Friday, April 17, 2009

ಓಡಿ ಹೋದವನ ಒಂದು ಪತ್ರ.....



ನೀವು ಈ ಪತ್ರ ಓದುತ್ತಿರುವ ಹೊತ್ತಿಗೆ ನಾನು ಎಲ್ಲಿ ಇರುತ್ತೇನೋ ನನಗೆ ಗೊತ್ತಿಲ್ಲ. ಈ ಪತ್ರ ಬರೆಯುವ ಅಗತ್ಯತೆ ಇರಲಿಲ್ಲ. ನನ್ನ ಮನದಲ್ಲಿ ಇದ್ದುದನ್ನು ಬಾಯಿಮಾತಲ್ಲಿ ಹೇಳಲಾಗದೆ ಅಕ್ಷರಗಳ ಸಹಾಯ ಪಡೆಯುತ್ತಿದ್ದೇನೆ. ನಾನು ಹೀಗೆ ಓಡಿಹೊಗುತ್ತಿರಲು ಈಗ ಜಿನುಗುತ್ತಿರುವ ಮಳೆಯೂ ಕಾರಣವಾಗಿರಬಹುದು. ಈ ಮಳೆಯೇ ಹೀಗೆ, ಎಲೆಯ ಮೇಲಿನ ಧೂಳನ್ನೆಲ್ಲ ತೊಳೆದಂತೆ ನೆನಪಿನ ಗಂಟನ್ನು ಸಡಲಿಸುತ್ತದೆ... ಇದೊಂದು ನೆಪವಷ್ಟೇ.





ಓಡಿ ಹೋಗುತ್ತಿರಲು ಕಾರಣ ಒಂದು ಬೇಕಲ್ಲವೇ... ಹೆದರಬೇಡಿ, ವೈರಾಗ್ಯ ಅಂತೂ ಬಂದಿಲ್ಲ. ಹ್ಞಾ! ತಾತ್ಕಾಲಿಕ ವೈರಾಗ್ಯ ಇದ್ದರೂ ಇರಬಹುದು. ಬೇಸತ್ತಿದ್ದೇನೆ ಈ ಜೀವನದಿಂದ. ಅದೇ ಅರ್ಥೈಸಿಕೊಳ್ಳಲು ಆಗದ ಜನರು, ಒಗ್ಗದ ಅವರ ತೋರಿಕೆಯ ಮಾತುಗಳು. ಇಲ್ಲಿ ನಂಬಿಕೆ, ಪ್ರೀತಿ, ಗೆಳೆತನ, ಆತ್ಮೀಯತೆ ಎಲ್ಲ ತೋರಿಕೆಗೆ ಮಾತ್ರ. ಬಹುಶ ಒತ್ತಡ ಹಾಗು ಪರಿಸ್ಥಿತಿಗಳು ಜನರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರಬಹುದು. ಹಾಗೆ ಆಗಿದ್ದೇ ಆದರೆ ನಾವು ಮಾನವರು ಎಂದು ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ?? ನನಗೇ ಯೋಗ್ಯತೆ ಇಲ್ಲದೆ ಇರಬಹುದು ಈ ಸಮಾಜದಲ್ಲಿ ಜೀವಿಸಲು.. ನಾನು ಕಲ್ಪಿಸಿಕೊಂಡಿರುವ ಜೀವನದ ಅರ್ಥವೇ ತಪ್ಪಿದ್ದರೂ ಇರಬಹುದು. ನನಗೇ ಏಕಾಂತದ ಅಗತ್ಯವಿದೆ ಎನ್ನಿಸತೊಡಗಿದೆ. ಇದು ಇಡಿ ಜೀವನಕ್ಕೂ ಅನ್ವಯಿಸುವುದಿಲ್ಲ, ಕೇವಲ ದಿನಗಳ ಮಟ್ಟಿಗೆ. ನನ್ನನ್ನು ನಾನು ಅರಿಯಲು ಅಥವಾ ಈ ಜಗತ್ತಿಗೆ ತಕ್ಕಂತೆ ಬದಲಿಸಿಕೊಳ್ಳುವವರೆಗೆ ನಾನು ಒಂಟಿಯಾಗಿರಬೇಕಿದೆ.





