Thursday, November 27, 2008

ಅನಾವಶ್ಯಕ





ಕಳೆದ ಭಾನುವಾರ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಬರಲಿ ಎಂದು ಜಪಿಸುತ್ತ ಕುಳಿತಿದ್ದೆ. ಮಳೆಯೇನೋ ಬಂತು ಆದರೆ ಪಂದ್ಯ ನಿಲ್ಲುವಷ್ಟು ಬರ್ಲಿಲ್ಲ. ನಿಮಗೆ ಆಶ್ಚರ್ಯ ಆಗಬಹುದು ಎಲ್ಲರು ಪಂದ್ಯ ನಡೆಯಲಿ ಎಂದು ಕಾಯುತ್ತಿದ್ದಾರೆ ಇವನು ಮಳೆ ಬರಲಿ ಎಂದು ಕಾಯುತ್ತಿದ್ದಾನೆ ಎಂದು. ಅದಕ್ಕೆ ಒಂದು ಕಾರಣವಿದೆ. ನಾನು ಕ್ರಿಕೆಟ್ ಪ್ರೇಮಿಯೇ, ಆದರೆ ಇಡಿ ರಾಜ್ಯ ವಿದ್ಯುತ್ ಕೊರತೆ ಎದುರಿಸಿತ್ತಿರುವಾಗ ಇಲ್ಲಿ ಕೇವಲ ಮನೋರಂಜನೆಗೊಸ್ಕರ ಒಂದು ಕ್ರಿಕೆಟ್ ಪಂದ್ಯವನ್ನು ರಾತ್ರಿ ಇಡಿ ವಿದ್ಯುತ್ ಉರಿಸಿ ಆಡಿಸುವ ಅಗತ್ಯತೆ ಬಗ್ಗೆ ನನಗೆ ಬೇಸರವಿದೆ. ಬಿ.ಸಿ.ಸಿ.ಐ ವರು ವಿದ್ಯುತ್ ನ ಹಣವನ್ನು ಪಾವತಿಸಬಹುದು. ಆದರೆ ವಿದ್ಯುತ್ ಒಂದು ನವೀಕರಿಸಲಾಗದ ಶಕ್ತಿಯ ಮೂಲ ಎನ್ನುವ ವಿಷಯವನ್ನು ನಾವು ಮರೆಯಬಾರದು. ಎಷ್ಟು ಹಣ ಕೊಟ್ಟರೂ ಬಳಸಿದ ವಿದ್ಯುತ್ ಮತ್ತೆ ದೊರಕುವುದಿಲ್ಲ ಎಂಬುದು ಸತ್ಯ. ರಾಜ್ಯಕ್ಕೆ ೧೭೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ, ೪೦೦ ಕೋಟಿ ವೆಚ್ಚದಲ್ಲಿ ವಿದ್ಯುತ್ತನ್ನು ಹೊರ ರಾಜ್ಯಗಳಿಂದ ಖರೀದಿ ಮಾಡುತ್ತಿರುವುದಾಗಿ ಮಾನ್ಯ ಸಚಿವರು ಅದೇ ದಿನದಂದು ಘೋಷಿಸಿದ್ದರು. ವಿದ್ಯಾರ್ಥಿಗಳು, ಜನಸಾಮಾನ್ಯರು ವಿದ್ಯುತ್ ಇಲ್ಲ ಎಂದು ತಲೆ ಕೆಡಿಸಿಕೊಂಡರೆ ಇವರಿಗೆ ಪಂದ್ಯ ನಡೆಸುವ ಬಗ್ಗೆ ಯೋಚನೆ. ಮನೋರಂಜನೆ ಬೇಕು ಆದರೆ ಅದಕ್ಕಾಗಿ ಅನಾವಶ್ಯಕವಾಗಿ ಖರ್ಚು ಮಾಡುವುದು ಸರಿಯಲ್ಲ ಎಂದು ನನ್ನ ಭಾವನೆ.




ಇದೆ ರೀತಿಯ ಇನ್ನೊಂದು ದುಂದು ವೆಚ್ಚದ ಆಟ ಫಾರ್ಮುಲ ಒನ್ ರೇಸಿಂಗ್. ಸುಮಾರು ೨೦ ಕಾರುಗಳು ೩೦೦ ಕಿಲೋ ಮೀಟರ್ ಗೂ ಜಾಸ್ತಿ ದೂರವನ್ನು ಅರ್ಥವಿಲ್ಲದೆ ಸುತ್ತುತ್ತವೆ. ಅಷ್ಟು ಸುತ್ತುವಷ್ಟರಲ್ಲಿ ಎಷ್ಟು ಪೆಟ್ರೋಲ್ ಖರ್ಚಗಿರುತ್ತೋ ದೇವರೇ ಬಲ್ಲ. ಸಧ್ಯಕ್ಕೆ ಈ ಆಟ ಇನ್ನು ಭಾರತಕ್ಕೆ ಕಾಲಿಟ್ಟಿಲ್ಲ, ೨೦೧೧ ಅಷ್ಟರಲ್ಲಿ ಇಲ್ಲೂ ಅದು ಪ್ರಾರಂಭವಾಗುತ್ತದೆ. ಹುಡುಕಿದರೆ ಇಂತ ಅನಾವಶ್ಯಕ ಮನೋರಂಜನೆಗಳು ಬಹಳಷ್ಟು ಸಿಗುತ್ತವೆ, ಯೋಚಿಸಿ ಈ ವಿಷಯಗಳ ಬಗ್ಗೆ.

Wednesday, November 12, 2008

ಮುಖಗಳು


ಕಾಡಿಸಿ ಕಾಡಿಸಿ ಕೊನೆಗೂ ನೆನಪಾಗದ ಅವಳ ಮುದ್ದು ಮೊಗ, ಸಂತೆಯಲ್ಲಿ ಬಿಕರಿಯಾಗದೆ ಉಳಿದ ತರಕಾರಿ ಮೂಟೆಗಳು ಮತ್ತು ಅವುಗಳೊಂದಿಗೆ ಚಿಂತೆಯ ಗೆರೆಗಳನ್ನು ಮುಖದ ಮೇಲೆ ಮೂಡಿಸಿಕೊಂಡಿರುವ ಅವುಗಳ ಯಜಮಾನ, ಪ್ರಪಂಚವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ತಾಯಿಯ ಸೊಂಟಕ್ಕೆ ಅಂಟಿಕೊಂಡಿರುವ ಭಿಕ್ಷುಕಿಯ ಮಗು, ಮನೆಯಲ್ಲಿ ಜಗಳ ಮಾಡಿಕೊಂಡು ಮಹಾನಗರಿಗೆ ಬಂದಿಳಿದ ಯುವಕನ ಆತಂಕದ ಕಣ್ಣುಗಳು, ಮಾಡದ ತಪ್ಪಿಗೆ ವಿಷ ತಿಂದು ಸತ್ತ ಆನೆಗಳ ಮಡಿಲಲ್ಲಿದ್ದ ಆ ಮರಿಯಾನೆಯ ಮುಗ್ಧ ನಯನಗಳು. ಇವೆಲ್ಲವೂ ಇತ್ತೀಚಿಗೆ ನನ್ನನ್ನು ಕಾಡುತ್ತಿರುವ ಮುಖಗಳು.

Wednesday, November 5, 2008

ಹುಣ್ಣಿಮೆ ರಾತ್ರಿ

ಕಣ್ಣು ಚಾಚಿದಷ್ಟಕ್ಕೂ ದೂರ ಕಾಣುವ ಕತ್ತಲು, ಕತ್ತಲ ಬೆನ್ನು ಹತ್ತಿರುವ ಮೌನ, ಚಂದಿರನ ಬೆಳಕಲ್ಲಿ ಅಸ್ಪಷ್ಟವಾಗಿ ಕಾಣುವ ಬೆಟ್ಟದ ಸಾಲುಗಳು. ತಲೆಯೆತ್ತಿ ಆಗಸದೆಡೆಗೆ ನೋಡಿದೆನು, ನನ್ನ ದುರಾದೃಷ್ಟವೋ ಏನೋ ಇಂದು ಅಷ್ಟೊಂದು ನಕ್ಷತ್ರಗಳಿಲ್ಲ. ಆದರೂ ವೇಗವಾಗಿ ಸಾಗುತ್ತಿದ್ದ ಮೋಡಗಳು, ಮೋಡ ತಿಳಿಯಾದಾಗ ಕಾಣುವ ಪ್ರಕಾಶಮಾನ ಶಶಿಯನ್ನು ಇನ್ನು ನಾಲ್ಕಾರು ದಿನ ಮರೆಯಲಾರೆ. ಗಡಗುಟ್ಟಿಸುವ ಚಳಿ, ಕೆಲವೊಮ್ಮೆ ಹಿತವೆನಿಸುವ ತಂಗಾಳಿ, ಬೊಗಸೆಯಲ್ಲಿ ತುಂಬಿಕೊಳ್ಳುವಷ್ಟು ಮೌನ, ಕೊನೆಯಿಲ್ಲದ ಬೆಟ್ಟದ ಸಾಲುಗಳು, ಗವ್ವೆನ್ನುವ ಕಾಡು ಇದೆಲ್ಲ ಅನುಭವಿಸಿ ಎಷ್ಟು ದಿನಗಳಾಯಿತು ? ಬೆಂಗಳೂರಲ್ಲಿ ಇದೆ ಸಮಯದಲ್ಲಿ ದೇಹಕ್ಕೇ ಕಿಚ್ಚು ಹಚ್ಚಿಸಿಕೊಂಡು ಕೆಲಸದಲ್ಲಿ ಮುಳುಗಿರುತ್ತಿದ್ದೆ. ನಾಲ್ಕು ದಿನಗಳಲ್ಲಿ ಈ ಊರನ್ನು ಬಿಟ್ಟು ಮತ್ತೆ ಅದೇ ಇಷ್ಟವಿಲ್ಲದ ಜಾಗಕ್ಕೆ ಹೋಗಬೇಕಾದ ಅನಿವಾರ್ಯತೆಯ ನೆನಪಾಗಿ ಬೇಸರಗೊಂದೆ. ಮೋಡಗಳ ಮಧ್ಯದಿಂದ ಇಣುಕುತ್ತಿದ್ದ ಚಂದ್ರನ ಕಂಡು ಕುವೆಂಪು ಅವರ ಕವಿತೆಯೊಂದು ನೆನಪಾಯಿತು. ಕವಿತೆಯ ಹೆಸರು "ಹುಣ್ಣಿಮೆಯ ರಾತ್ರಿ" ಎಂದು. ಹೈಸ್ಕೂಲ್ ನಲ್ಲಿ ಇದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ಇದ್ದ ನೆನಪು.

