Friday, November 26, 2010

ಸಣ್ಣದೊಂದು ಸಂತಸ... ನಿಮ್ಮೆಲ್ಲರಿಂದಾಗಿ

ದಿನಾಂಕ ೨೪ ನವೆಂಬರ್, ೨೦೧೦ ರ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆಯ ವೆಬ್ಬಾಗಿಲು ಅಂಕಣದಲ್ಲಿ ಭಾವಯಾನದ ಬಗ್ಗೆ ಬಂದಿತ್ತು. ನನಗೆ ಇದೊಂದು ಸಂತಸದ ವಿಷಯ. ಇದೆ ಮೊದಲ ಬಾರಿಗೆ ಪತ್ರಿಕೆಯೊಂದರಲ್ಲಿ ನನ್ನ ಹೆಸರು ಕಾಣಿಸಿಕೊಂಡಿದೆ. ಕೆಲವರಿಗೆ ಇದು ತೀರಾ ಸಿಲ್ಲಿ ವಿಷಯ ಅನ್ನಿಸಬಹುದು. ನನಗೂ ಕೆಲವು ಸಲ ಸಿಲ್ಲಿ ವಿಷಯವಾಗೆ ಕಾಣಿಸಿತ್ತು. ಆದರೂ ನನ್ನ ಚಿತ್ರಗಳು ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿದೆ ಎಂದರೆ ಹೇಳಲಾಗದ ಅನುಭವ ಅಥವಾ ಪ್ರಥಮ ಬಾರಿ ಬಂದಿದ್ದರಿಂದ ಈ ಅನುಭವ. ಬಹುಮಾನ ಬಂದಾಗ ಪುಟ್ಟ ಹುಡುಗನೊಬ್ಬ ಬಹುಮಾನವಾಗಿ ಬಂದ ವಸ್ತುವನ್ನು ಅಕ್ಕಪಕ್ಕದವರಿಗೆಲ್ಲ ತೋರಿಸಿ ಸಂತೋಷ ಪಟ್ಟಂತೆ ಗೆಳೆಯ ಗೆಳತಿಯರಿಗೆಲ್ಲ ಸಂದೇಶ ಕಳಿಸಿ ಸಂಭ್ರಮಿಸಿದ್ದೇನೆ. ಇದು ಯಾವ ಸಾಧನೆಯೂ ಅಲ್ಲವೆಂದು ಗೊತ್ತು. ಆದರೆ ಇದು ಜೀವನದ ಒಂದು ಸಣ್ಣ ಸಂತಸದ ಕ್ಷಣ. ಈ ಸಂತಸಕ್ಕೆ ಕಾರಣರಾದ ಹಾಗು ನನಗೆ ಪ್ರೋತ್ಸಾಹಿಸುತ್ತಾ ತಮ್ಮ ಗೆಳೆತನದ ಒಡಲಲ್ಲಿ ತುಂಬಿಕೊಂಡ ನನ್ನೆಲ್ಲಾ ಸ್ನೇಹಿತ-ಸ್ನೇಹಿತೆಯರು, ಸಹ ಬ್ಲಾಗಿಗರು, ಹಾಗು ನನಗೆ ಒಳ್ಳೆಯದನ್ನು ಬಯಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ಹೀಗೆ ಪ್ರೋತ್ಸಾಹಿಸುತ್ತ ನನ್ನ ತಪ್ಪುಗಳನ್ನು ತಿದ್ದುತ್ತಾ ನನ್ನ ನಗುವಿಗೆ ಕಾರಣರಾಗಿರುವಿರೆಂದು ಭಾವಿಸುತ್ತೇನೆ.

ಅಂದ ಹಾಗೆ ಈ ಹಿಂದಿನ ಪೋಸ್ಟ್, ಬ್ಲಾಗಿನಲ್ಲಿ ನನ್ನ ೫೦ ನೇ ಪೋಸ್ಟ್ ಆಗಿತ್ತು. ತಡವಾಗಿ ಗಮನಿಸಿದೆ. ಎರಡೂವರೆ ವರ್ಷಗಳಲ್ಲಿ ೫೦ ಪೋಸ್ಟ್. ರಾಹುಲ್ ದ್ರಾವಿಡ್ ಬ್ಯಾಟಿಂಗ್ ಥರ ಆಯಿತು. ಹಲವಾರು ಬಾರಿ ಇಷ್ಟು ದೂರ ಸಾಗುವ ಎಣಿಕೆಯೂ ಇರಲಿಲ್ಲ. ಭಾವಯಾನವನ್ನು ಎಲ್ಲಿಯೂ ನಿಲ್ಲಲು ಕೊಡದೆ ನಿರಂತರವಾಗಿರಲು ಸ್ಫೂರ್ತಿ ಹಾಗು ಪ್ರೋತ್ಸಾಹ ನೀಡಿದ್ದೂ ನೀವೇ. ಹಾಗಾಗಿ ಇನ್ನೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು.