ಕಣ್ಣು ಮುಚ್ಚಿಕೊಂಡು ಕರ್ಣಾಟಕದ ಭೂಪಟದ ಮೇಲೆ ಬೆರಳು ಆಡಿಸುತ್ತಿರುವೆ, ಯಾವ ಜಾಗದಲ್ಲಿ ಬೆರಳು ನಿಲ್ಲುತ್ತದೆಯೋ ಅಲ್ಲಿಗೆ ನನ್ನ ಪಯಣ. ನನಗೇ ಆ ಊರು ಸುಂದರವಾಗಿರಬೇಕೆಂದು ಏನು ಇಲ್ಲ, ಇಲ್ಲಿಂದ ಮುಕ್ತಿ ಬೇಕಾಗಿದೆ ಅಷ್ಟೇ. ಭಯ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಿಂತಿರುಗುವೆ. ನನ್ನದೇ ಆದ ಮನಸ್ಸೊಂದಿದೆ, ಅದಕ್ಕೆ ಆದ ಅಗತ್ಯತೆಗಳಿವೆ. ನಿಮ್ಮೆಲ್ಲರ ಮಾತನ್ನೂ ಕೇಳಿದಂತೆ ನನ್ನ ಮನಸ್ಸಿನ ಮಾತನ್ನೂ ಕೇಳಬೇಕಿದೆ. ಬಿಟ್ಟು ಹೋದ ನಿರೀಕ್ಷೆಗಳಿಗೆ ನಾನೇ ಜವಾಬ್ದಾರ ಎಂಬ ಅರಿವು ನನಗಿದೆ.





ನಡೆದ ದಾರಿಯ ಮೇಲೆ ಹೋದ ಹೆಜ್ಜೆಯ ಸಾಲು
ದೂರ ಬೆಟ್ಟದ ಮೇಲೆ ಬೆಳಕುಗಳ ಬೀಡು
ತುಂಬು ಹೊಳೆಯಂತೆ ಗಂಭೀರವಾಗಿ ಹರಿಯುತ್ತಲೇ ಇದೆ
ಒಳಗೆ ಎಂದೂ ಮುಗಿಯದ ಹಾಡು
ಜಿ.ಎಸ್. ಶಿವರುದ್ರಪ್ಪ

ಇತಿ,
ನಿಮ್ಮ ಪ್ರೀತಿಯ.....

Tuesday, March 31, 2009

ಕತೆ ಎನ್ನಿಸಿಕೊಳ್ಳಲು ಅಯೋಗ್ಯವಾದ ಕತೆಗಳು......

ಹುಬ್ಬಳ್ಳಿ ಇನ್ನೇನು ಬಂದೆ ಬಿಟ್ಟಿತು... ರೈಲು ಇಳಿಯುವ ತಯಾರಿಯಲ್ಲಿದ್ದ ಅವನನ್ನು ಅವಳು ಕೇಳಿದಳು "ನಿಮ್ಮ ಕಾಂಟಾಕ್ಟ್ ನಂಬರ್ ಕೊಡುವಿರಾ?" ಧ್ವನಿಯಲ್ಲಿ ಸ್ವಲ್ಪ ಭಯ ಸ್ವಲ್ಪ ಕಾತರತೆ ಇತ್ತು. ಇವಳನ್ನು ನೋಡಿ ನಸುನಗೆಯೊಂದನ್ನು ನಕ್ಕ ಅವನು. "ಈಗಲೇ ನಾಲ್ಕು ಗಂಟೆಗಳ ನೆನಪುಗಳ ಋಣವನ್ನು ಹೊತ್ತಿದ್ದೇನೆ ನಾನು, ಮತ್ತೂ ಋಣವನ್ನು ಹೊರಿಸಬೇಡಿ ನನ್ನ ಮೇಲೆ. ಈ ಬಂಧಕ್ಕೆ ಹೆಸರಿನ ಹಂಗು ಬೇಡ. ಹಣೆಯಲ್ಲಿ ಬರೆದಿದ್ದರೆ ಇನ್ನೊಮ್ಮೆ ಭೇಟಿಯಾಗುವ" ಎಂದು ಕಣ್ಣು ಮಿಟುಕಿಸಿ ರೈಲನ್ನು ಇಳಿದೆ ಬಿಟ್ಟ. ತಾನು ಸೋತೆನೋ ಗೆದ್ದೇನೋ ಎಂದು ತಿಳಿಯದೆ ನಿಟ್ಟುಸಿರು ಬಿಟ್ಟು ಇವಳೂ ಬ್ಯಾಗ್ ಇಳಿಸತೊಡಗಿದಳು. ಹೀಗೆ ಶುರುವಾಗುವ ಮೊದಲೇ ಪ್ರೇಮ ಕತೆಯೊಂದು ಕೊನೆಗೊಂಡಿತು....