ಓ ನೋಡದೋ ರಂಜಿಸುತಿದೆ
ರಜನಿಯ ಕೈದೀಪ
ನೀಲದಿಯಲಿ ತೆಲುತ್ತಿಹ
ಜ್ಯೋತಿಯ ಸ್ವರ್ದೀಪ

ತೆಳ್ಳು ತೆಳ್ಳನೆ ಬೆಳ್ಳು ಬೆಳ್ಳನೆ
ಮುಗಿಲುಣ್ಣೆಯ ರಾಶಿ
ಹೊಂಜೋನ್ನದಿ ಮಿಂದಂತಿದೆ
ಜೆನ್ಮಳೆಯನೆ ಸೂಸಿ!

ಸಹ್ಯಾದ್ರಿಯ ಗಿರಿಪಂಕ್ತಿಯ
ಕೊನೆಗಾಣದ ಲೀಲೆ ;
ಬಹುಯೋಜನ ವಿಸ್ತೀರ್ಣದ
ವನರಾಜಿಯ ಮಾಲೆ

ಬಾಂದಳದಿಂದ ಇಳಿಯುತ್ತಿದೆ
ಬೆಳದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ
ದೂರದಿ ನದಿ ತುಂಗೆ

ಅ: ಆಲಿಸು ! ಆಕಾಶದಿ
ತೇನೆಯ ಸುರವಾಣಿ;
ಜುಮ್ಮೆಂದಿದೆ ಅದನಾಲಿಸಿ
ಸಹ್ಯಾದ್ರಿ ಶ್ರೇಣಿ !

ಸೌಂದರ್ಯದ ಮಧುಪಾನದಿ
ವಿಶ್ವವೇ ಉನ್ಮತ್ತ !
ಧ್ಯಾನದ ರಸದಾನಂದದಿ
ಸೃಷ್ಟಿ ಸಮಾದಿಸ್ಥ !

ಏ ನೀರವಮೇಂ ನಿಶ್ಚಲ
ಮೀ ಹುಣ್ಣಿಮೆ ಇರುಳು
ತಿಂಗಳ ಬೆಳಕಿನ ಕಡಲಲಿ
ತೇಲಿದೆ ತಿರೆಯರಳು !

ಸುಧೆ ತುಂಬಿದ ವಿಧುಬಿಂಬದ
ಮಧು ಚಂದ್ರಿಕೆ ಮಾಯೆ
ನೆಲ ಬಾನ್ಗಳ ಒಲಿದೊಪ್ಪಿರೆ
ದ್ವೈತವು ಬರಿ ಛಾಯೆ

ಚೈತನ್ಯಕೆ ಜಡವೆಂಬುದು
ಕವಿಭಾವಕೆ ಭಾಷೆ
ಈ ಭುವನದ ಭವ್ಯಾಕೃತಿ
ಆತ್ಮನ ಒಂದಾಶೆ !

ಓ ರಾತ್ರಿಯೇ ಸಹ್ಯಾದ್ರಿಯೇ
ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರೆ ಸಾನಿಧ್ಯವೇ
ಪರಮಾತ್ಮನ ಶಾಂತಿ

- ಕುವೆಂಪು

Wednesday, October 29, 2008

ಹೀಗೇಕೆ ನಲ್ಲೆ?

ಮನ ಮುಗಿಲ ಮೇಲೆ

ಕಾರ್ಮೋಡಗಳ ಮಾಲೆ

ಮನ ಮುರಿಯುವ ವೇಳೆ

ಹೀಗೇಕೆ ನಲ್ಲೆ?

Sunday, October 5, 2008

ಇನ್ನೆರಡು ಚಿತ್ರಗಳು



ನನ್ನ ಹಳೆಯ ಪುಸ್ತಕಗಳಲ್ಲಿ ಇದ್ದ ಎರಡು ಚಿತ್ರಗಳನ್ನು ಪೋಸ್ಟ್ ಮಾಡುತ್ತ ಇದ್ದೇನೆ.

ಮೊದಲನೆಯದು ಇನ್ನು ಚನ್ನಾಗಿ ನೆನಪಿದೆ, ಕಾಲೇಜ್ ಪ್ರಾರಂಭವಾದ ಮೊದಲನೆ ದಿನ ಬಿಡಿಸಿದ್ದು. ಕಾಲೇಜ್ ಇಂದ ಬಂದು ಏನು ಕೆಲಸವಿಲ್ಲದೆ ಬಾಗಿಲ ಬಳಿ ದಿಟ್ಟಿಸುತ್ತಾ ಕುಳಿತಿದ್ದಾಗ ನನ್ನ ಶೂಗಳು ಕಂಡವು, ಅದನ್ನೇ ಪೇಪರ್ ಮೇಲೆ ಮೂಡಿಸಿದೆ.

ಎರಡನೆಯದನ್ನು ಯಾವಾಗ ಚಿತ್ರಿಸಿದ್ದು ಎಂದು ನೆನಪಿಲ್ಲ, ಆದರೆ ಆ ಮರದ ಹೂಜಿ ಇನ್ನು ನಮ್ಮ ಮನೆಯಲ್ಲಿ ಇದೆ.

ಇವೆರಡು ಚಿತ್ರಗಳನ್ನು ಯಾವುದೇ ಗುರಿ ಇಟ್ಟುಕೊಳ್ಳದೆ ಚಿತ್ರಿಸಿದ್ದು ಆದ್ದರಿಂದ finishing ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.

Tuesday, September 23, 2008

ಹೆಸರಿಲ್ಲದ ಒಂದು ಚಿತ್ರ


ಈ ಚಿತ್ರ ಬಿಡಿಸಿ ಬಹಳ ದಿನಗಳಾದರೂ ಪೋಸ್ಟ್ ಮಾಡಲು ಆಗಿರಲಿಲ್ಲ. ಕೆಲವೊಮ್ಮೆ ಸೋಮಾರಿತನ, ಕೆಲವೊಮ್ಮೆ 'ಮೂಡ್' ಇಲ್ಲದಿರುವುದು, ಕೆಲವೊಮ್ಮೆ ನಿಜವಾಗಲೂ ಸಮಯ ಸಿಗದಿರುವುದರ ನಡುವೆ ಚಿತ್ರ ಇನ್ನೇನು ಮೂಲೆ ಸೇರುವುದರಲ್ಲಿತ್ತು. ಇವತ್ತು ಅಂತು ಇಂತೂ ಟೈಮ್ ಸಿಕ್ಕಿ ಪೋಸ್ಟ್ ಮಾಡ್ತಾ ಇದ್ದೇನೆ :)

Saturday, August 16, 2008

ಅಗಲುತ್ತಿರುವ ಗೆಳೆಯನ ಬಗ್ಗೆ....


