Thursday, May 22, 2008

ಹುಚ್ಚನೊಬ್ಬನ ಅಸಂಭದ್ದ ಪ್ರಲಾಪ





ಇಡೀ ಕೇರಿಗೆ, ಊರಿಗೆ, ಬೀದಿ ನಾಯಿಗಳಿಗೆ ಆಗಲೆ ಅರ್ಧ ರಾತ್ರಿ ಮುಗಿದುಹೋಗಿದೆ. ನಿದ್ದೆಯು ನನ್ನಲ್ಲಿ ಸಮರ ಹೂಡಿದೆ. ಪೂರ್ಣಚಂದ್ರನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಅರ್ಧ ಪಾಳಿಯನ್ನು ಮುಗಿಸಿದ್ದಾನೆ. ನನಗೆ ನಿದ್ದೆಯಿಲ್ಲ. ಹಾಗಂತ ಹೇಳಿಕೊಳ್ಳುವಂಥ ಯೋಚನೆಗಳೂ ಏನಿಲ್ಲ. ಹುಚ್ಚನಿಗೆಲ್ಲಿಯ ಯೋಚನೆ? ಖಾಲಿ ಹಾಳೆಯಂತಾಗಿದೆ ಮನಸ್ಸು. ನನಗೇ ಗೊತ್ತಿಲ್ಲದಂತೆ ಹೊಸ ಸ್ಥಿತಿಯೊಂದನ್ನು ತಲುಪಿದ್ದೇನೆ. ಕಷ್ಟಸಾಧ್ಯವಾಗಿ ದೊರಕುವಂತ ಈ ಸ್ಥಿತಿ ನನಗೆ ಬೇಡದೇ ದೊರೆತಿದೆ. ಬಯಸದೇ ಬಂದ ಭಾಗ್ಯ. ಭಾಗ್ಯವೋ ಏನು ಸುಡುಗಾಡೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಈ ಅಪರಾತ್ರಿ ಸಮಯದಲ್ಲಿ ಏನೋ ಒಂದು ಆಗಿದೆ ಎನ್ನಬಹುದಷ್ಟೆ.

ಹಾಸಿಗೆಯಿಂದ ಎದ್ದು ಕಿಟಕಿಯ ಬಳಿಸಾರಿದೆ. ಪೂರ್ಣಚಂದಿರನ ಹಾಲು ಬೆಳಕನ್ನು ತನ್ನ ಮೇಲೆ ಸುರಿದುಕೊಂಡಿದ್ದ ಕಾಡು ಕಂಡಿತು. ಮೌನವನ್ನು ಅಪ್ಪಿ ಹಿಡಿದಿತ್ತು ಕಾಡು. ನಿಗೂಢ ಎಂಬ ಪದವನ್ನು ಕೇಳಿದಾಗಲೆಲ್ಲ ನೆನಪಾಗುತ್ತಿತ್ತು ಈ ಕಾಡು. ಲಕ್ಷಾಂತರ ಕೀಟಗಳು ಈ ನಿಗೂಢ ಪ್ರಪಂಚದ ಪ್ರತಿನಿಧಿಗಳಂತೆ ಆಗೊಮ್ಮೆ ಈಗೊಮ್ಮೆ ಟರ ಟರ ಗುಟ್ಟಿ ಮೌನಕ್ಕೊಮ್ಮೆ ಎಚ್ಚರಿಕೆ ನೀಡುತ್ತಿದ್ದವು. ಕಿಟಕಿಯ ಸರಳನ್ನು ಹಿಡಿದು ನಿಗೂಢತೆಯನ್ನು ಅವಲೋಕಿಸುತ್ತಿದ್ದ ಹುಚ್ಚನಿಗೆ ಅರ್ಥಾತ್ ನನಗೆ ಬೇಸರ ಮೂಡತೊಡಗಿದೆ. ಆದರೇನು ಮಾಡುವುದು, ನಿದ್ದೆಗೆ ನನ್ನ ಮೇಲೆ ಬೇಸರ ಬಂದಿದೆ.