Sunday, November 14, 2010

ವರ್ಣ ಚಿತ್ರ - ಒಂದು ಪ್ರಯತ್ನ

ನಾನು ಚಿಕ್ಕವನಿರುವಾಗ ವರ್ಣ ಚಿತ್ರಗಳನ್ನು ಬಿಡಿಸುತ್ತಿದ್ದೆ. ಸ್ಕೆಚ್ ಪೆನ್ನು, ಪೇಷ್ಟೇಲ್ ಗಳು, ಜಲ ವರ್ಣಗಳು, ಬಣ್ಣದ ಪೆನ್ಸಿಲ್ಗಳು ಎಲ್ಲವನ್ನು ಉಪಯೋಗಿಸುತ್ತಿದ್ದೆ. ಹೈ ಸ್ಕೂಲ್ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ಅದೇಕೋ ಬಣ್ಣಗಳ ಸಹವಾಸವೇ ದೂರವಾಗಿ ಹೋಯಿತು. ಕೇವಲ ಕಪ್ಪು-ಬಿಳಿಗಳ ಮಧ್ಯೆ ಮನಸ್ಸು ಉಳಿದು ಹೋಯಿತು. ಪೆನ್ಸಿಲ್ ಸ್ಕೆಚಿಂಗ್ ಹಾಗು ಶೇಡಿಂಗ್ ಒಂದು ರೀತಿಯಲ್ಲಿ ಸುಲಭವೂ ಹೌದು ಒಂದು ರೀತಿಯಲ್ಲಿ ಕಷ್ಟವೂ ಹೌದು. ವ್ಯಕ್ತಪಡಿಸಬೇಕಾದ ಚಿತ್ರವನ್ನು ಕೇವಲ ಕಪ್ಪು ಬಿಳುಪಿನಲ್ಲೇ ಹೇಳುವುದರಿಂದ ಬಣ್ಣಗಳ ಆಯ್ಕೆ ಹಾಗು ವಿನ್ಯಾಸಗಳ ತಲೆ ನೋವು ಇರುವುದಿಲ್ಲ ಸ್ಕೆಚಿಂಗ್ನಲ್ಲಿ. ಆದರೆ ಕೇವಲ ಎರಡೇ ಬಣ್ಣಗಳಲ್ಲಿ ಚಿತ್ರದ ಆಳ, ಸೂಕ್ಷ್ಮತೆ, ಹಾಗು ಭಾವನೆಗಳನ್ನು ತೋರಿಸುವುದೂ ತ್ರಾಸದಾಯಕವೇ. ಆದ್ದರಿಂದ ಯಾರಾದರೂ ಕೇಳಿದರೆ ಸ್ಕೆಚಿಂಗ್ ಕಷ್ಟವೋ ಸುಲಭವೋ ಎಂದು ಈಗಲೂ ಹೇಳಲಾರೆ.