ಕೋರಮಂಗಲದ ಮೆಗಾಮಾರ್ಟ್ ನಲ್ಲಿ ನನ್ನ ಬಳಗಕ್ಕೆ ಅವನು ಸೇರಿದಾಗ ಅವನು ಇಷ್ಟೊಂದು ವರ್ಷಗಳು ನನ್ನೊಂದಿಗೆ ಇರುತ್ತಾನೆ, ಇಂಥ ಬಾಂಧವ್ಯವೊಂದು ಬೆಸೆದುಕೊಳ್ಳುತ್ತದೆ ಎಂಬ ಒಂದು ಸಣ್ಣ ಸುಳಿವೊ ಇರಲಿಲ್ಲ. ಮೊದಮೊದಲು ಅವನ ಬಗ್ಗೆ ನನಗೆ ತೀವ್ರ ಅಸಮಾಧಾನವಿತ್ತು. ಅವನನ್ನು ಅಷ್ಟೊಂದು 'ಹಚ್ಚಿ'ಕೊಂಡಿರಲಿಲ್ಲ. ಅವನ ಬಳಕೆಯೂ ಅಷ್ಟಕ್ಕಷ್ಟೆ ಅನ್ನುವಷ್ಟು ಇತ್ತು. ಈ ಮಾನವನ ಮನಸ್ಸು ವಿಚಿತ್ರ. ಯಾವ ಹೊತ್ತಿಗೆ ಏನು ಆಗುತ್ತದೊ ಗೊತ್ತಿಲ್ಲ. ನನಗೂ ಹಾಗೆ ಆಗಿದ್ದು. ಯಾವುದೊ ಘಳಿಗೆಯಲ್ಲಿ ಅವನ ಮೇಲೆ ಆತ್ಮೀಯತೆ ಹುಟ್ಟಿದ್ದು. ಇಂಥ ಘಟನೆ ನನ್ನ ಜೀವನದಲ್ಲಿ ಆದ ನಂತರ ಅವನು ತುಂಬಾ ಹತ್ತಿರವಾಗಿಬಿಟ್ಟ. ಮೊನ್ನೆ ಮೊನ್ನೆವರೆಗೊ ತನ್ನ ಸ್ಥಾನವನ್ನು ಯಾರಿಗೊ ಬಿಟ್ಟು ಕೊಡಲೂ ಇಲ್ಲ. ಬೇರೆಯವರನ್ನು ಆ ಸ್ಥಾನಕ್ಕೆ ಏರಿಸಲು ನನಗೂ ಇಷ್ಟವಿರಲಿಲ್ಲ. ನಂಬುತ್ತೀರೊ ಇಲ್ಲವೊ, ಕಳೆದ ಮೂರು ವರ್ಷಗಳಿಂದ ಸತತವಾಗಿ ನನ್ನೊಂದಿಗೆ ಇದ್ದವನು ಈತ. ಈತನಿಗೆ ವಿಶ್ರಾಂತಿ ಎನ್ನುವ ಪದವನ್ನೇ ಕೇಳದಂತೆ ಮಾಡಿದ್ದೆ ನಾನು. ಮದುವೆ, ಪಾರ್ಟಿ, ಕಾಲೇಜ್, ಊರು ಎಲ್ಲಿ ಹೋದರೂ ನನ್ನೊಂದಿಗೆ ಇರಬೇಕು ಇವನು. ಆರು ತಿಂಗಳ ಹಿಂದೆ ಇವನ ಪಾಡನ್ನು ಕಂಡು ಇವನಿಗೊಂದು ಲಾಂಗ್ ರೆಸ್ಟ್ ಕೊಡೋಣ ಅಂದುಕೊಂಡೆ. ಆದರೆ ಅವನ ಮೇಲಿನ ಪ್ರೀತಿ, ಅವನ ಅನಿವಾರ್ಯ, ಅವನಿಲ್ಲದಿದ್ದರೆ ಆಗೋದೇ ಇಲ್ಲ ಎನ್ನುವ ನನ್ನ ಮನೋಭಾವ ಇಲ್ಲಿಯವರೆಗೂ ಅವನನ್ನು ನನ್ನೊಂದಿಗೆ ಉಳಿಸಿಕೊಂಡು ಬಂದಿತು. ಬಹುಶ ಅವನಿಗೆ ಮಾತಾಡಲು ಬಾಯಿ ಇದ್ದಿದ್ದರೆ ಅವನೇ ಕೇಳುತ್ತಿದ್ದನೋ ಏನೊ. ಅಂತೂ ಅವನಿಗೆ ಇಂದು ಬಿಡುಗಡೆ. ಅವನು ಇನ್ನೆಂದಿಗೂ ನನ್ನೊಂದಿಗೆ ಬರಲಾರ.


ಇಷ್ಟು ಹೊತ್ತು ಹೇಳಿದ "ಅವನು" ಯಾರೆಂದು ನೀವು ಯೋಚಿಸುತ್ತಿರಬಹುದು. ಆಶ್ಚರ್ಯವಾಗಬಹುದು, "ಅವನು" ಅವನಲ್ಲ. "ಅದು" ನನಗೆ "ಅವನು" ಆಗಿದ್ದಾನೆ. "ಅವನು" ನನ್ನ ಪ್ರೀತಿಯ "newport jeans." ಐದು ವರ್ಷಗಳ ಹಿಂದೆ ಕೊಂಡಿದ್ದ ಆ ಜೀನ್ಸನ್ನು ವಾರ್ಡ್ರೊಬ್ ಸೇರಿಸಿದ್ದೇ ಅಪರೂಪ. ಉಪಯೋಗಿಸುವುದು, ತೊಳೆಯುವುದು, ಮತ್ತೆ ಇಸ್ತ್ರಿ ಮಾಡಿ ತೊಡುವುದು. ಅದನ್ನು ತೊಟ್ಟರೆ ನನಗೆ ತುಂಬಾ comfortable ಅನ್ನಿಸುತ್ತಿತ್ತು. ಇಷ್ಟು ವರ್ಷಗಳಲ್ಲಿ ನಾನು ಯಾವುದೇ ಬಟ್ಟೆಯನ್ನು ಇಷ್ಟು ಮೆಚ್ಚಿಕೊಂಡಿರಲಿಲ್ಲ.
ಇಂದು ತೊಳೆದು ನೀಟಾಗಿ ಇಸ್ತ್ರಿ ಮಾಡಿ ಅವನನ್ನು ಮನೆ ಸೇರಿಸುತ್ತಿದ್ದೇನೆ. ನಿಂಗೆ ಇನ್ನು ಸಂಪೂರ್ಣ ರೆಸ್ಟ್ ಅಂತ ಪ್ರಾಮಿಸ್ ಮಾಡಿದ್ದೇನೆ. "promises are meant to be broken" ಅಂಥಾರೆ. ಇಸ್ತ್ರಿ ಮಾಡುವಾಗ ಹಾಗೆ ಅವನ ಮೇಲೆ ಕೈಯಾಡಿಸಿದೆ. ಏನೋ ಕಳೆದುಕೊಳ್ಳುತ್ತಿರುವ ಭಾವ ಮೊಡುತ್ತಿದೆ. ಪ್ಯಾಂಟನ್ನು ಮಡುಚಿ ಒಳಗೆ ಇಡುತ್ತಿದ್ದದ್ದನ್ನು ನೋಡಿ ನನ್ನ ಕಸಿನ್ "rest in peace" ಅ ಅಂದ. ಪಿಚ್ಚೆನಿಸಿತು ನನಗೆ. ಹೌದು ಅವನಿಗೆ ರೆಸ್ಟ್, ಆದರೆ ನೀನು ಹೇಳೊ ರೀತಿ ಅಲ್ಲ ಅಂದೆ. ಮಳೆ ಛಳಿಗಳಲ್ಲಿ ಬೆಚ್ಚಗೆ ಇಟ್ಟ, ಕಲ್ಲು ಮುಳ್ಳುಗಳಿಂದ ಕಾಪಾಡಿದ, ಕಳೆದ ಐದು ವರ್ಷಗಳಿಂದ ನನ್ನನ್ನು ಸುಂದರಗೊಳಿಸಿದ ಈ ನನ್ನ ಗೆಳೆಯನಿಗೆ ವಿದಾಯ ಹೇಳಲು ನೋವಾಗುತ್ತಿದೆ. I really miss you......
(ಫೋಟೋ : ನನ್ನ ಪ್ರೀತಿಯ ಜೀನ್ಸ್ ನೊಂದಿಗೆ ನಾನು)

Friday, August 15, 2008

ಬಾಲದಂಡೆ ಹಕ್ಕಿ (Asian Paradise Flycatcher)


