗೆದೆವು. ವಿಪರೀತ ಹಸಿವಾದ್ದರಿಂದ ರೊಟ್ಟಿ-ಚಟ್ನಿ ಅಮೃತದಂತೆ ಅನ್ನಿಸಿತ್ತು. ಆವರಿಸಿಕೊಳ್ಳುತ್ತಿದ್ದ ಮೋಡ ತಂಪು ನೀಡಿತ್ತು.



ಊಟ ಮುಗಿಸಿ ಮತ್ತಷ್ಟು ಆರಾಮು ಮಾಡಿ ನಮ್ಮ ಅವರೋಹಣವನ್ನು ಪ್ರಾರಂಭಿಸಿದೆವು. ಈ ಹಾದಿ ನಾವು ಹತ್ತಿದ ದಾರಿಗೆ ತೀರಾ ವ್ಯತಿರಿಕ್ತವಾಗಿತ್ತು. ಇಲ್ಲಿ ಕಾಲು ಹಾದಿ ಇತ್ತು. ಉಂಬಳಗಳು ಇರಲಿಲ್ಲ. ಸುಲಭವಾಗಿ ಇಳಿಯಲು ಹೇಳಿ ಮಾಡಿಸಿದಂತಿತ್ತು. ಸುಮಾರು ೬ ಗಂಟೆಯ ಹೊತ್ತಿಗೆ ನಾವು ಕಿಗ್ಗಾ ಎಂಬ ಊರನ್ನು ತಲುಪಿದೆವು. ಅಲ್ಲಿ ನಮ್ಮನ್ನು ಹೊತ್ತೊಯ್ಯಲು ಸುಬ್ಬುವಿನ ಜೀಪು ತಯಾರಾಗಿತ್ತು.


ಕೊನೆಯಲ್ಲಿ : ದೊಡ್ಮನೆಯ ತಿಂಡಿ ಹಾಗು ಅಜ್ಜಿಯ ಘಟನೆಗಳನ್ನು ಸ್ವಲ್ಪ ಹಾಸ್ಯಮಯವಾಗಿ ಬರೆದಿದ್ದೇನೆ. ಜೋಕ್ಸ್ ಅಪಾರ್ಟ್, ಹೊಸ್ತಿಲು ದಾಟಲಾಗದ ಆ ವೃದ್ದೆ ತಿಂಡಿ ಮಾಡಿ ಹಾಕುವುದೂ ಕಷ್ಟದ ಕೆಲಸವೇ. ನಮ್ಮ ಗ್ರಹಚಾರಕ್ಕೋ ಏನೋ ಅಂದಿನ ತಿಂಡಿಗಳು ಚನ್ನಾಗಿರಲಿಲ್ಲ. ಹಾಗೆಂದು ಅಲ್ಲಿಯ ತಿಂಡಿ ಕೆಟ್ಟದಾಗೆ ಇರುತ್ತದೆ ಎಂದು ನಾನು ಹೇಳಲಾರೆ. ಮತ್ತೊಂದು ವಿಷಯವೆಂದರೆ, ನರಸಿಂಹ ಪರ್ವತದಂತಹ ಕಠಿಣ ಚಾರಣದ ಜಾಗಗಳಲ್ಲಿಯೂ ತಿಂದು ಬಿಟ್ಟ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು ಇದ್ದದ್ದು ನೋಡಿ ಬೇಸರವಾಯಿತು. ಅಷ್ಟೊಂದು ಸುಂದರ ಪರಿಸರದಲ್ಲಿ ಗಲೀಜು ಮಾಡಲು ಹೇಗಾದರೂ ಮನಸ್ಸು ಬರುತ್ತದೆ ಜನರಿಗೆ? ನೀವು ಎಂದಾದರೂ ಚಾರಣಕ್ಕೆ ಹೋಗುವುದಾದರೆ ನಮ್ಮ ತಂಡದಿಂದ ಒಂದು ಕೋರಿಕೆ. ದಯವಿಟ್ಟು ನೀವು ಉಪಯೋಗಿಸುವ ಪೇಪರ್ ತಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು, ಅಥವಾ ಏನೇ ತ್ಯಾಜ್ಯ ವಸ್ತುಗಳು ಉಳಿದರೂ ನಿಮ್ಮ ಚೀಲದಲ್ಲೇ ಹಾಕಿಕೊಂಡು ಬನ್ನಿ, ಎಲ್ಲಾದರೂ ಕಸದ ಬುಟ್ಟಿ ಕಂಡರೆ ಅದಕ್ಕೆ ಹಾಕಿ. ಪ್ರಜ್ನಾವಂತರಾಗಿ ನಮ್ಮಿಂದ ಪ್ರಕೃತಿಗೆ ಅಷ್ಟಾದರೂ ಮಾಡುವುದು ಕಷ್ಟವಲ್ಲ ಎಂದು ನಮ್ಮ ಅನಿಸಿಕೆ.