ಕೆಲವು ತಿಂಗಳುಗಳ ಮಧ್ಯೆ ಹಲವಾರು ಗೆಳೆಯರು ನೀನು ಪೇಂಟಿಂಗ್ ಏಕೆ ಮಾಡುವುದಿಲ್ಲ ಎಂದು ಕೇಳಿದ್ದರು. ಅವರೆಲ್ಲರಿಗೂ ಒಂದು ಸಮಜಾಯಿಷಿಯ ಉತ್ತರ ಕೊಟ್ಟೆನಾದರೂ, ನನ್ನನ್ನೇ ನಾನು ಕೇಳಿಕೊಂಡಾಗ ಉತ್ತರ ನನ್ನಲ್ಲೂ ಇರಲಿಲ್ಲ. ಅದರ ಬಗ್ಗೆ ಜಾಸ್ತಿ ಯೋಚಿಸಲೂ ಇಲ್ಲ ಎನ್ನಿ. ನಿನ್ನೆ ಸುಮ್ಮನೆ ಕುಳಿತಿದ್ದಾಗ ಒಂದು ಯೋಚನೆ ಬಂದಿತು, ಯಾಕೆ ಒಂದು ವರ್ಣಚಿತ್ರ ರಚಿಸಬಾರದು ಎಂದು. ಆಗ ಮೂಡಿದ್ದೇ ಈ ಕೆಳಗಿನ ಚಿತ್ರ. ಇದನ್ನು ಒಂದು ರಫ್ ವರ್ಕ್ ಎನ್ನಬಹುದು. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ. ಈ ಚಿತ್ರ ರಚನೆಗೆ ಸ್ಕೆಚ್ ಪೆನ್, ಕ್ರೆಯಾನ್ಸ್, ಕಲ್ಲಿದ್ದಲು, ಹಾಗು ಪೆನ್ಸಿಲ್ ಬಳಸಿದ್ದೇನೆ. ವರ್ಣ ಚಿತ್ರ ಬಿಡಿಸಿದೆನೆಂದು ಮುಂದೆ ನನ್ನಿಂದ ವರ್ಣಚಿತ್ರಗಳನ್ನೇ ನಿರೀಕ್ಷಿಸಬೇಡಿ... ನನಗೆ ಈಗಲೂ ಕಪ್ಪು-ಬಿಳುಪಿನ ನಡುವಿನ ಆಟವೇ ಪ್ರಿಯವೆನಿಸುತ್ತಿದೆ. ವರ್ಣ ಚಿತ್ರಗಳನ್ನು ಬಿಡಿಸಿದರೂ ನಿಮ್ಮ ಮುಂದೆ ಇರಿಸುವೆ.





Monday, November 1, 2010

ಬಾಡಿ ಲಾಂಗ್ವೇಜ್

ಬಹಳ ಹಿಂದೆ ಬಿಡಿಸಿದ ಚಿತ್ರವಿದು. ಇದನ್ನು ಪೆನ್ಸಿಲ್ ಬದಲಾಗಿ ಚಾರ್ಕೋಲ್ ಉಪಯೋಗಿಸಿ ಬಿಡಿಸಿದ್ದು. ಹೇಗಿದೆ ಹೇಳಿ :) ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ...




Friday, October 22, 2010

ಮುಪ್ಪು



ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಾ ಕೂತಿದ್ದಾಗ ಈ ಕೆಳಗಿನ ಚಿತ್ರ ಕಂಡಿತ್ತು. ಸ್ಕೆಚಿಂಗ್ ಮಾಡಲು ಹೇಳಿ ಮಾಡಿಸಿದಂತ ಈ ಚಿತ್ರವನ್ನು ಬಿಡಿಸಬೇಕೆಂದು ಬಹಳಾ ದಿನಗಳಿಂದ ಕಾಯುತ್ತಿದ್ದೆ. ಆದರೆ ಮಹೂರ್ತ ಕೂಡಿಬಂದದ್ದು ಎರಡು ದಿನಗಳ ಹಿಂದೆ. ಮುಪ್ಪಿನ ಅಷ್ಟೂ ನೋವು ಹಾಗು ನಿಗೂಢಗಳನ್ನು ತನ್ನ ಕಣ್ಣಲ್ಲೇ ಹಿಡಿದು ಇಟ್ಟಿರುವಂತಿರುವ ಈ ಅಜ್ಜನ ಕಂಗಳು ಇನ್ನೂ ಕಾಡುತ್ತಿವೆ. ಆದರೆ ಈ ಚಿತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವಾಗಿಲ್ಲ. ಎಲ್ಲ ಮುಗಿದು ಎದ್ದಾಗಲೂ ಇನ್ನೂ ಚನ್ನಾಗಿ ರಚಿಸಬಹುದಿತ್ತೇನೋ ಅನ್ನಿಸಿತ್ತು. ಮುಂದೆ ಎಂದಾದರೂ ಇನ್ನೊಮ್ಮೆ ಪ್ರಯತ್ನಿಸುವೆ..


( ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ )

Thursday, October 14, 2010

ಗೋಕರ್ಣದಲ್ಲೊಂದು ಬೆಳಗು...

ಒಂಟಿ ದೋಣಿಯೊಂದು ತೇಲುತಿಹುದು
ಒತ್ತಿ ಬರುವ ತೆರೆಗಳ ಜೊತೆ ಹೋರಾಡುತ್ತಾ
ಕಪ್ಪೆ ಚಿಪ್ಪುಗಳ ಹೆಕ್ಕಿ ತನ್ನ ಲಂಗದ ಜೇಬೊಳಗೆ ಸೇರಿಸುತಿಹಳು
ಬಂಗಾರ ಬಣ್ಣದ ಕೂದಲ ಪುಟ್ಟ ಹುಡುಗಿಯೊಬ್ಬಳು