ಸಂಸ್ಕೃತದಲ್ಲಿ ಅರ್ಜುನಕ ಎಂದೂ, ಕೊಡವ ಭಾಷೆಯಲ್ಲಿ ರಾಜನೂಕರೆ ಎಂದೂ ಕರೆಯಲ್ಪಡುವ ಈ ಹಕ್ಕಿ ಭಾರತದಲ್ಲಿ ಕಂಡುಬರುವ ಅತೀ ಸುಂದರ ಪಕ್ಷಿಗಳಲ್ಲಿ ಒಂದು. ಈ ಹಕ್ಕಿಯು ೨೦ ಸೆಂಟಿಮೀಟರ್ ದೇಹವನ್ನೂ ಹಾಗು ೫೦ ಸೆಂಟಿಮೀಟರ್ ಉದ್ದದ ಬಾಲವನ್ನು ಹೊಂದಿರುತ್ತದೆ. ಬಾಲದಲ್ಲಿ ಎರಡು ಗರಿಗಳಿರುತ್ತವೆ. ಹೆಣ್ಣು ಹಕ್ಕಿಗಳಿಗೆ ಬಾಲದ ಗರಿಗಳಿರುವುದಿಲ್ಲ. ಈ ಹಕ್ಕಿಯು ಉದುರೆಲೆ, ಬಿದಿರುಕಾಡುಗಳು, ತೋಟ, ಜನವಸತಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಅತ್ಯಂತ ಚಟುವಟಿಕಯಲ್ಲಿ ತೊಡಗಿರುತ್ತವೆ. ಕೀಟಗಳು ಇವುಗಳ ಮುಖ್ಯ ಆಹಾರ. ಇವು ಮರ, ಪೊದೆ, ಬಿದಿರು ಮೆಳೆಗಳ ನಡುವೆ ಗೂಡನ್ನು ನಿರ್ಮಿಸುತ್ತವೆ. ಹುಲ್ಲು, ನಾರುಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಗೂಡಿನ ಹೊರಮೈಗೆ ಜೇಡರ ಬಲೆಯನ್ನು ಸುತ್ತುತ್ತವೆ. ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ ಫೆಬ್ರವರಿಯಿಂದ ಜುಲೈವರೆಗೆ. ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ ಮೊರರಿಂದ ಐದು ತಿಳಿ ಗುಲಾಬಿ ಮೊಟ್ಟೆಗಳನ್ನು ಇಡುತ್ತದೆ. ಗಂಡು ಪಕ್ಷಿಯು ಹಾರುವಾಗ ಬಿಳಿ ಗರಿಗಳು ಗಾಳಿಪಟದ ಬಾಲಂಗೋಚಿಗಳಂತೆ ಆಕರ್ಷಕವಾಗಿ ಕಾಣುತ್ತದೆ. ಈ ಪಕ್ಷಿಯು ಮಧ್ಯಪ್ರದೇಶದ ರಾಜ್ಯಪಕ್ಷಿ.
(ಚಿತ್ರವನ್ನು ದೊಡ್ದದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ)

Tuesday, July 22, 2008

ಅಪೂರ್ಣ ಚಿತ್ರ


ಪರೀಕ್ಷೆ ಸಮಯದಲ್ಲಿ ಬರವಣಿಗೆ ಹಾಗು ಚಿತ್ರಕಲೆ ಮೇಲೆ ಅತೀವ ಆಸಕ್ತಿ ಹುಟ್ಟಿ, ಪರೀಕ್ಷೆ ಇದೆ ಅನ್ನೊ ನೆಪ ಇಟ್ಟುಕೊಂಡು, ಪರೀಕ್ಷೆ ಮುಗಿದ ಮೇಲೆ ದಿನಕ್ಕೊಂದು ಲೇಖನ ಬರೆದರಾಯಿತು, ದಿನ ಒಂದೊಂದು ಚಿತ್ರ ಬಿಡಿಸಿದರಾಯಿತು ಅಂದುಕೊಂಡು ಆಸೆಯನ್ನು ಹತ್ತಿಕ್ಕಲೂ ಆಗದೆ, ಓದಲೂ ಆಗದೆ ಇರುವ ಒಂದು ವಿಚಿತ್ರ ಸ್ಥಿತಿಯಲ್ಲಿ ಪರೀಕ್ಷೆಯನ್ನು ಮುಗಿಸುತ್ತೇನೆ. ಪರೀಕ್ಷೆ ಮುಗಿದ ಮರುದಿನದಿಂದ ನನಗೂ ನನ್ನ ಬ್ಲಾಗ್ ಗೂ ಯಾವುದೇ ಸಂಭಂದ ಇಲ್ಲ ಎನ್ನುವ ಭಾವನೆ ಶುರು ಆಗುತ್ತೆ. ಬರೆಯೋಕೆ ವಿಷಯಗಳಿಲ್ಲ ಎಂದಲ್ಲ. ಈ ರೀತಿ ಯಾಕಾಗುತ್ತೊ ಗೊತ್ತಿಲ್ಲ. ಪ್ರತೀ ರಜೆಯೊ ಹೀಗೆ ಕಳೆದು ಹೋಗೊದನ್ನ ಮೊಕ ಪ್ರೇಕ್ಷಕನಾಗಿ ನೋಡೊ ಹಿಂಸೆ ಸಾಕಾಗಿ ಹೋಗಿದೆ. ಇದರಿಂದ ಹೊರ ಬರುವ ಸಲುವಾಗಿ ಈ ಚಿತ್ರವನ್ನು ಬಿಡಿಸಿದ್ದೇನೆ. ಇದೊಂದು ಅಪೂರ್ಣ ಚಿತ್ರ. ಮುಂದುವರೆಸುವ ಮನಸ್ಸಿಲ್ಲದೆ ಹೊಸ ಪ್ರಯೋಗವೆಂಬ ಹಣೆಪಟ್ಟಿ ಕಟ್ಟಿ ಪೋಸ್ಟ್ ಮಾಡುತ್ತ ಇದ್ದೇನೆ.

Saturday, July 12, 2008

ನನಗೂ ನಿನಗೂ ಕಣ್ಣಲ್ಲೇ ಪರಿಚಯ



ನನಗೆ ಇತ್ತೀಚೆಗೆ ತುಂಬಾ ಇಷ್ಟ ಆದ ಹಾಡು ಇದು, ಅರಮನೆ ಚಿತ್ರದ ಈ ಹಾಡನ್ನು ಜಯಂತ್ ಕಾಯ್ಕಿಣಿ ಅವರು ರಚಿಸಿದ್ದಾರೆ. ಕುನಾಲ್ ಗಾಂಜವಾಲರ ಧ್ವನಿಯಲ್ಲಿನ ಈ ಹಾಡಿಗೆ ಗುರುಕಿರಣ್ ಅವರು ಸಂಗೀತ ನೀಡಿದ್ದಾರೆ.


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ನಲುಮೆ ಸ್ನೇಹದ ನವಿರಾದ ಗ್ರಂಥವೆ

ಪುಟವಾ ತೆರೆಯುವಾ ಹಿತವಾದ ಗಂಧವೆ

ಮೊದಲಾ ನುಡಿಯಲೀ ನಾನೀಗ ತನ್ಮಯ

ಇನ್ನೂ ಕಥೆಯಲಿ ನೀನನ್ನಾ ಕರೆದೆಯಾ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ


ಮೊದಲಾ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ

ಮೃದುಲಾ ಭಾವದೀ ನನ್ನೊಂದು ಕೋರಿಕೆ

ಎಲ್ಲಾ ತಿಳಿದರೂ ಯಾಕಿನ್ನೂ ಅಭಿನಯ

ವಿರಹಾ ಬಂದಿದೆ ಒಲವಿನ್ನೂ ನಿಶ್ಚಯ


ನನಗೂ ನಿನಗೂ ಕಣ್ಣಲ್ಲೇ ಪರಿಚಯ

ಸನಿಹ ಸುಳಿವ ಮನದಾಸೆ ಅತಿಶಯ

ಏನೋ ಆಗಿದೆ ನನಗಂತೂ ಸಂಶಯ

Saturday, May 24, 2008

ರಶ್ಮಿ

ಸೋತಿಹೆನು ಕತ್ತಲಿನಾ ಪರೀಕ್ಷೆಯಲಿ
ನಯನಗಳು ನಿನ್ನದೇ ನಿರೀಕ್ಷೆಯಲಿ

ಸಾಕಾಗಿದೆ ಈ ಇರುಳು
ಕಹಿಯಾಗಿದೆ ಈ ನೋವು

ಕಾದಿಹವು ಅರಳಲು ಸುಮವನಗಳು
ಪರಿತಪಿಸುತಿವೆ ಸಹ್ಯಾದ್ರಿಯ ಗಿರಿಪಂಕ್ತಿಗಳು

ಇನ್ನಾದರೂ ಬರಬಾರದೇ
ಭುವಿಯನ್ನೂ, ನನ್ನ ಮನವನ್ನು ಬೆಳಗಬಾರದೇ?

Thursday, May 22, 2008

ಹುಚ್ಚನೊಬ್ಬನ ಅಸಂಭದ್ದ ಪ್ರಲಾಪ





ಇಡೀ ಕೇರಿಗೆ, ಊರಿಗೆ, ಬೀದಿ ನಾಯಿಗಳಿಗೆ ಆಗಲೆ ಅರ್ಧ ರಾತ್ರಿ ಮುಗಿದುಹೋಗಿದೆ. ನಿದ್ದೆಯು ನನ್ನಲ್ಲಿ ಸಮರ ಹೂಡಿದೆ. ಪೂರ್ಣಚಂದ್ರನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಅರ್ಧ ಪಾಳಿಯನ್ನು ಮುಗಿಸಿದ್ದಾನೆ. ನನಗೆ ನಿದ್ದೆಯಿಲ್ಲ. ಹಾಗಂತ ಹೇಳಿಕೊಳ್ಳುವಂಥ ಯೋಚನೆಗಳೂ ಏನಿಲ್ಲ. ಹುಚ್ಚನಿಗೆಲ್ಲಿಯ ಯೋಚನೆ? ಖಾಲಿ ಹಾಳೆಯಂತಾಗಿದೆ ಮನಸ್ಸು. ನನಗೇ ಗೊತ್ತಿಲ್ಲದಂತೆ ಹೊಸ ಸ್ಥಿತಿಯೊಂದನ್ನು ತಲುಪಿದ್ದೇನೆ. ಕಷ್ಟಸಾಧ್ಯವಾಗಿ ದೊರಕುವಂತ ಈ ಸ್ಥಿತಿ ನನಗೆ ಬೇಡದೇ ದೊರೆತಿದೆ. ಬಯಸದೇ ಬಂದ ಭಾಗ್ಯ. ಭಾಗ್ಯವೋ ಏನು ಸುಡುಗಾಡೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಈ ಅಪರಾತ್ರಿ ಸಮಯದಲ್ಲಿ ಏನೋ ಒಂದು ಆಗಿದೆ ಎನ್ನಬಹುದಷ್ಟೆ.