(ಮುಗಿಯಿತು)

Sunday, January 2, 2011

ನರಸಿಂಹ ಪರ್ವತ ಚಾರಣ - ಭಾಗ ೨

ಕಣ್ಣು ಬಿಟ್ಟಾಗ ಕಡುನೀಲಿ ಆಗಸ, ಗುಡ್ಡಗಳು, ತೋಟಗಳೂ ಅಸ್ಪಷ್ಟವಾಗಿ ಕಾಣುತ್ತಿದ್ದವು. ಸುಬ್ಬು ತದೇಕಚಿತ್ತದಿಂದ ಜೀಪನ್ನು ಓಡಿಸುತ್ತಿದ್ದ. ಉಳಿದವರೆಲ್ಲಾ ತೂಕಡಿಸುತ್ತಲೋ ಅಥವಾ ನಿದ್ದೆಯಲ್ಲೋ ಇದ್ದರು. ಆಗಾಗ ರಸ್ತೆಯ ಗುಂಡಿಗಳಲ್ಲಿ ಇಳಿದು ಮೇಲೆ ಹತ್ತುತ್ತಿದ್ದ ಚಕ್ರದ ಹೊಡೆತಕ್ಕೆ ಎಚ್ಚರಾಗಿ ಒಮ್ಮೆ ಆಕಡೆ ಈಕಡೆ ನೋಡಿ ಮತ್ತೆ ತಲೆಯನ್ನು ಸೀಟಿಗೆ ಒರಗಿಸುತ್ತಿದ್ದ ಪ್ರವೀಣ್ ಹಾಗು ಅರುಣ ತಮಾಷೆಯಾಗಿ ಕಾಣುತ್ತಿದರು. ಜೀಪಿನ ಹೆಡ್ ಲೈಟ್ ಬೆಳಕಿಗೆ ಭಯ ಪಟ್ಟು ಮರಗಳ ಹಿಂದೆ ಕತ್ತಲು ಅಡಗಿಕೊಳ್ಳುವಂತೆ ಅನ್ನಿಸುತ್ತಿತ್ತು. ಕ್ಷಣ ಕ್ಷಣಕ್ಕೂ ಬಾನು ಬೆಳಗುತ್ತಾ ಜಗವನ್ನೇ ಗೆಲ್ಲುವ ತವಕದಲ್ಲಿ ರವಿಯು ಮೂಡಣದಲ್ಲಿ ಮೈಮುರಿಯುತ್ತಿದ್ದ ದೃಶ್ಯ ಅವರ್ಣನೀಯವಾಗಿತ್ತು. ಇನ್ನೂ ನಿದ್ದೆಗಣ್ಣಲ್ಲೇ ಇದ್ದುದ್ದರಿಂದಲೋ ಏನೋ, ಈ ಎಲ್ಲ ಕ್ರಿಯೆಗಳು ಕಿನ್ನರಲೋಕದಲ್ಲಿದ್ದಂತೆ ಭಾವನೆ ಮೂಡಿಸಿದ್ದವು.

ಸುಮಾರು ೭ ಗಂಟೆಯ ಹೊತ್ತಿಗೆ ನಾವು ಉಳಿಯಬೇಕಿದ್ದ ಅರೆಹಳ್ಳಿಯ ವಸಂತ್ ಕುಮಾರ್ ಅವರ ಮನೆ ತಲುಪಿದೆವು. ಆಗಲೇ ತಡವಾದ್ದರಿಂದ ಎಲ್ಲರೂ ಬೇಗಬೇಗನೆ ಹಲ್ಲುಜ್ಜಿ, ಮುಖ ತೊಳೆದು, ಬಿಸಿ ಬಿಸಿ ಕಾಫಿ ಹೀರಿ ಆಗುಂಬೆಯ ಕಡೆಗೆ ಪಯಣ ಬೆಳೆಸಿದೆವು. ಆಗುಂಬೆಯ 'ದೊಡ್ಮನೆ'ಯಲ್ಲಿ ಉಪಾಹಾರ ಮಾಡುವುದು ಎಂದು ಮೊದಲೇ ನಿರ್ಧರಿಸಿದ್ದೆವು.