ಬಾಗಿಲು ತೆರೆದು ಅಟ್ಟವನ್ನೇರಿದೆ. ಸಾವಿರಾರು ಬೆಳ್ಳಿ ಚುಕ್ಕೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿತ್ತು ಆಕಾಶ. ಅದೆಷ್ಟೋ ಹೊತ್ತು ಹಾಗೇ ಆಕಾಶವನ್ನು ನೋಡುತ್ತ ಕುಳಿತಿದ್ದೆ, ನಿಮಿತ್ತವಿಲ್ಲದೆ. ಎಂದಾದರೂ ಮಾಯಾನೌಕೆಯೊಂದು ಬಂದು ನನ್ನನ್ನು ಹೊತ್ತೊಯ್ಯಬಹುದೆಂಬ ನಿರೀಕ್ಷೆಯಲಿ. ನಿರೀಕ್ಷೆ ಸರಿಯಾದ ಪದವಲ್ಲ. "ಆಸೆ" ಎಂದು ಬದಲಾಯಿಸಿದರೆ ಸರಿಯಾದೀತು. ಮನೆ ಮುಂದಿನ ಕಲ್ಪವೃಕ್ಷವೊಂದು ಆಗಾಗ ಗರಿಗಳನ್ನು ಆಡಿಸುತ್ತಿದೆ. ತಾನಿನ್ನೂ ಸಜೀವವಾಗಿದ್ದೇನೆ ಎಂದು ತೋರಿಕೊಳ್ಳಲೋ ಏನೋ? ಅಥವಾ ಗಾಳಿಯು ತನ್ನ ಇರುವನ್ನು ವ್ಯಕ್ತಪಡಿಸುತ್ತಲೂ ಇರಬಹುದು. ಊಹೂಂ....... ಇನ್ನೂ ನಿದ್ದೆಯ ಸುಳಿವಿಲ್ಲ. ನಿಗೂಢದ ಆಚೆಗಿರುವ ಬೆಟ್ಟವನ್ನು ಆರೋಹಿಸುವ ಆಲೋಚನೆಯೊಂದು ಮನದಲ್ಲಿ ಮಿಂಚಿ ಮಾಯವಾಗುತ್ತದೆ. ಇಂಥ ಹುಚ್ಚು ಆಲೋಚನೆಗಳು ನನ್ನಲ್ಲಿ ಬರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹುಚ್ಚು ಆಲೋಚನೆಗಳು ಹುಚ್ಚರಿಗಲ್ಲದೆ ಬೇರೆ ಯಾರಿಗೆ ಬರಲು ಸಾಧ್ಯ ಅಲ್ಲವೇ? ಆಲೋಚನೆಯೊಂದು ಸುಳಿದಿದ್ದೇ ನಿಜವಾದ ಮೇಲೆ ಅದನ್ನು ಕಾರ್ಯಗತಗೊಳಿಸದೇ ಹೋದರೆ ಹುಚ್ಚುತನಕ್ಕೂ ಮರ್ಯಾದೆ ಇರುವುದಿಲ್ಲ.