ಹಾಸಿಗೆಯಿಂದ ಎದ್ದು ಕಿಟಕಿಯ ಬಳಿಸಾರಿದೆ. ಪೂರ್ಣಚಂದಿರನ ಹಾಲು ಬೆಳಕನ್ನು ತನ್ನ ಮೇಲೆ ಸುರಿದುಕೊಂಡಿದ್ದ ಕಾಡು ಕಂಡಿತು. ಮೌನವನ್ನು ಅಪ್ಪಿ ಹಿಡಿದಿತ್ತು ಕಾಡು. ನಿಗೂಢ ಎಂಬ ಪದವನ್ನು ಕೇಳಿದಾಗಲೆಲ್ಲ ನೆನಪಾಗುತ್ತಿತ್ತು ಈ ಕಾಡು. ಲಕ್ಷಾಂತರ ಕೀಟಗಳು ಈ ನಿಗೂಢ ಪ್ರಪಂಚದ ಪ್ರತಿನಿಧಿಗಳಂತೆ ಆಗೊಮ್ಮೆ ಈಗೊಮ್ಮೆ ಟರ ಟರ ಗುಟ್ಟಿ ಮೌನಕ್ಕೊಮ್ಮೆ ಎಚ್ಚರಿಕೆ ನೀಡುತ್ತಿದ್ದವು. ಕಿಟಕಿಯ ಸರಳನ್ನು ಹಿಡಿದು ನಿಗೂಢತೆಯನ್ನು ಅವಲೋಕಿಸುತ್ತಿದ್ದ ಹುಚ್ಚನಿಗೆ ಅರ್ಥಾತ್ ನನಗೆ ಬೇಸರ ಮೂಡತೊಡಗಿದೆ. ಆದರೇನು ಮಾಡುವುದು, ನಿದ್ದೆಗೆ ನನ್ನ ಮೇಲೆ ಬೇಸರ ಬಂದಿದೆ.

ಬಾಗಿಲು ತೆರೆದು ಅಟ್ಟವನ್ನೇರಿದೆ. ಸಾವಿರಾರು ಬೆಳ್ಳಿ ಚುಕ್ಕೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿತ್ತು ಆಕಾಶ. ಅದೆಷ್ಟೋ ಹೊತ್ತು ಹಾಗೇ ಆಕಾಶವನ್ನು ನೋಡುತ್ತ ಕುಳಿತಿದ್ದೆ, ನಿಮಿತ್ತವಿಲ್ಲದೆ. ಎಂದಾದರೂ ಮಾಯಾನೌಕೆಯೊಂದು ಬಂದು ನನ್ನನ್ನು ಹೊತ್ತೊಯ್ಯಬಹುದೆಂಬ ನಿರೀಕ್ಷೆಯಲಿ. ನಿರೀಕ್ಷೆ ಸರಿಯಾದ ಪದವಲ್ಲ. "ಆಸೆ" ಎಂದು ಬದಲಾಯಿಸಿದರೆ ಸರಿಯಾದೀತು. ಮನೆ ಮುಂದಿನ ಕಲ್ಪವೃಕ್ಷವೊಂದು ಆಗಾಗ ಗರಿಗಳನ್ನು ಆಡಿಸುತ್ತಿದೆ. ತಾನಿನ್ನೂ ಸಜೀವವಾಗಿದ್ದೇನೆ ಎಂದು ತೋರಿಕೊಳ್ಳಲೋ ಏನೋ? ಅಥವಾ ಗಾಳಿಯು ತನ್ನ ಇರುವನ್ನು ವ್ಯಕ್ತಪಡಿಸುತ್ತಲೂ ಇರಬಹುದು. ಊಹೂಂ....... ಇನ್ನೂ ನಿದ್ದೆಯ ಸುಳಿವಿಲ್ಲ. ನಿಗೂಢದ ಆಚೆಗಿರುವ ಬೆಟ್ಟವನ್ನು ಆರೋಹಿಸುವ ಆಲೋಚನೆಯೊಂದು ಮನದಲ್ಲಿ ಮಿಂಚಿ ಮಾಯವಾಗುತ್ತದೆ. ಇಂಥ ಹುಚ್ಚು ಆಲೋಚನೆಗಳು ನನ್ನಲ್ಲಿ ಬರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹುಚ್ಚು ಆಲೋಚನೆಗಳು ಹುಚ್ಚರಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ ಅಲ್ಲವೇ? ಆಲೋಚನೆಯೊಂದು ಸುಳಿದಿದ್ದೇ ನಿಜವಾದ ಮೇಲೆ ಅದನ್ನು ಕಾರ್ಯಗತಗೊಳಿಸದೇ ಹೋದರೆ ಹುಚ್ಚುತನಕ್ಕೂ ಮರ್ಯಾದೆ ಇರುವುದಿಲ್ಲ.

ಮುಂದಿನ ಕೆಲವೇ ಕ್ಷಣಗಳಲ್ಲಿ ಕಾಡಿನ ಹಾದಿಯಲ್ಲಿ ನನ್ನ ಪಯಣ ಶುರುವಾಗುತ್ತದೆ. ದಾರಿತೋರಲು ಪೂರ್ಣಚಂದ್ರನಿದ್ದಾನೆ. ಅವನಿಲ್ಲದಿದ್ದರೂ ನಡೆದೀತು. ಚಿಕ್ಕಂದಿನಿಂದ ಅದೆಷ್ಟು ಬಾರಿ ಈ ಹಾದಿಯನ್ನು ಸವೆಸಿದ್ದೇನೋ? ಆದರೂ ಈ ಕಾಡು ನನಗೆ ನಿಗೂಢವೇ. ಎಲ್ಲಿಯೂ ಎಡವಲಿಲ್ಲ. ಗುಡ್ದದ ಬುಡ ಬಂದೇ ಬಂದಿತು. ಗುಡ್ಡದ ಹುಲ್ಲು ಹಾಸಿನ ಮೇಲೆ ಹೊರಳುವ ಮನಸಾಯಿತು. ಆಸೆ ಹೆಮ್ಮರವಾಗಿ ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಹೊರಳಿದೆ. ಇಲ್ಲಿ ಯಾರೂ ಇಲ್ಲ ನನ್ನನ್ನು ನೋಡಿ ನಗಲು. ಇದ್ದರೂ ನನ್ನ ಹುಚ್ಚಾಟದಲ್ಲಿ ಪಾಲ್ಗೊಳ್ಳುವ ಸಾಹಸ ಯಾರೂ ಮಾಡಲಾರರು. ಗುಡ್ಡದ ನೆತ್ತಿಯನ್ನು ನೋಡುವೆ, ಇನ್ನು ತುದಿಯನ್ನು ತಲುಪುವ ಕಾಯಕವೊಂದೆ ಬಾಕಿ ಉಳಿದಿರುವುದು. ಉತ್ಸಾಹಕ್ಕೇನು ಕೊರತೆಯಿಲ್ಲ. ನಿದ್ದೆಗೂ ನನಗೂ ವಿರಸ. ಸರಿ, ಯಾರ ಹಂಗೂ ಇಲ್ಲದ ಮೇಲೆ ತುದಿ ತಲುಪೇ ತೀರುವೆ. ಅಗೋ................ನೆತ್ತಿ ಬಂದೇ ಬಿಟ್ಟಿತು. ಎದುರುಸಿರೂ ಇಲ್ಲ. ಆಶ್ಚರ್ಯವಲ್ಲದೆ ಮತ್ತೇನು, ಇಷ್ಟೆತ್ತರದ ಗುಡ್ಡದ ತುದಿಯನ್ನು ಎದುರುಸಿರು ಇಲ್ಲದೆ ಹತ್ತುವುದು ತಮಾಷೆಯ ವಿಷಯವೇ? ಪ್ರಶಸ್ತಿಯನ್ನೇನು ಯಾರೂ ಪ್ರಕಟಿಸಿಲ್ಲ. ಗಾಳಿಯು ಬೀಸುತ್ತಲೇ ಇದೆ, ಗತ್ಯಂತರವಿಲ್ಲದೆ. ದೂರದಲ್ಲೊಂದು ಊರು, ತಾಳಗುಪ್ಪವೊ ಏನೊ ಅದರ ಹೆಸರು. ಬಿಡಿ ಯಾವ ಊರಾದರೇನಂತೆ. ಇನ್ಯಾವುದೋ ದೊಡ್ದ ಪಟ್ಟಣವನ್ನು ಬೆಳಗಲು ಇಲ್ಲೊಂದು ಗ್ರಿಡ್ ನಿರ್ಮಾಣವಾಗಿದೆ. ಆ ಗ್ರಿಡ್ ನ ಕೇಸರಿ ದೀಪಗಳು ಆ ಕಡೆಯ ಆಗಸವನ್ನು ಕೆಂಪಾಗಿಸಿವೆ. ಕಿನ್ನರ ಲೋಕವೊಂದರ ನಕಲಿನಂತೆ ಗೋಚರಿಸುತ್ತಿದೆ. ಹಾಗೆ ನೋಡುತ್ತ ಕೂರುತ್ತೇನೆ ಕಿನ್ನರ ಲೋಕದೆಡೆಗೆ ಬೆಳಗಿನ ನಿರೀಕ್ಷೆಯಲಿ. ಇನ್ನೂ ನಿದ್ದೆಯ ವಿಳಾಸವಿಲ್ಲ. ನೋಡುತ್ತ ಕುಳಿತಿರುತ್ತೇನೆ ಅನಂತಾಕಾಶವನ್ನು, ನಿದ್ದೆಯು ನನ್ನನ್ನು ಅಪ್ಪುವವರೆಗೂ. ಹೀಗೆ ಅವಸಾನಗೊಳ್ಳುತ್ತಿದೆ ಹುಚ್ಚನೊಬ್ಬನ ಪೌರ್ಣಿಮೆಯ ರಾತ್ರಿ.