ದೊಡ್ಮನೆಯ ಕಟ್ಟೆಯ ಮೇಲೆ ವಿನಾಯಕ ಹಾಗು ಜಿತೇಂದ್ರ

ದೊಡ್ಮನೆಯ ಒಳ ಅಂಕಣ
ಈ 'ದೊಡ್ಮನೆ' ಆಗುಂಬೆಯಲ್ಲಿ ಬಹಳ ಫೇಮಸ್. ಈ ಮನೆಯನ್ನು ಶಂಕರ್ ನಾಗ್ ಅವರ 'ಮಾಲ್ಗುಡಿ ಡೇಸ್' ನಲ್ಲಿ ಬಳಸಿಕೊಳ್ಳಲಾಗಿದೆ. ದಪ್ಪ ದಪ್ಪ ಕಂಬಗಳಿರುವ ಆ ಮನೆ ಹೊರಗಿನಿಂದ ಆಕರ್ಷಕವೆನಿಸಿತು. ಒಳಗಿನಿಂದ ತಿಂಡಿಗೆ ಕರೆ ಬಂದಿತು. ನಾನು ಹಿಂದಿನ ರಾತ್ರಿ ಹೊರಡುವ ಭರದಲ್ಲಿ ಸರಿಯಾಗಿ ಊಟ ಮಾಡಿಲ್ಲವಾದ್ದರಿಂದ ಭರ್ಜರಿ ತಿಂಡಿಯ ಕನಸು ಕಾಣುತ್ತಾ ಒಳನಡೆದೆ. ಮನೆಯ ಒಳಾಂಗಣ ಹೊರಗಿನಷ್ಟು ಖಾಸ್ ಅನ್ನಿಸಲಿಲ್ಲ. ಒಂದು ಪುಟ್ಟ ಅಂಗಳವಿತ್ತು ಒಳಗೆ. ಹಳೆ ಮಲೆನಾಡಿನ ಮನೆಗಳನ್ನು ನೆನಪಿಸುವಂತಿತ್ತು. ಒಳಗೆ ಕಾಲಿಟ್ಟಾಗ ನಾಲ್ಕಾರು ಉತ್ತರ ಭಾರತೀಯರು ತಿಂಡಿ ಸವಿಯುತ್ತಿದ್ದರು. ದೊಡ್ಮನೆಯನ್ನು ನೀವು ಹೋಟೆಲ್ ಎಂದು ತಪ್ಪು ತಿಳಿಯಬಾರದು. ಇಲ್ಲಿ ತಿಂಡಿಗೆ ಹೋಗುವುದಾದರೆ ಮೊದಲೇ ಕರೆ ಮಾಡಿ ತಿಳಿಸಿಡಬೇಕು. ಈ ಮನೆಯ ಒಡತಿ, ಸುಮಾರು ೬೦ ವರ್ಷದ ವೃದ್ದೆ, ನಿಮಗೆ ತಿಂಡಿ ಮಾಡಿ ಇಟ್ಟಿರುತ್ತಾರೆ. ಈಗ ತಿಂಡಿಯ ವಿಷಯಕ್ಕೆ ಮರಳೋಣ. ನನಗೆ ಮೊದಲಿಗೆ ಅವರೆಲ್ಲ ಏನು ತಿಂಡಿ ತಿನ್ನುತ್ತಿದ್ದಾರೆ ಎಂದು ಗೊತ್ತಾಗಲಿಲ್ಲ. ಅಂದು ದೊಡ್ಮನೆಯ ಸ್ಪೆಷಲ್ ಹುರುಳಿ ಇಡ್ಲಿ, ಮೆಣಸಿನ ಚಟ್ನಿ, ಹಾಗು ಉಪ್ಪಿಟ್ಟಾಗಿತ್ತು. ಜೊತೆಗೆ ಕುಡಿಯಲು ಕಷಾಯ. ಬಂದ ಉತ್ತರ ಭಾರತೀಯರಿಗೆ ಅಜ್ಜಿ ಇಂಗ್ಲಿಶ್-ಹಿಂದಿ ಮಿಶ್ರಿತ ಭಾಷೆಯಲ್ಲಿ ಅಂದಿನ ತಿಂಡಿಗಳ ಬಗ್ಗೆ ವಿವರಿಸುತ್ತಿದ್ದದ್ದು ಹಾಸ್ಯಾಸ್ಪದವಾಗಿತ್ತು. ಕಷಾಯಕ್ಕೆ ಅವರು ಕೊಟ್ಟ ಹೆಸರು ' ಆಯುರ್ವೇದಿಕ್ ಮಾಲ್ಟ್ ' ಹುರುಳಿ ಇಡ್ಲಿಯನ್ನು ಕಷ್ಟಪಟ್ಟು ಹೊಟ್ಟೆಗೆ ತಳ್ಳಿದ ಮೇಲೆ, ಉಪ್ಪಿಟ್ಟಿನ ಮೇಲೆ ಗಮನ ಹರಿಸೋಣ ಎಂದು ಎರಡು ತುತ್ತು ಉಪ್ಪಿಟ್ಟು ತಿಂದ ಮೇಲೆಯೇ ಗೊತ್ತಾಗಿದ್ದು ಉಪ್ಪಿಟ್ಟಿಗೆಂದು ಹುರಿದ ರವೆಯನ್ನು ಅಗತ್ಯಕ್ಕಿಂತ ಜಾಸ್ತಿಯೇ ಹುರಿಯಲಾಗಿದೆ ಎಂದು. ಅಲ್ಲಿಗೆ ಬೆಳಗಿನ ತಿಂಡಿ ಮುಗಿಸುವುದೇ ನಮಗೆ ಚಾರಣಕ್ಕಿಂತ ದೊಡ್ಡ ಸವಾಲಾಯಿತು. ಇಷ್ಟರ ಮಧ್ಯೆ ಪ್ರವೀಣ್ ಸುಮ್ಮನಿರಲಾರದೆ "ಈ ಮನೆಯಲ್ಲಿ ನೀವೊಬ್ಬರೇ ಇರುವುದೇ ?" ಎಂದು ಸಂದರ್ಶನ ಮಾಡುವ ಶೈಲಿಯಲ್ಲಿ ಪ್ರಶ್ನೆಯೊಂದನ್ನು ಕೇಳಿಯೇಬಿಟ್ಟ. ಅದಕ್ಕವರು "ಇಲ್ಲ, ನಾನು ಹಾಗು ನನ್ನ ತಾಯಿ ಇರುವುದು. ಆದರೆ ಲೆಕ್ಕಕ್ಕೆ ನಾನೊಬ್ಬಳೆ" ಎಂದರು. ಕಷಾಯ ಕುಡಿದು ಎಲ್ಲರೂ ತಿಂಡಿ ಎಂಬ ತಿಂಡಿಯನ್ನು ಮುಗಿಸಿ ದೊಡ್ಮನೆಯಿಂದ ಹೊರಬಿದ್ದೆವು.