ಪ್ರತೀ ಬಾರಿಯೂ ಊರಿಗೆ ಹೋಗುವಾಗ ಹಾದಿ ಬದಿಯಲ್ಲಿದ್ದ ಆ ಮನೆಯ ಕಟ್ಟೆಯ ಮೇಲೆ ಇರುತ್ತಿದ್ದ ಅವಳು ಕುತೂಹಲ ಹುಟ್ಟಿಸುತ್ತಿದ್ದಳು. ಅವಳ ಹಾವ ಭಾವಗಳು ಆಶ್ಚರ್ಯ ತರುತ್ತಿದ್ದವು.. ಬಹುಶ ನನಗೆ ಆರೆಂಟು ವರ್ಷ ಆದಗಲಿಂದ ನೋಡುತ್ತಿದ್ದೆ ಅವಳನ್ನು. ಅವಳು ಬುದ್ದಿಮಾಂದ್ಯ ಎಂದು ತಿಳಿದದ್ದು ನಾನು ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೇಲೆಯೇ.. ಮೊನ್ನೆ ಊರಿಗೆ ಹೋಗುವಾಗ ಎಂದಿನಂತೆ ಆ ಮನೆಯತ್ತ ಕಣ್ಣು ಹರಿಯಿತು.. ಆದರೆ ಅವಳು ಅಲ್ಲಿ ಇರಲಿಲ್ಲ.. ಅಲ್ಲಿಗೆ ನನ್ನ ಕುತೂಹಲಕ್ಕೂ ತೆರೆ ಬಿದ್ದಿತ್ತು.



"ಅಪ್ಪನನ್ನು ಕಳೆದುಕೊಂಡು ಒಂದು ತಿಂಗಳೂ ಆಗಲಿಲ್ಲ ನೋಡಿ ಹೇಗೆ ಬಾಯ್ತುಂಬ ನಗುತ್ತಿದ್ದಾನೆ" ಎಂದ ಜನಕ್ಕೆ, ಪ್ರತೀ ರಾತ್ರಿ ಅವನ ತಲೆದಿಂಬು ಕಣ್ಣೀರಿನಿಂದ ಒದ್ದೆ ಆಗುತ್ತಿದ್ದದ್ದು ತಿಳಿಯಲೇ ಇಲ್ಲ.


"ಸಾಫ್ಟ್ ವೇರ್ ಬಿದ್ದೋಯ್ತು ಬಿಡ್ರಿ, ಇಂಜಿನಿಯರಿಂಗ್ ಮಾಡೋದೇ ವೇಸ್ಟ್" ಎಂದು ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಹೇಳಿದವರಿಗೆಲ್ಲ, ಅವರ ಮಗನೋ ಮಗಳೋ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ರಿಸೆಶನ್ ಆದಾಗಲೇ ಗೊತ್ತಾಗಿದ್ದು "ಆತಂಕ" ಎಂದರೇನು ಎಂದು.