Friday, May 16, 2008

ಯುಗ

ಮಳೆ ಮರಣಿಸಿ ದಿನಗಳೇ ಸಂದವು
ಛಳಿ ಮೈನೆರೆದು ಇಂದಿಗೆ ಹನ್ನೆರಡು ದಿನಗಳು
ಅವಳನ್ನು ನೋಡಿ ವರ್ಷಗಳೇ ಉರುಳಿದವು
ಅವಳ ನೆನಪಲ್ಲಿ ಕಳೆದ ದಿನಗಳೆಲ್ಲಾ ಯುಗಗಳು

Wednesday, May 7, 2008

ಯಾರು ಹಿತವರು ನಿನಗೆ ಈ ಮೊವರೊಳಗೆ











ಮೇಲೆ ಎರಡು ಜಾಹೀರಾತುಗಳ ಚಿತ್ರಗಳಿವೆ. ಮೊನ್ನೆ (ಸೋಮವಾರ ೫, ೨೦೦೮) ಡೆಕ್ಕನ್ನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಕ್ರಮವಾಗಿ ೨ ಹಾಗು ೫ ನೇ ಪುಟದಲ್ಲಿ ಪ್ರಕಟವಾದ ಚುನಾವಣಾ ಪ್ರಚಾರದ ಜಾಹೀರಾತುಗಳು. ನಮ್ಮ ರಾಜಕೀಯ ಪಕ್ಷಗಳು ಎಷ್ಟು ಕೆಳಮಟ್ಟಕ್ಕೆ ಇಳಿದಿವೆ ಎಂಬುದನ್ನು ಸೂಚಿಸುತ್ತಿವೆ ಇವು.

ಕಾಂಗ್ರೆಸ್ ಪಕ್ಷದ ಜಾಹೀರಾತಿಗೆ ಮೊದಲು ಬರೋಣ. ಇಡೀ ಭಾರತ ದೇಶವೇ ತಲೆತಗ್ಗಿಸುವಂತ ಘಟನೆ ಕಂದಾಹಾರಿನ ಪ್ರಕರಣ. ಬಿಜೆಪಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂಬುದು ಕಾಂಗ್ರೆಸ್ಸಿಗರ ಆರೋಪ. ಹೌದು ಈ ಪ್ರಕರಣದಲ್ಲಿ ರಕ್ಷಣಾ ಲೋಪ ಇದ್ದದ್ದು ನಿಜ. ಆದರೆ ಒಂದು ದೇಶ ತಲೆತಗ್ಗಿಸುವಂತೆ ಮಾಡಿದ ವಿಷಯವನ್ನು ಜಾಹೀರಾತಿನಲ್ಲಿ ಹಾಕಿಕೊಳ್ಳುವ ತೆವಲು ಇವರಿಗೆ ಏನಿತ್ತೋ ಕಾಣೆ. ಇದನ್ನು ನೋಡಿದರೆ ಇವರಿಗೂ ಈ ದೇಶಕ್ಕೊ ಏನೂ ಸಂಭಂದವೇ ಇಲ್ಲ ಎಂದಾಯ್ತು. ದೇಶದ ಜನರು ನೆನಪಿಸಿಕೊಳ್ಳಬಾರದ ವಿಷಯವನ್ನು ಜಾಹೀರಾತಿಗೆ ಬಳಸಿಕೊಂಡ ಕಾಂಗ್ರೆಸಿನ ನೈತಿಕತೆಗೆ ಹಿಡಿದ ಕನ್ನಡಿ ಈ ಜಾಹೀರಾತು. ಒಂದೊಮ್ಮೆ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೆ ಪ್ರಯಾಣಿಕರು ಸತ್ತರೆ ಸಾಯಲಿ ಎಂದು ಮಸೂದ್ ಅಜರ್ ನನ್ನು ಬಿಡುಗಡೆಗೊಳಿಸದೆ ಇರುತ್ತಿದ್ದರೆ? ತಪ್ಪು ಆಗಿದ್ದರ ಬಗ್ಗೆ ಇವರಿಗೆ ಯಾವ ಯೋಚನೆಯೂ ಇಲ್ಲ. ಬದಲಾಗಿ ಅದನ್ನು ತಮ್ಮ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ಕೀಳು ಯೋಚನೆ ಇವರದ್ದು.

ಅಕ್ಷಾಯ್ ಚಿನ್ ಹೆದ್ದಾರಿ ಪತ್ತೆಯಾದಾಗ ' ಹುಲ್ಲುಕಡ್ಡಿಯು ಬೆಳೆಯದ ಜಾಗವದು ' ಎಂದಿದ್ದ ನೆಹರೂ ತಮ್ಮ ಮೊರ್ಖತನದಿಂದ ಇಡೀ ದೇಶದ ಮರ್ಯಾದೆಯನ್ನು ಹರಾಜು ಹಾಕಿದ್ದರು. 'ಭಾರತ-ಚೀನಾ ಭಾಯಿ ಭಾಯಿ' ಎಂದು ಜಪಿಸುತ್ತಾ ೧೯೬೨ರಲ್ಲಿ ದೇಶವನ್ನು ಚೀನಾದ ಪಾದಕ್ಕೆ ಬಿಟ್ಟುಕೊಟ್ಟ ನೆಹರೂ ಕಾಂಗ್ರೆಸ್ಸಿಗರೆ ಅಲ್ಲವೆ? ತನ್ನ ಮಗಳು ಇಂದಿರಾ ಗಾಂಧಿಯನ್ನು ಗದ್ದುಗೆಗೆ ಏರಿಸಲೋಸ್ಕರ ಶಾಸ್ತ್ರಿಯವರನ್ನು ಕಾಡಿದ ನೆಹರೂಗೆ ಎಷ್ಟು ನೈತಿಕತೆ ಇತ್ತು ? ಹೀಗೆ ಬರೆಯುತ್ತ ಹೋದರೆ ಪುಟಗಳಷ್ಟು ಬರೆಯಬಹುದು. ಇನ್ನೊಬ್ಬರ ಬಗ್ಗೆ ಬೆರಳು ತೋರುವ ಮೊದಲು ತಮ್ಮ ಕಚ್ಚೆ ಗಟ್ಟಿ ಇದೆಯೆ ಎಂದು ನೋಡಿಕೊಳ್ಳುವುದು ಒಳಿತು. ಹಣದುಬ್ಬರವನ್ನು ಕಟ್ಟಿಹಾಕಲು ಹೆಣಗುತ್ತಿರುವ ಇವರಿಗೆ ಇನ್ನೊಬ್ಬರ ಐಬು ಹುಡುಕೋ ಚಪಲ.

ನಾನು ಬಲಪಂಥೀಯನೂ ಅಲ್ಲ, ಕಾಂಗ್ರೆಸ್ ವಿರೋಧಿಯೂ ಅಲ್ಲ. ಆದರೆ ಈ ಜಾಹೀರಾತುಗಳನ್ನು ನೋಡಿ ಇವರ ಮಟ್ಟ ಇಷ್ಟು ಇಳಿದುಹೋಗಿದೆಯಲ್ಲ ಎಂದೆನಿಸಿತು. ಚುನಾವಣೆಯಲ್ಲಿ ಜನರನ್ನು ಆಕರ್ಷಿಸಲೇ ಬೇಕಂದರೆ ತಮ್ಮ ಸಾಧನೆಗಳನ್ನ ತೋರಿಕೊಳ್ಳಲಿ, ಮಾಡಿದ ಅಭಿವೃದ್ಧಿಗಳನ್ನು ಬಣ್ಣಿಸಿಕೊಳ್ಳಲಿ. ಅದನ್ನು ಬಿಟ್ಟು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದರಿಂದ ಯಾವ ಪ್ರಯೋಜನವೂ ಆಗಲಾರದು. ಅಷ್ಟಕ್ಕೂ ಇವರಿಗೆ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಸಾಧನೆ ಮಾಡಿದ್ದರೆ ತಾನೆ?