ಆಗುಂಬೆಯಿಂದ ಮಲ್ಲಂದೂರಿಗೆ ತಲುಪಿ ಅಲ್ಲೆಲ್ಲಾ ನಮ್ಮ ಗೈಡ್ ಕೃಷ್ಣಪ್ಪನನ್ನು ಹುಡುಕತೊಡಗಿದೆವು. ನಾಲ್ಕಾರು ಮನೆ ಕೇಳುವಷ್ಟರಲ್ಲಿ ಕೃಷ್ಣಪ್ಪನ ಮನೆ ಸಿಕ್ಕಿತು. ಕೃಷ್ಣಪ್ಪ ಆಗಲೇ ನೀರಿನೊಂದಿಗೆ ಹೊರಡಲು ಅಣಿಯಾಗಿದ್ದ. ನಮ್ಮಲ್ಲಿ ಹಲವರು ಉಂಬಳಗಳನ್ನೂ ಎದುರಿಸಲು ಬೂಟಿಗೆಲ್ಲ ಸುಣ್ಣ ಬಳಿದುಕೊಂಡು ತಯಾರಾಗಿ ಕೃಷ್ಣಪ್ಪನನ್ನು ಹಿಂಬಾಲಿಸಿದೆವು. ವಿಧ್ಯುಕ್ತವಾಗಿ ಚಾರಣ ಈಗ ಶುರು ಆಗಿತ್ತು ಎನ್ನಬಹುದು. ಬರ್ಕಣ ಜಲಪಾತವನ್ನು ನೋಡಿ ಅಲ್ಲಿಂದ ನರಸಿಂಹ ಪರ್ವತ ಹತ್ತುವುದು ನಮ್ಮ ಪ್ಲ್ಯಾನ್ ಆಗಿತ್ತು.