Sunday, March 15, 2009

ಕೃಷ್ಣ




ಕೃಷ್ಣನ ಚಿತ್ರವನ್ನು ಪೂರ್ಣಗೊಳಿಸಿ ಮತ್ತೆ ಅಪ್ ಲೋಡ್ ಮಾಡು ಅಂದ ಎಲ್ಲ ಬ್ಲಾಗ್ ಮಿತ್ರರಿಗೊಸ್ಕರ :)

Sunday, March 8, 2009

ಸ್ತ್ರೀ ಅಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಆಕೆಯ ಕೈಯ್ಯಷ್ಟು ಮೃದುವಾದ ಕೈ ಮತ್ತೊಂದಿಲ್ಲ. ಅವಳು ಪ್ರೀತಿಯಿಂದ ತಲೆಯ ಮೇಲೆ ಕೈ ಸವರುತ್ತಾಳೆ. ಜ್ವರ ಬಂದಾಗ ಅವಳ ಕೈ ಹಣೆ ಮುಟ್ಟಿದರೆ ಆ ಸ್ಪರ್ಶದಿಂದಲೇ ಅರ್ಧ ಜ್ವರ ಮಾಯವಾಗುತ್ತದೆ. ಆ ಮೃದು ಕೈಯ್ಯ ಹಿಂದೆ ಕಷ್ಟಗಳ ದೊಡ್ಡ ಕಥೆಯೇ ಇದೆ. ಕೆಲಸ ಮಾಡಿ ಮಾಡಿಯೇ ಕೈ ಸವೆದು ಇಷ್ಟು ಮ್ರುದುವಾಗಿದೆಯೇ ಎಂದು ಕೆಲವೊಮ್ಮೆ ನನಗೆ ಅನ್ನಿಸಿದ್ದೂ ಇದೆ. ಈ ವಯಸ್ಸಿನಲ್ಲೂ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಾಳೆ. ಹಾಗೆ ಪ್ರೀತಿಯೂ ಕೂಡ, ಸಾಗರದಷ್ಟು ಆಳ, ವಿಶಾಲ. ಮೊಮ್ಮಗ ಫೋನ್ ಮಾಡಿದಾಗ ಮಾತನಾಡಿಸಿದರೆ ಅದನ್ನೇ ನಾಲ್ಕಾರು ದಿನ ನಾಲ್ಕಾರು ಜನಕ್ಕೆ ಹೇಳಿಕೊಂಡು ಸಂಭ್ರಮಿಸುವಷ್ಟು ಮುಗ್ಧೆ ಈಕೆ. ಆಕೆಗೆ ಆಕೆಯ ಕುಟುಂಬವೇ ಸರ್ವಸ್ವ, ಆಕೆಯ ಊರೇ ಪ್ರಪಂಚ. ಇಷ್ಟೊಂದು ಪ್ರೀತಿಯನ್ನು ಯಾವುದೇ ಅಪೇಕ್ಷೆ ಇಲ್ಲದೆ ನನಗೆ ನೀಡಿದ ಈಕೆ ನನ್ನ ಅಜ್ಜಿ.


ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಈಕೆ ನನ್ನ ಸರ್ವಸ್ವ. ಈಕೆಯನ್ನು ಬಿಟ್ಟು ನಾನಿಲ್ಲ. ನನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನೂ ಬಲ್ಲವಳು ಇವಳು. ನನ್ನ ಹೃದಯದ ತಳಮಳಗಳನ್ನು ಕಣ್ಣಲ್ಲಿ ಕಣ್ಣಿಟ್ಟು ತಿಳಿದುಕೊಳ್ಳಬಲ್ಲವಳು. ನನ್ನ ಕಣ್ಣು ತುಂಬಿದರೆ ಈಕೆ ಅಳುವಳು. ನನ್ನ ಮುಖದ ಮಂದಹಾಸ ಈಕೆಯ ಬಾಯ್ತುಂಬ ನಗೆಗೆ ಕಾರಣವಾಗುತ್ತದೆ. ನನ್ನ ಮನಸ್ಸನ್ನು ಸಂಪೂರ್ಣವಾಗಿ ಅರಿತವಳು. ನನ್ನಲ್ಲಿ ಏನೇನು ಒಳ್ಳೆಯ ಗುಣಗಳು ಇವೆಯೋ ಅದಕ್ಕೆಲ್ಲ ಕಾರಣ ಇವಳೇ. ಈಕೆಯ ಋಣವನ್ನು ನಾನೆಂದೂ ತೀರಿಸಲು ಆಗದು. ಈಕೆ ನನ್ನನ್ನು ಹೊತ್ತು, ಹೆತ್ತು, ಎತ್ತಾಡಿಸಿ, ಮುದ್ದಾಡಿಸಿ, ಇಷ್ಟೆತ್ತರಕ್ಕೆ ಬೆಳೆಸಿ ನಿಲ್ಲಿಸಿದ ನನ್ನ ಅಮ್ಮ.


ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆ ನನ್ನೊಂದಿಗೆ ಭಯಂಕರ ಜಗಳ ಮಾಡುತ್ತಾಳೆ. ಜಗಳ ಮುಗಿದು ಮುನಿಸಿಕೊಂಡಾಗ ಕೈ ಹಿಡಿದು ಕೇಳುತ್ತಾಳೆ "ಹೇ ಸಾರಿ ಕಣೋ, ಇನ್ನೊದು ಸಲ ಜಗಳ ಮಾಡಲ್ಲ." ಮನೆಗೆ ಹೋದರೆ ನನಗೋಸ್ಕರ ಸಿಹಿ ಮಾಡುತ್ತಾಳೆ. ರಾತ್ರಿ ಒಂದರ ವರೆಗೆ ಹರಟುವಷ್ಟು ವಿಷಯಗಳಿರುತ್ತವೆ ಇವಳಿಗೆ. "ಏ ಆ ಹುಡುಗಿಗೆ ಲೈನ್ ಹೊಡೆಯೋ, ಚನ್ನಾಗಿದ್ದಾಳೆ" "ಇವಳು ಬೇಡ, ನಿಂಗೆ ಸರಿಯಾದ ಜೋಡಿ ಅಲ್ಲ ಬಿಡು" ಎಂದೆಲ್ಲ ತಮಾಷೆ ಮಾಡುತ್ತಾಳೆ. ಏನೂ ಕೆಲಸವಿಲ್ಲದಿದ್ದರೆ ಬಂದು ಮೈಗೆ ಒರಗುತ್ತಾಳೆ, ತೊಡೆಯ ಮೇಲೆ ತಲೆಯಿಟ್ಟು ನಿದ್ದೆ ಹೋಗುತ್ತಾಳೆ..... ನನ್ನ ತಂಗಿ ಈಕೆ.


ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?


ಈಕೆಯ ಹೃದಯ ಆಗಷ್ಟೆ ಹುಟ್ಟಿದ ಮಗುವಿನಷ್ಟು ಪರಿಶುದ್ದ. ಕಪಟವನ್ನು ಅರಿಯದವಳೀಕೆ. ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹಾಗೆ ಹೇಳುವಳು. ನಾನು ಬೇಸರಗೊಂಡಅಗಲೆಲ್ಲ ಹುರಿದುಂಬಿಸುವಳು. ಪ್ರತಿಯೊಂದು ಮಾತನ್ನೂ ನಗು ತುಂಬಿಕೊಂಡು ಆಡುವಳು. ಇವಳು ಉತ್ಸಾಹದ ಚಿಲುಮೆ. ಹೊಂದಿಕೊಂಡು ಹೋಗುವ ಸರಳತೆಯಿದೆ ಇವಳಿಗೆ. ಸ್ವಚ್ಛ ಮನಸ್ಸಿಂದ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ ಈಕೆ. ಯಾರಾದರು ನೋಯಿಸಿದರೆ ನನ್ನಲ್ಲಿ ಬಂದು ಕಣ್ಣೀರು ಹರಿಸಿ ನೋವನ್ನು ಕಳೆದುಕೊಳ್ಳುವವಳು. ಇವಳು ನನ್ನ ಗೆಳತಿ.