ಇನ್ನು ಬಿಜೆಪಿಯ ಜಾಹೀರಾತು. ಯಾವುದೊ ಬಡ್ಡಿದರದ ಬಗ್ಗೆ ಇವರ ಚೌಕಾಸಿ. ಇವರ ಜಾಹೀರಾತು ನೋಡಿದರೆ ಎಲ್ಲರೂ ಜೀವನ ನಡೆಸಲು ಸಾಲವನ್ನೆ ನಂಬಿಕೊಂಡಿದ್ದಾರೆನೋ ಎಂಬ ಅನುಮಾನ ಮೊಡುತ್ತದೆ. ಕಾಂಗ್ರೆಸ್ ಪಕ್ಷ ಬ್ರಷ್ಟಗೊಳ್ಳಲು ೫೦ ವರ್ಷ ಬೇಕಾದರೆ ಇವರಿಗೆ ೫ ವರ್ಷಗಳು ಸಾಕಾದವು. ಹಗರಣಗಳ ಪಟ್ಟಿ ಮಾಡಲು ಹೋದರೆ ಕೊನೆ ಮೊದಲೆನ್ನುವುದೇ ಇರುವುದಿಲ್ಲ. ಮತೀಯತೆಯ ಮೇಲೆ ಪಾಕಿಸ್ತಾನದ ಜನನಕ್ಕೆ ಕಾರಣನಾದ ಜಿನ್ನಾನನ್ನು ' ಸೆಕ್ಯೂಲರ್ ' ಎಂದು ಕರೆದ ಅಡ್ವಾಣಿ ಬಿಜೆಪಿಯವರೆ ಅಲ್ಲವೆ? ಅಧಿಕಾರಕ್ಕೊಸ್ಕರ ಪಕ್ಷದ ಧ್ಯೇಯ, ಸಿದ್ಧಾಂತಗಳನ್ನೇ ಬಲಿಕೊಟ್ಟ ಇವರೆಷ್ಟು ಸಂಭಾವಿತರು ?

ಇನ್ನು ಜೆಡಿಎಸ್ ಬಗ್ಗೆ ಮಾತಾಡುವುದಕ್ಕಿಂತ ಮಾತನಾಡದಿದ್ದರೇನೆ ಒಳಿತು. ೨೦ ತಿಂಗಳ ಅಧಿಕಾರ ಅನುಭವಿಸಿ ನಂತರ ಕೈ ಎತ್ತಿ , ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲವೆಂದು ಸಾಬೀತುಪಡಿಸಿದೆ ಈ ಪಕ್ಷ. ಮಂಗಣ್ಣನಂತೆ ಆ ಪಕ್ಷ ಆದಕೂಡಲೆ ಈ ಪಕ್ಷ, ಇದಾದ ಕೂಡಲೆ ಇನ್ನೊಂದು ಎಂದು ಮೈತ್ರಿಗೋಸ್ಕರ ಹಾರುವ ಕೆಟ್ಟ ಹವ್ಯಾಸ ಇವರಿಗೆ. ಒಟ್ಟಿನಲ್ಲಿ ಸದಾಕಾಲ ಅಧಿಕಾರದ ಚುಕ್ಕಾಣಿ ಇವರ ಕೈಯ್ಯಲ್ಲಿದ್ದರೆ ಇವರಿಗೆ ಸಮಾಧಾನ. ಮೊದಮೊದಲು ಭರವಸೆ ಮೊಡಿಸಿದ್ದ ಕುಮಾರಣ್ಣ ಕೊನೆಗೆ ಹತ್ತರೊಟ್ಟಿಗೆ ಹನ್ನೊಂದಾದರು.

ದಿನ ಬೆಳಗಾದರೆ ಪತ್ರಿಕೆ, ಟಿವಿ, ರೇಡಿಯೊಗಳಲ್ಲಿ ಮತ ಚಲಾವಣೆ ನಿಮ್ಮ ಹಕ್ಕು ಎಂದು ಕೂಗಿಕೂಗಿ ಹೇಳುತ್ತಾರೆ. ಪುಢಾರಿಗಳಿಂದ ಮೊದಲ್ಗೊಂಡು ಸಿನೆಮಾ ನಟರವರೆಗೆ ಎಲ್ಲರೂ ಹೇಳುವವರೆ, ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆಯೆಂದು. ಇರುವ ಎಲ್ಲರೂ ಫಟಿಂಗರಾದರೆ ಯಾರನ್ನು ಚುನಾಯಿಸುವುದು? ಯಾರು ಹಿತವರು ಈ ಮೊವರೊಳಗೆ ? ಹಸ್ತವೊ, ಕಮಲವೊ, ಹೊರೆ ಹೊತ್ತ ಮಹಿಳೆಯೊ ? (ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ನನ್ನ ಅನುಮಾನ).

(ಕೃಪೆ: ಪ್ರತಾಪ್ ಸಿಂಹರ ಬೆತ್ತಲೆ ಜಗತ್ತು)

Friday, May 2, 2008

ಮತ್ತದೇ ಮಳೆ ಮತ್ತವಳದೇ ನೆನಪು

ಹೌದು, ಅಂದೂ ಕೂಡ ಹೀಗೆ ಮಳೆ ಇತ್ತು. ಎಲ್ಲಾ ನೆನಪಿದೆ. ಅಂದೂ ಮೇ ತಿಂಗಳು. ಇದೇ ರೀತಿ ಸಂಜೆಗೆ ಮೊದಲೇ ಕತ್ತಲಾಗಿ, ಮೋಡಗಳು ಆಕಾಶವನ್ನೆಲ್ಲಾ ಆಚ್ಛಾದಿಸಿ ಮಳೆ ಯಾವಾಗಲಾದರೂ ಬರಬಹುದು ಎನ್ನುವ ಸಮಯದಲ್ಲೇ ಅವಳ ಕರೆ ಬಂದಿದ್ದು.

"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."

ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.

"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.

ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.

ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.

ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.

"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.

ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.

"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.

ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.

ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.

Monday, April 21, 2008

ಬಾ ಮಳೆಯೆ ಬಾ

ಎರಡು ಮೊರು ದಿನಗಳ ಹಿಂದೆ ಟಿವಿಯಲ್ಲಿ ಒಂದು ಕನ್ನಡ ಹಾಡನ್ನು ಕೇಳಿದೆ. ಆಕ್ಸಿಡೆಂಟ್ ಚಿತ್ರದ ಹಾಡು "ಬಾ ಮಳೆಯೆ ಬಾ." ತಕ್ಷಣ ಈ ಹಾಡನ್ನು ಮೊದಲೆಲ್ಲೊ ಕೇಳಿದ್ದೇನಲ್ಲ ಎಂದೆನೆಸಿತು. ಹೀಗೆ ನನ್ನ ನೆನಪಿನ ಮೋಟೆಯನ್ನು ಬಿಚ್ಚಿ ಹುಡುಕತೊಡಗಿದೆ. ಹತ್ತು ನಿಮಿಷದ ನಂತರವೂ ಉತ್ತರ ದೊರಕದೆ ಇದ್ದಾಗ ಪ್ರಯತ್ನವನ್ನು ಕೈ ಬಿಟ್ಟು ಸುಮ್ಮನಾದೆ.

ನಿನ್ನೆ ಬಸ್ಸಿನಲ್ಲಿ ಹೋಗುವಾಗ ರೇಡಿಯೊದಲ್ಲಿ ಮತ್ತೆ ಅದೇ ಹಾಡು. ಈ ಬಾರಿ ಬಿಡಬಾರದೆಂದು ಮತ್ತೆ ಹುಡುಕಾಟ ಶುರು ಮಾಡಿದೆ. ಸ್ವಲ್ಪ ಹೊತ್ತಿನಲ್ಲೆ ನೆನಪಾಯಿತು , ಆದರೆ ಪೂರ್ತಿಯಾಗಿ ಅಲ್ಲ. ಅದೊಂದು ಭಾವಗೀತೆಯೆಂದಷ್ಟೆ ನೆನಪಾಯಿತು. ಅಷ್ಟರಲ್ಲೆ ನಾನು ಇಳಿದುಕೊಳ್ಳಬೇಕಿದ್ದ ಸ್ಥಳ ಬಂದಿದ್ದುದರಿಂದ ಅನ್ವೇಷಣೆಯನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು. ಸಂಜೆ ಮನೆಗೆ ಬಂದವನೇ ನನ್ನ ಭಾವಗೀತೆಗಳ ಸಿಡಿಗಳನ್ನೆಲ್ಲ ಹರವಿಕೊಂಡು ಕುಳಿತೆ. ಎಲ್ಲವನ್ನು ಹುಡುಕಿದ ಮೇಲೆ ನನ್ನಲ್ಲಿ ಆ ಹಾಡು ಇಲ್ಲವೆಂಬುದು ಜ್ನಾನೋದಯವಾಯಿತು. ಮತ್ತೆ ನೆನಪಿನ ಬೇಟೆ ಶುರುವಾಯಿತು. ಆಗ ನೆನಪಿಗೆ ಬಂದಿದ್ದು ವರ್ಲ್ಡ್ ಸ್ಪೇಸ್ ರೇಡಿಯೊ. ಆಗ ವರ್ಲ್ದ್ ಸ್ವೇಸ್ ನಲ್ಲಿ ಬೆಳಿಗ್ಗೆ ೧೦ ರಿಂದ ೧ ರ ವರೆಗೆ ಭಾವಗೀತೆಗಳು ಪ್ರಸಾರವಾಗುತ್ತಿತ್ತು. ಆಗ ಆ ಹಾಡನ್ನು ಕೇಳಿದ್ದೆ.

