Showing posts with label ಜಿ. ಎಸ್. ಶಿವರುದ್ರಪ್ಪ.. Show all posts
Showing posts with label ಜಿ. ಎಸ್. ಶಿವರುದ್ರಪ್ಪ.. Show all posts

Sunday, March 8, 2009

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಆಕೆಯ ಕೈಯ್ಯಷ್ಟು ಮೃದುವಾದ ಕೈ ಮತ್ತೊಂದಿಲ್ಲ. ಅವಳು ಪ್ರೀತಿಯಿಂದ ತಲೆಯ ಮೇಲೆ ಕೈ ಸವರುತ್ತಾಳೆ. ಜ್ವರ ಬಂದಾಗ ಅವಳ ಕೈ ಹಣೆ ಮುಟ್ಟಿದರೆ ಆ ಸ್ಪರ್ಶದಿಂದಲೇ ಅರ್ಧ ಜ್ವರ ಮಾಯವಾಗುತ್ತದೆ. ಆ ಮೃದು ಕೈಯ್ಯ ಹಿಂದೆ ಕಷ್ಟಗಳ ದೊಡ್ಡ ಕಥೆಯೇ ಇದೆ. ಕೆಲಸ ಮಾಡಿ ಮಾಡಿಯೇ ಕೈ ಸವೆದು ಇಷ್ಟು ಮ್ರುದುವಾಗಿದೆಯೇ ಎಂದು ಕೆಲವೊಮ್ಮೆ ನನಗೆ ಅನ್ನಿಸಿದ್ದೂ ಇದೆ. ಈ ವಯಸ್ಸಿನಲ್ಲೂ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಾಳೆ. ಹಾಗೆ ಪ್ರೀತಿಯೂ ಕೂಡ, ಸಾಗರದಷ್ಟು ಆಳ, ವಿಶಾಲ. ಮೊಮ್ಮಗ ಫೋನ್ ಮಾಡಿದಾಗ ಮಾತನಾಡಿಸಿದರೆ ಅದನ್ನೇ ನಾಲ್ಕಾರು ದಿನ ನಾಲ್ಕಾರು ಜನಕ್ಕೆ ಹೇಳಿಕೊಂಡು ಸಂಭ್ರಮಿಸುವಷ್ಟು ಮುಗ್ಧೆ ಈಕೆ. ಆಕೆಗೆ ಆಕೆಯ ಕುಟುಂಬವೇ ಸರ್ವಸ್ವ, ಆಕೆಯ ಊರೇ ಪ್ರಪಂಚ. ಇಷ್ಟೊಂದು ಪ್ರೀತಿಯನ್ನು ಯಾವುದೇ ಅಪೇಕ್ಷೆ ಇಲ್ಲದೆ ನನಗೆ ನೀಡಿದ ಈಕೆ ನನ್ನ ಅಜ್ಜಿ.


ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಈಕೆ ನನ್ನ ಸರ್ವಸ್ವ. ಈಕೆಯನ್ನು ಬಿಟ್ಟು ನಾನಿಲ್ಲ. ನನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನೂ ಬಲ್ಲವಳು ಇವಳು. ನನ್ನ ಹೃದಯದ ತಳಮಳಗಳನ್ನು ಕಣ್ಣಲ್ಲಿ ಕಣ್ಣಿಟ್ಟು ತಿಳಿದುಕೊಳ್ಳಬಲ್ಲವಳು. ನನ್ನ ಕಣ್ಣು ತುಂಬಿದರೆ ಈಕೆ ಅಳುವಳು. ನನ್ನ ಮುಖದ ಮಂದಹಾಸ ಈಕೆಯ ಬಾಯ್ತುಂಬ ನಗೆಗೆ ಕಾರಣವಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಅರಿತವಳು. ನನ್ನಲ್ಲಿ ಏನೇನು ಒಳ್ಳೆಯ ಗುಣಗಳು ಇವೆಯೋ ಅದಕ್ಕೆಲ್ಲ ಕಾರಣ ಇವಳೇ. ಈಕೆಯ ಋಣವನ್ನು ನಾನೆಂದೂ ತೀರಿಸಲು ಆಗದು. ಈಕೆ ನನ್ನನ್ನು ಹೊತ್ತು, ಹೆತ್ತು, ಎತ್ತಾಡಿಸಿ, ಮುದ್ದಾಡಿಸಿ, ಇಷ್ಟೆತ್ತರಕ್ಕೆ ಬೆಳೆಸಿ ನಿಲ್ಲಿಸಿದ ನನ್ನ ಅಮ್ಮ.


ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆ ನನ್ನೊಂದಿಗೆ ಭಯಂಕರ ಜಗಳ ಮಾಡುತ್ತಾಳೆ. ಜಗಳ ಮುಗಿದು ಮುನಿಸಿಕೊಂಡಾಗ ಕೈ ಹಿಡಿದು ಕೇಳುತ್ತಾಳೆ "ಹೇ ಸಾರಿ ಕಣೋ, ಇನ್ನೊದು ಸಲ ಜಗಳ ಮಾಡಲ್ಲ." ಮನೆಗೆ ಹೋದರೆ ನನಗೋಸ್ಕರ ಸಿಹಿ ಮಾಡುತ್ತಾಳೆ. ರಾತ್ರಿ ಒಂದರ ವರೆಗೆ ಹರಟುವಷ್ಟು ವಿಷಯಗಳಿರುತ್ತವೆ ಇವಳಿಗೆ. "ಏ ಆ ಹುಡುಗಿಗೆ ಲೈನ್ ಹೊಡೆಯೋ, ಚನ್ನಾಗಿದ್ದಾಳೆ" "ಇವಳು ಬೇಡ, ನಿಂಗೆ ಸರಿಯಾದ ಜೋಡಿ ಅಲ್ಲ ಬಿಡು" ಎಂದೆಲ್ಲ ತಮಾಷೆ ಮಾಡುತ್ತಾಳೆ. ಏನೂ ಕೆಲಸವಿಲ್ಲದಿದ್ದರೆ ಬಂದು ಮೈಗೆ ಒರಗುತ್ತಾಳೆ, ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಹೋಗುತ್ತಾಳೆ..... ನನ್ನ ತಂಗಿ ಈಕೆ.


ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಹೃದಯ ಆಗಷ್ಟೆ ಹುಟ್ಟಿದ ಮಗುವಿನಷ್ಟು ಪರಿಶುದ್ದ. ಕಪಟವನ್ನು ಅರಿಯದವಳೀಕೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹಾಗೆ ಹೇಳುವಳು. ನಾನು ಬೇಸರಗೊಂಡಅಗಲೆಲ್ಲ ಹುರಿದುಂಬಿಸುವಳು. ಪ್ರತಿಯೊಂದು ಮಾತನ್ನೂ ನಗು ತುಂಬಿಕೊಂಡು ಆಡುವಳು. ಇವಳು ಉತ್ಸಾಹದ ಚಿಲುಮೆ. ಹೊಂದಿಕೊಂಡು ಹೋಗುವ ಸರಳತೆಯಿದೆ ಇವಳಿಗೆ. ಸ್ವಚ್ಛ ಮನಸ್ಸಿಂದ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ ಈಕೆ. ಯಾರಾದರು ನೋಯಿಸಿದರೆ ನನ್ನಲ್ಲಿ ಬಂದು ಕಣ್ಣೀರು ಹರಿಸಿ ನೋವನ್ನು ಕಳೆದುಕೊಳ್ಳುವವಳು. ಇವಳು ನನ್ನ ಗೆಳತಿ.



(ಕವಿ ಜಿ.ಎಸ್. ಶಿವರುದ್ರಪ್ಪ ಅವರ ಈ ಕವಿತೆಯನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದಾಗ ನನ್ನಲ್ಲಿ ಮೂಡಿದ ಭಾವನೆಗಳ ಅಕ್ಷರ ರೂಪ ಈ ಬರಹ. ಸುಮಾರು ಎರಡು ವರ್ಷಗಳ ಹಿಂದೆ ಬರೆದಿದ್ದು. ಇದು ನಾನು ಬರೆದ ಮೊದಲ ಬರಹವೂ ಹೌದು. ಸಂಭಂದಗಳಿಗೆ ಹೆಸರು ಇರಲೇ ಬೇಕೆಂದೇನಿಲ್ಲ. ಎಷ್ಟೋ ಸಂಭಂದವಿಲ್ಲದ ಮಹಿಳೆಯರ ಎಷ್ಟೋ ಸಹಾಯಗಳನ್ನು, ಅವರ ಪ್ರಭಾವಗಳನ್ನು ಮರೆಯಲು ಸಾಧ್ಯವಿಲ್ಲ. ಈ ಮೇಲೆ ಬಂದ ವ್ಯಕ್ತಿಗಳು ಕೇವಲ ವ್ಯಕ್ತಿಗಳಾಗಿರದೆ ನನ್ನ ಜೀವನ, ವ್ಯಕ್ತಿತ್ವ, ನಡೆ, ನುಡಿ ರೂಪಿಸಿದ ಶಕ್ತಿಗಳಾಗಿದ್ದಾರೆ. ನನ್ನ ಜೀವನದ ಎಲ್ಲ ಸಂತೋಷಕ್ಕೆ ಕಾರಣರಾದ, ಹೃದಯ ತುಂಬಿ ಪ್ರೀತಿ ನೀಡಿದ, ಸೋತು ಕುಳಿತಾಗ ಉತ್ಸಾಹ ತುಂಬಿದ, ಮಮತೆಯ ಮಳೆಗೈದ, ನಾನು ಮಾಡಿದ ತಪ್ಪುಗಳನ್ನೆಲ್ಲ ಕ್ಷಮಿಸಿದ ನನ್ನ ಅಮ್ಮ, ಅಜ್ಜಿ, ಅತ್ತೆಯಂದಿರು, ಅತ್ತಿಗೆಯಂದಿರು, ಅಕ್ಕಂದಿರು, ತಂಗಿಯಂದಿರು, ಸ್ನೇಹಿತೆಯರು, ಹಾಗು ಹೆಸರೇ ಗೊತ್ತಿಲ್ಲದ ಅನೇಕ ಅಜ್ಞಾತ ಮಹಿಳೆಯರೆಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮ ಋಣವನ್ನು ಎಂದು ತೀರಿಸಲಾರೆನು).