ಮಣಿ ಸರಗಳೆಲ್ಲಾ ಸಿದ್ಧವಾಗುತಿವೆ ಧೂಳನ್ನು ಕೊಡವಿಕೊಂಡು
ತಮ್ಮನ್ನು ಕೊಳ್ಳಲು ಬರುವ ಗಿರಾಕಿಗಳ ನಿರೀಕ್ಷೆಯಲಿ
ಜೊತೆಯಲಿ ಪಂಡಿತರ ಮನೆ ಬೇಲಿಯ ದಾಸವಾಳಗಳು
ಕಾಯುತಿವೆ ದೇವರ ಸನ್ನಿಧಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳಲು

ಕಡಲನ್ನು ಮೊದಲ ಬಾರಿ ಕಾಣುತಿಹ ಬಯಲುಸೀಮೆಯ ಹುಡುಗರು
ಹೊರಟಿಹರು ಎದುರಿಸಲು ಭೋರ್ಗರೆವ ಅಗಾಧ ಸಾಗರವನ್ನು
ಕಡಲ ತಟದ ಗೂಡಂಗಡಿಯಲಿ ಹಬೆಯಾಡುತಿಹುದು ಕಾಫಿಯು
ಏಳಲೊಲ್ಲದು ಮುದುಡಿ ಮರಳ ಮೇಲೆ ಮಲಗಿಹ ಬೆಕ್ಕೊಂದು

ಬೀದಿ ದನವೊಂದು ನಿರುಪಾಯವಾಗಿ ನಿಂತಿಹುದು
ಕಾಮತರ ಹೋಟೆಲಿನಿಂದ ಏಳುತ್ತಿರುವ ದೋಸೆಯ ಘಮಕ್ಕೆ ಸೋತು
ಊರಿನ ಸಂದುಗೊಂದುಗಳೆಲ್ಲ ಬಂಗಾರದ ಬಣ್ಣ ಪಡೆಯುತಿರಲು
ಉದಯಿಸುತಿಹನು ಗೋಕರ್ಣದಲಿ ಆದಿತ್ಯನು....

(ಈ ವರ್ಷದ ಆದಿಯಲ್ಲಿ ಪ್ರವಾಸಕ್ಕೆ ಹೋದಾಗ ಗೋಕರ್ಣದಲ್ಲಿ ಉಳಿಯುವ ಅವಕಾಶ ಒದಗಿತ್ತು. ಒಂದು ಊರಾಗಿ ಗೋಕರ್ಣದಷ್ಟು ಬೇರಾವ ಊರು ನನ್ನ ಸೆಳೆದಿರಲಿಲ್ಲ. ಸುಮ್ಮನೆ ಅಲೆಮಾರಿಯಂತೆ ತಿರುಗಿದ ಕಡಲ ತೀರಗಳು, ರಾತ್ರಿಯಲ್ಲಿ ಜಗಮಗಿಸಿದ ಅಂಗಡಿಗಳು, ಕಡಲನ್ನೇ ಜಯಿಸಲು ಹೊರಟ ನಮ್ಮನ್ನು ತುಂಟ ಮಕ್ಕಳನ್ನು ಓಡಿಸಲು ಬಂದಂತೆ ಬಂದ ಕಡಲ ತೆರೆಗಳು, ಥಟ್ಟನೆ ನನ್ನ ಊರನ್ನು ನೆನಪಿಸಿಬಿಟ್ಟ ಬೀದಿಗಳು, ಬಿಳಿಯರು ಹಾಗು ಅವರ ವೇಷ ಭೂಷಣಗಳು, ಕಟ್ಟಿದ ಉಸುಕಿನ ಕೋಟೆಗಳು, ಕಪ್ಪೆಚಿಪ್ಪುಗಳು... ಹೀಗೆ ಇನ್ನು ಹಲವಾರು ಮಧುರ ನೆನಪುಗಳು ಸೇರಿ ನನ್ನನ್ನು ಈಗಲೂ ಗೋಕರ್ಣದ ಆಕರ್ಷಣೆಗೆ ತಳ್ಳುತ್ತವೆ. ಹೆಸರು ಕೇಳಿದೊಡನೆ ರೋಮಾಂಚನಗೊಳಿಸುವ ಗೋಕರ್ಣ ಹಾಗು ಈ ನೆನಪುಗಳನ್ನು ಸುಂದರಗೊಳಿಸಿದ ನನ್ನೆಲ್ಲ ಗೆಳೆಯ-ಗೆಳತಿಯರಿಗೆ ಈ ಕವನವನ್ನು ಅರ್ಪಿಸುತ್ತೇನೆ).