ಇಂದು ಹೇಗಾದರೂ ಮಾಡಿ ಆ ಹಾಡನ್ನು ಕೇಳಲೇ ಬೇಕೆಂದು http://www.kannadaaudio.com/ ಅನ್ನು ಹೊಕ್ಕೆ. ಅಲ್ಲಿ ಭಾವಗೀತೆಗಳ ವಿಭಾಗದಲ್ಲಿ ಇದ್ದ ಸಂಗ್ರಹವನ್ನು ನೋಡಿ ಇದು ಆಗುಹೋಗುವ ಕೆಲಸವಲ್ಲ ಎಂದುಕೊಂಡೆ. ಆದರೂ ೩-೪ ದಿನದಿಂದ ಹಿಂಬಾಲಿಸಿ ಇದನ್ನು ಇಲ್ಲಿಗೆ ಬಿಡುವುದು ಸರಿಯಲ್ಲವೆಂದೆನಿಸಿತು. ಹಾಗೆ ವೆಬ್ ಪುಟವನ್ನು scroll down ಮಾಡಿದಾಗ ಅದೃಷ್ಟವಶಾತ್ search option ಕಂಡಿತು. ನಾಲ್ಕಾರು result ಗಳು ದೊರೆಯಿತು. ರಾಜು ಅನಂತಸ್ವಾಮಿ ಅವರ ಸಂಗೀತ ಹಾಗು ಧ್ವನಿಯಲ್ಲಿ ಮೊಡಿದ್ದ ಹಾಡನ್ನು ಕೊನೆಗೂ ಕಂಡು ಹಿಡಿದಿದ್ದು ಬಹಳ ಸಂತೋಷ ತಂದಿತ್ತು. ಸಾಹಿತ್ಯ ಬಿ.ಆರ್. ಲಕ್ಷ್ಮಣರಾವ್ ಅವ್ರದ್ದು ಎಂದು ತಿಳಿದಕೂಡಲೆ ಕುತೂಹಲ ಇನ್ನೂ ಹೆಚ್ಚಿತು. ಬಹುಶ ಇದು ಒನ್ ಆಫ್ ದಿ ಬೆಸ್ಟ್ ರೊಮ್ಯಾಂಟಿಕ್ ಸಾಂಗ್ಸ್ ಎಂದು ನನ್ನ ಅನಿಸಿಕೆ. ಇಂಥ ಅಧ್ಬುತ ಸಾಹಿತ್ಯದ ಹಾಡನ್ನು ಹಲವಾರು ಬಾರಿ ಕೇಳಿ ಸಂತೋಷಪಟ್ಟೆ. ಹಾಗೇ ಅಲ್ಲೇ ಲಭ್ಯವಿದ್ದ ಆಕ್ಸಿಡೆಂಟ್ ಚಿತ್ರದ ಹಾಡನ್ನೂ ಕೇಳಿದೆ. ಸೋನು ನಿಗಮ್ ರ ಸ್ವರದಲ್ಲಿ ಹಾಡು ಕೇಳಲು ಇಂಪಾಗಿದೆ. ಆದರೆ ಅಲ್ಲಲ್ಲಿ ಪದಗಳ ತಪ್ಪು ಉಚ್ಚಾರಣೆ ಕೇಳುಗರಿಗೆ ಅಹಿತವೆನಿಸುತ್ತದೆ. ಹಾಡಿನ ರಾಗಕ್ಕೋಸ್ಕರ ಸಾಹಿತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. "ಅಷ್ಟು" ಹೋಗಿ "ಅಟ್ಟು" ಆಗಿದೆ. "ತೆಕ್ಕೆ" "ತೆಕೆ" ಆಗಿದೆ. "ಬೇಗ" "ಬೆಗ" ವಾಗಿದೆ. ಇದೇ ಹಾಡನ್ನು ಕನ್ನಡಿಗನಲ್ಲಿ ಹಾಡಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸಿತು. ಒಟ್ಟಿನಲ್ಲಿ ಒಂದು ಅಧ್ಬುತ ಸಾಹಿತ್ಯದ ಹಾಡನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದ್ದಕ್ಕೆ http://www.kannadaaudio.com/ ಗೂ ಹಾಗು ಕನ್ನಡಕ್ಕೆ ಇಂಥ ಒಳ್ಳೆ ಗೀತೆಯನ್ನು ನೀಡಿದ್ದಕ್ಕೆ ಬಿ.ಆರ್. ಲಕ್ಷ್ಮಣ್ ರಾವ್ ಅವರಿಗೂ ಸಾವಿರ ವಂದನೆಗಳು.

"ಬಾ ಮಳೆಯೆ ಬಾ" ಮೊಲ ಗೀತೆಯನ್ನು ಕೇಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ http://www.kannadaaudio.com/Songs/Bhaavageethe/home/HrudayavaNinageNeedide.php

ಹಾಡಿನ ಸಾಹಿತ್ಯ :
ಬಾ ಮಳೆಯೆ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ಬಾ ಮಳೆಯೆ ಬಾ........

ಓಡು ಕಾಲವೆ ಓಡು
ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು ಕಾಲವೆ ನಿಲ್ಲು
ನನ್ನ ತೆಕ್ಕೆ ಸಡಿಲಾಗದಂತೆ

ಬಾ ಮಳೆಯೆ ಬಾ.........

ಬೀಸು ಗಾಳಿಯೆ ಬೀಸು
ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು
ಅವಳು ಬಹ ದಾರಿಯಲ್ಲಿ
ಕಲ್ಲುಗಳು ತಾಗದಂತೆ

ಬಾ ಮಳೆಯೆ ಬಾ..........

ಬೀರು ದೀಪವೆ ಬೀರು
ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು ಬೇಗನೆ ಆರು
ಶೃಂಗಾರ ಶಯೆಯಲ್ಲಿ
ನಾಚಿ ನೀರಾಗದಂತೆ

ಬಾ ಮಳೆಯೆ ಬಾ.........

ಯಾನದ ಪ್ರಾರಂಭದಲ್ಲಿ ನಾಲ್ಕು ಮಾತುಗಳು

ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು ಇನ್ನೂ ತಿಂಗಳಷ್ಟೇ ಆಯಿತು. ಇಲ್ಲಿನ ಆಗಾಧತೆಯನ್ನು ಕಂಡು ಬೆಚ್ಚಿದ್ದೇನೆ ಹಾಗು ಕನ್ನಡದಲ್ಲಿ ಇಷ್ಟೊಂದು ಒಳ್ಳೆಯ ಬರವಣಿಗೆಗಳನ್ನು ಓದಲು ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದೇನೆ. ನಾನು ಬರೆಯಲು ಪ್ರಾರಂಭಿಸಿದ್ದು ಇತ್ತೀಚೆಗೆ. ನನಗೆ ಬರೆಯಲು ಪ್ರೇರಣೆ ನೀಡಿದ್ದು ಶಿವುರವರ "ಹರಟೆ"ಗಳು. ಶಿವುರವರ ಪ್ರೇರೇಪಣೆ, ಅಮ್ಮ ಮತ್ತು ಜಯಂತ್ ಸರ್ ಅವರ ಪ್ರೋತ್ಸಾಹ ನಾನು ನಾಲ್ಕು ಅಕ್ಷರಗಳನ್ನು ಗೀಚಲು ಸಾಧ್ಯವಾಗಿಸಿದವು. ನನ್ನ ದಿನಚರಿಗಷ್ಟೆ ಸೀಮಿತವಾಗಿದ್ದ ನನ್ನ ಬರಹಗಳು ಈಗ ಬ್ಲಾಗ್ ಲೋಕದ ಕಟ್ಟೆ ಹತ್ತಿವೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನಾನು ಈವರೆಗೆ ಓದಿದ್ದು ಅತ್ಯಲ್ಪ. ಇನ್ನೂ ಓದಬೇಕು. ಕವನಗಳನ್ನು ಬರೆಯಲು ಪ್ರಯತ್ನಿಸಿದ್ದೆನಾದರೂ, ಬರೆದ ಕವನಗಳೆಲ್ಲ ತೀರಾ ಬಾಲಿಶವೆನಿಸಿ ಅದನ್ನು ಅಲ್ಲಿಗೆ ಕೈ ಬಿಟ್ಟಿದ್ದೇನೆ. ನನ್ನ ಬರಹಗಳನ್ನು ಓದಿ ಅದರ ಬಗೆಗಿನ ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಿದರೆ ನನ್ನನ್ನು ನಾನು ತಿದ್ದಿಕೊಂಡು ಇನ್ನೂ ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆ. ಚರ್ಚೆಗೆ ಮುಕ್ತ ಅವಕಾಶವಿದೆ.