ದಟ್ಟ ಕಾಡೊಳಗೆ ನುಗ್ಗುತ್ತಿರುವ ನಮ್ಮ ತಂಡ ( ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಇನ್ನು ಮುಂದಿನದನ್ನು ಸಂಕ್ಷೀಪ್ತವಾಗಿ ಹೇಳಬೇಕೆಂದರೆ ಬರ್ಕಣ ಜಲಪಾತ ತಲುಪುವವರೆಗೂ ನಾವು ಮಾಡಿದ್ದು ಉಂಬಳಗಳನ್ನೂ ಬಿಡಿಸುತ್ತಾ, ರಕ್ತ ಒರೆಸಿಕೊಳ್ಳುತ್ತಾ, ತಮಾಷೆ ಮಾಡುತ್ತಾ ಸಾಗಿದ್ದು ಅಷ್ಟೇ. ಕಾಡು ಎಷ್ಟು ದಟ್ಟವಾಗಿತ್ತೆಂದರೆ ಹಲವು ಕಡೆ ಬೆಳಕು ನೆಲವನ್ನೂ ತಾಕುತ್ತಿರಲಿಲ್ಲ. ಲಂಟಾನ ಜಿಗ್ಗುಗಳಲ್ಲಿ ನುಗ್ಗುತ್ತಾ ಕೃಷ್ಣಪ್ಪನ ಹಿಂದೆ ಕೆಲವು ಕಡೆ ಓಡಿದಂತೆ ನಡೆಯುತ್ತಿದ್ದವು. ಉಂಬಳಗಳು ನಮಗೆ ಎಲ್ಲೂ ನಿಲ್ಲಲು ಆಸ್ಪದ ನೀಡಲಿಲ್ಲ. ಒಂದು ಬಿಡಿಸಲು ನಿಂತರೆ ಹತ್ತು ಉಂಬಳಗಳು ಕಾಲನ್ನು ಮುತ್ತುತ್ತಿದ್ದವು. ಸುಮಾರು ೧೧ ಗಂಟೆ ಅಷ್ಟೊತ್ತಿಗೆ ಬರ್ಕಣ ಜಲಪಾತವನ್ನು ತಲುಪಿದೆವು. ನಾವು ಜಲಪಾತದ ಮೇಲ್ಬಾಗಕ್ಕೆ ಬಂದಿದ್ದರಿಂದ ಮೇಲಿನಿಂದಲೇ ಜಲಪಾತ ಬೀಳುತ್ತಿರುವುದನ್ನು ನೋಡಿ ಸಂತೋಷಪಡಬೇಕಾಯಿತು. ಜಲಪಾತದ ಪೂರ್ಣ ನೋಟ ಸಿಗದಿದ್ದಕ್ಕಾಗಿ ಬೇಸರವಾಯಿತು. ವಿನಯ್ ಜಲಪಾತ ನೋಡುವ ಭರದಲ್ಲಿ ಮಲಗಿದ್ದ ಒಂದು ಹಾವನ್ನು ತುಳಿಯುವವನಿದ್ದ. ನಾವೆಲ್ಲಾ ಜಲಪಾತದ ಹತ್ತಿರದ ಬಂಡೆಗಳ ಮೇಲೆ ಕುಳಿತು ಉಂಬಳಗಳನ್ನು ಬಿಡಿಸುವ ಕಾರ್ಯದಲ್ಲಿ ತೊಡಗಿದೆವು. ಅಲ್ಲೇ ಸ್ವಲ್ಪ ವಿಶ್ರಮಿಸಿಕೊಂಡು ಹಸಿದ ಹೊಟ್ಟೆಗೆ ಒಂದೊಂದು ರೊಟ್ಟಿ ಎಸೆದು ಚಾರಣವನ್ನು ಮುಂದುವರೆಸುವ ಯೋಚನೆ ಮಾಡಿದೆವು.

ಇಂಡಿಯನ್ ಪಿಟ್ ವೈಪರ್ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಬರ್ಕಣ ಜಲಪಾತದ ಮೇಲಿನಿಂದ ನೋಟ (ಫೋಟೋ ಕೃಪೆ : ಪ್ರವೀಣ್ ಕೆ.ಆರ್)

ಮುಂದುವರೆಯುವುದು....