ಮುಂದಿನ ಕೆಲವೇ ಕ್ಷಣಗಳಲ್ಲಿ ಕಾಡಿನ ಹಾದಿಯಲ್ಲಿ ನನ್ನ ಪಯಣ ಶುರುವಾಗುತ್ತದೆ. ದಾರಿತೋರಲು ಪೂರ್ಣಚಂದ್ರನಿದ್ದಾನೆ. ಅವನಿಲ್ಲದಿದ್ದರೂ ನಡೆದೀತು. ಚಿಕ್ಕಂದಿನಿಂದ ಅದೆಷ್ಟು ಬಾರಿ ಈ ಹಾದಿಯನ್ನು ಸವೆಸಿದ್ದೇನೋ? ಆದರೂ ಈ ಕಾಡು ನನಗೆ ನಿಗೂಢವೇ. ಎಲ್ಲಿಯೂ ಎಡವಲಿಲ್ಲ. ಗುಡ್ದದ ಬುಡ ಬಂದೇ ಬಂದಿತು. ಗುಡ್ಡದ ಹುಲ್ಲು ಹಾಸಿನ ಮೇಲೆ ಹೊರಳುವ ಮನಸಾಯಿತು. ಆಸೆ ಹೆಮ್ಮರವಾಗಿ ಇನ್ನು ಸಾಧ್ಯವೇ ಇಲ್ಲವೆಂದೆನಿಸಿ ಹೊರಳಿದೆ. ಇಲ್ಲಿ ಯಾರೂ ಇಲ್ಲ ನನ್ನನ್ನು ನೋಡಿ ನಗಲು. ಇದ್ದರೂ ನನ್ನ ಹುಚ್ಚಾಟದಲ್ಲಿ ಪಾಲ್ಗೊಳ್ಳುವ ಸಾಹಸ ಯಾರೂ ಮಾಡಲಾರರು. ಗುಡ್ಡದ ನೆತ್ತಿಯನ್ನು ನೋಡುವೆ, ಇನ್ನು ತುದಿಯನ್ನು ತಲುಪುವ ಕಾಯಕವೊಂದೆ ಬಾಕಿ ಉಳಿದಿರುವುದು. ಉತ್ಸಾಹಕ್ಕೇನು ಕೊರತೆಯಿಲ್ಲ. ನಿದ್ದೆಗೂ ನನಗೂ ವಿರಸ. ಸರಿ, ಯಾರ ಹಂಗೂ ಇಲ್ಲದ ಮೇಲೆ ತುದಿ ತಲುಪೇ ತೀರುವೆ. ಅಗೋ................ನೆತ್ತಿ ಬಂದೇ ಬಿಟ್ಟಿತು. ಎದುರುಸಿರೂ ಇಲ್ಲ. ಆಶ್ಚರ್ಯವಲ್ಲದೆ ಮತ್ತೇನು, ಇಷ್ಟೆತ್ತರದ ಗುಡ್ಡದ ತುದಿಯನ್ನು ಎದುರುಸಿರು ಇಲ್ಲದೆ ಹತ್ತುವುದು ತಮಾಷೆಯ ವಿಷಯವೇ? ಪ್ರಶಸ್ತಿಯನ್ನೇನು ಯಾರೂ ಪ್ರಕಟಿಸಿಲ್ಲ. ಗಾಳಿಯು ಬೀಸುತ್ತಲೇ ಇದೆ, ಗತ್ಯಂತರವಿಲ್ಲದೆ. ದೂರದಲ್ಲೊಂದು ಊರು, ತಾಳಗುಪ್ಪವೊ ಏನೊ ಅದರ ಹೆಸರು. ಬಿಡಿ ಯಾವ ಊರಾದರೇನಂತೆ. ಇನ್ಯಾವುದೋ ದೊಡ್ದ ಪಟ್ಟಣವನ್ನು ಬೆಳಗಲು ಇಲ್ಲೊಂದು ಗ್ರಿಡ್ ನಿರ್ಮಾಣವಾಗಿದೆ. ಆ ಗ್ರಿಡ್ ನ ಕೇಸರಿ ದೀಪಗಳು ಆ ಕಡೆಯ ಆಗಸವನ್ನು ಕೆಂಪಾಗಿಸಿವೆ. ಕಿನ್ನರ ಲೋಕವೊಂದರ ನಕಲಿನಂತೆ ಗೋಚರಿಸುತ್ತಿದೆ. ಹಾಗೆ ನೋಡುತ್ತ ಕೂರುತ್ತೇನೆ ಕಿನ್ನರ ಲೋಕದೆಡೆಗೆ ಬೆಳಗಿನ ನಿರೀಕ್ಷೆಯಲಿ. ಇನ್ನೂ ನಿದ್ದೆಯ ವಿಳಾಸವಿಲ್ಲ. ನೋಡುತ್ತ ಕುಳಿತಿರುತ್ತೇನೆ ಅನಂತಾಕಾಶವನ್ನು, ನಿದ್ದೆಯು ನನ್ನನ್ನು ಅಪ್ಪುವವರೆಗೂ. ಹೀಗೆ ಅವಸಾನಗೊಳ್ಳುತ್ತಿದೆ ಹುಚ್ಚನೊಬ್ಬನ ಪೌರ್ಣಿಮೆಯ ರಾತ್ರಿ.

2 comments:

ತೇಜಸ್ವಿನಿ ಹೆಗಡೆ said...

ಇದು ನಿನ್ನ, ನನ್ನಂತಹ ಹುಚ್ಚರ ಪ್ರಲಾಪದಂತಿದೆ ;-) ನಿಜ್ವಾಗ್ಲೂ ನಂಗೂ ಇಂತಹ ಹುಚ್ಚು ಸುಮಾರ್ ಸಲ ಆಗಿತ್ತು.. ಆಗ್ತಾನೇ ಇರ್ತು.. ತಮಾಶೆ ಅಲ್ಲಾ! ನನ್ನೊಳಗಿನ ಹುಚ್ಚನ್ನು ಹೊರತಂದಂತಿದೆ ನಿಮ್ಮ ಕಥೆ!

ಮನಸಿನ ಮಾತುಗಳು said...

ishta aaytu Sharat.... :)