(ಕವಿ ಜಿ.ಎಸ್. ಶಿವರುದ್ರಪ್ಪ ಅವರ ಈ ಕವಿತೆಯನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದಾಗ ನನ್ನಲ್ಲಿ ಮೂಡಿದ ಭಾವನೆಗಳ ಅಕ್ಷರ ರೂಪ ಈ ಬರಹ. ಸುಮಾರು ಎರಡು ವರ್ಷಗಳ ಹಿಂದೆ ಬರೆದಿದ್ದು. ಇದು ನಾನು ಬರೆದ ಮೊದಲ ಬರಹವೂ ಹೌದು. ಸಂಭಂದಗಳಿಗೆ ಹೆಸರು ಇರಲೇ ಬೇಕೆಂದೇನಿಲ್ಲ. ಎಷ್ಟೋ ಸಂಭಂದವಿಲ್ಲದ ಮಹಿಳೆಯರ ಎಷ್ಟೋ ಸಹಾಯಗಳನ್ನು, ಅವರ ಪ್ರಭಾವಗಳನ್ನು ಮರೆಯಲು ಸಾಧ್ಯವಿಲ್ಲ. ಈ ಮೇಲೆ ಬಂದ ವ್ಯಕ್ತಿಗಳು ಕೇವಲ ವ್ಯಕ್ತಿಗಳಾಗಿರದೆ ನನ್ನ ಜೀವನ, ವ್ಯಕ್ತಿತ್ವ, ನಡೆ, ನುಡಿ ರೂಪಿಸಿದ ಶಕ್ತಿಗಳಾಗಿದ್ದಾರೆ. ನನ್ನ ಜೀವನದ ಎಲ್ಲ ಸಂತೋಷಕ್ಕೆ ಕಾರಣರಾದ, ಹೃದಯ ತುಂಬಿ ಪ್ರೀತಿ ನೀಡಿದ, ಸೋತು ಕುಳಿತಾಗ ಉತ್ಸಾಹ ತುಂಬಿದ, ಮಮತೆಯ ಮಳೆಗೈದ, ನಾನು ಮಾಡಿದ ತಪ್ಪುಗಳನ್ನೆಲ್ಲ ಕ್ಷಮಿಸಿದ ನನ್ನ ಅಮ್ಮ, ಅಜ್ಜಿ, ಅತ್ತೆಯಂದಿರು, ಅತ್ತಿಗೆಯಂದಿರು, ಅಕ್ಕಂದಿರು, ತಂಗಿಯಂದಿರು, ಸ್ನೇಹಿತೆಯರು, ಹಾಗು ಹೆಸರೇ ಗೊತ್ತಿಲ್ಲದ ಅನೇಕ ಅಜ್ಞಾತ ಮಹಿಳೆಯರೆಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮ ಋಣವನ್ನು ಎಂದು ತೀರಿಸಲಾರೆನು).

Saturday, January 3, 2009

ಒಂದಿಷ್ಟು ಚಿತ್ರಗಳು










ನಾನು ಇತ್ತೇಚೆಗೆ ಬಿಡಿಸಿದ ಚಿತ್ರಗಳು ಇವು. ಕೃಷ್ಣನ ಚಿತ್ರ ಅಪೂರ್ಣವಾಗಿದೆ. ಪರೀಕ್ಷೆಯ ಸಮಯದಲ್ಲಿ ಹಠಾತ್ತನೆ ಚಿತ್ರಕಲೆ, ಸಾಹಿತ್ಯದ ಬಗ್ಗೆ ನನಗೆ ಆಸಕ್ತಿ ಮೂಡುತ್ತದೆ, ಹತ್ತಿಕ್ಕಲು ಪ್ರಯತ್ನ ಪಟ್ಟು ಸೋಲುತ್ತೇನೆ. ಆದ್ದರಿಂದ ಸಣ್ಣ ಸಣ್ಣ ಚಿತ್ರಗಳನ್ನು ಬಿಡಿಸಿ ಓದಿಗೂ ಆಸಕ್ತಿಗೂ ಸಮಾನ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಇವು.